ಮಂಗಳೂರು, ಎ. 22: ಉದ್ಯೋಗದ ಆಮಿಷ ಒಡ್ಡಿ ವಿದ್ಯಾರ್ಥಿಗಳಿಂದ ಹಣ ವಸೂಲಿ ಮಾಡಿರುವ ವ್ಯಕ್ತಿಯೋರ್ವ ದಿಢೀರ್ ನಾಪತ್ತೆಯಾಗಿರುವ ಘಟನೆ ಬಿಕರ್ನಕಟ್ಟೆಯಲ್ಲಿ ನಡೆದಿದೆ. ಕೇರಳ ಮೂಲದ ಸಂತೋಷ್ ಎಂಬಾತ ಬಿಕರ್ನಕಟ್ಟೆಯಲ್ಲಿ ವೃತ್ತಿ ಮಾರ್ಗದರ್ಶನ ನೀಡುವ ಬಗ್ಗೆ ನಕಲಿ ಸಂಸ್ಥೆಯೊಂದನ್ನು ಸ್ಥಾಪಿಸಿ ರಕ್ಷಣಾ ಮತ್ತು ರೈಲ್ವೆ ಇಲಾಖೆಯಲ್ಲಿ ಕೆಲಸ ಕೊಡಿಸುವ ಬಗ್ಗೆ ವಿದ್ಯಾರ್ಥಿಗಳಿಗೆ ಆಮಿಷ ಒಡ್ಡಿ ಹಣವನ್ನು ವಸೂಲಿ ಮಾಡಿದ್ದಾನೆಂದು ಆರೋಪಿಸಲಾಗಿದೆ.
ಇದಕ್ಕಾಗಿ ಸಂತೋಷ್ ತನ್ನ ನಕಲಿ ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ರಕ್ಷಣಾ ಮತ್ತು ರೈಲ್ವೆ ಇಲಾಖೆಯಲ್ಲಿ ಕೆಲಸ ಕೊಡಿಸಲು ತರಬೇತಿಯನ್ನೂ ನೀಡುತ್ತಿದ್ದನೆಂದು ಹೇಳಲಾಗಿದ್ದು, ಪ್ರಾರಂಭದಲ್ಲಿ ಉಚಿತ ತರಬೇತಿ ಎಂದು ಹೇಳಿದ್ದನಾದರೂ ಕ್ರಮೇಣ ವಿದ್ಯಾರ್ಥಿಗಳಿಂದ ವಸತಿ, ಊಟಕ್ಕೆ ಸಂಬಂಧಿಸಿ ಹಣವನ್ನು ಪಡೆದುಕೊಳ್ಳುತ್ತಿದ್ದ. ಅಲ್ಲದೆ, ತರಬೇತಿ ಪಡೆಯುತ್ತಿದ್ದ ವಿದ್ಯಾರ್ಥಿಗಳಿಗೆ ಕೆಲಸ ಕೊಡಿಸುವುದಾಗಿ ನಂಬಿಸಿ ಅವರಿಂದ 50 ಸಾವಿರ ರೂ.ನಿಂದ 1.5 ಲಕ್ಷ ರೂ.ವರೆಗೂ ವಸೂಲಿ ಮಾಡಿದ್ದಾನೆಂದು ವಂಚನೆಗೊಳಗಾಗಿರುವ ವಿದ್ಯಾರ್ಥಿಗಳು ಆರೋಪಿಸಿದ್ದಾರೆ.
ಆರೋಪಿ ಸಂತೋಷ್ನ ಈ ನಕಲಿ ಸಂಸ್ಥೆಗೆ ಈಗಾಗಲೇ ಉಡುಪಿ, ಪುತ್ತೂರು, ಬೆಳ್ತಂಗಡಿ, ವಿಜಯಪುರ, ಬಳ್ಳಾರಿ ಮತ್ತಿತರ ಕಡೆಗಳ ವಿದ್ಯಾರ್ಥಿಗಳು ಸೇರಿಕೊಂಡಿದ್ದು, ಸಂತೋಷ್ನ ನಡವಳಿಕೆಯಿಂದ ಅನುಮಾನಗೊಂಡ ವಿದ್ಯಾರ್ಥಿಗಳು ಇಂದು ಸಂಸ್ಥೆಯ ಎದುರು ಪ್ರತಿಭಟನೆ ನಡೆಸಿ ಹಣವನ್ನು ವಾಪಸು ನೀಡುವಂತೆ ಒತ್ತಾಯಿಸಿದ್ದಾರೆ. ಆದರೆ ಸಂಸ್ಥೆಗೆ ಬೀಗ ಹಾಕಲಾಗಿದ್ದು, ಆರೋಪಿ ಪರಾರಿಯಾಗಿದ್ದಾನೆ.
ಡಿಸಿಪಿ ಸಂತೋಷ್ ಬಾಬು ಸ್ಥಳಕ್ಕೆ ಭೇಟಿ ನೀಡಿದ್ದು, ಈ ನಕಲಿ ಸಂಸ್ಥೆಗೆ ಬೀಗ ಜಡಿಯಲಾಗಿದೆ. ಈ ಬಗ್ಗೆ ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.