ಮಂಗಳೂರು, ಎ.9: ರಾಜ್ಯ ಸರಕಾರದ ಮಹತ್ವಾಕಾಂಕ್ಷೆಯ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯು ಎ. 11ರಿಂದ 30ರವರೆಗೆ ನಡೆಯಲಿದ್ದು, ಅದನ್ನು ಯಶಸ್ವಿಯಾಗಿ ನಡೆಸುವ ನಿಟ್ಟಿನಲ್ಲಿ ಸಮೀಕ್ಷೆಯಲ್ಲಿ ಪಾಲ್ಗೊಳ್ಳುವ ಸರಕಾರಿ ಸಿಬ್ಬಂದಿಗೆ ಯಾವುದೇ ರೀತಿಯಲ್ಲಿ ವಿನಾಯಿತಿ ನೀಡಲಾಗುವುದಿಲ್ಲ. ಸಮೀಕ್ಷೆಯನ್ನು ತಾಳ್ಮೆ ಹಾಗೂ ಅತ್ಯಂತ ಸಮರ್ಪಕವಾಗಿ ನಡೆಸುವಂತೆ ಸ್ಪಷ್ಟಪಡಿಸಲಾಗಿದೆ ಎಂದು ದ.ಕ. ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂ ಸ್ಪಷ್ಟಪಡಿಸಿದ್ದಾರೆ.
ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಎ.ಬಿ.ಇಬ್ರಾಹೀಂ ಅಧ್ಯಕ್ಷತೆಯಲ್ಲಿ ಇಂದು ವಿವಿಧ ಸಮುದಾಯಗಳ ಮುಖಂಡರ ಸಭೆಯಲ್ಲಿ ಮಾತ ನಾಡಿದ ಅವರು, ಸಮೀಕ್ಷೆಯ 55 ಕಾಲಂಗಳಲ್ಲಿಯೂ ಕುಟುಂಬದ ಸದಸ್ಯರ ಪ್ರತ್ಯೇಕ ಮಾಹಿತಿಗಳನ್ನು ಸಂಗ್ರಹಿಸಲಾಗುತ್ತಿರುವುದರಿಂದ ಯಾವುದೇ ರೀತಿಯಲ್ಲಿ ಗೊಂದಲವಾಗದಂತೆ ಗಣತಿದಾರರು ಕ್ರಮ ವಹಿಸಬೇಕು ಎಂದು ಸೂಚಿಸಿದರು.
ಸಭೆಯಲ್ಲಿ ಇರ್ಷಾದ್ ಎಂಬವರು, ಗಣತಿದಾರರು ಪೆನ್ಸಿಲ್ನಲ್ಲಿ ಮಾಹಿತಿಯನ್ನು ನಮೂದಿಸಲು ಅವಕಾಶವಿದೆಯೇ ಎಂದು ಪ್ರಶ್ನಿಸಿದಾಗ, ಕಡ್ಡಾಯವಾಗಿ ಬಾಲ್ ಪೆನ್ನಿನಲ್ಲಿಯೇ ಮಾಹಿತಿಯನ್ನು ನಮೂದಿಸುವಂತೆ ಗಣತಿದಾರರಿಗೆ ಸೂಚಿಸಲಾಗುವುದು ಎಂದು ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ ಸ್ಪಷ್ಟಪಡಿಸಿದರು.
ಪಟ್ಟಿಯಲ್ಲಿ ರೋಮನ್ ಕೆಥೊಲಿಕ್ ಎಂಬುದಾಗಿ ಉಲ್ಲೇಖವಿಲ್ಲ ಎಂದು ಕ್ರೈಸ್ತ ಸಮುದಾಯದ ಸುಶೀಲ್ ನೊರೊನ್ಹಾ ಎಂಬವರು ಆಕ್ಷೇಪಿಸಿದರೆ, ಪಟ್ಟಿಯಲ್ಲಿ ‘ಮನ್ಸ’ ಎಂಬ ಪರಿಶಿಷ್ಟ ಪಂಗಡದ ಸಮುದಾಯದ ಬಗ್ಗೆ ಉಲ್ಲೇಖವಿಲ್ಲ. ಪರಿಶಿಷ್ಟ ಜಾತಿ ಎಂಬುದು ಒಂದು ಜಾತಿ ಅಲ್ಲ ಎಂದು ದಲಿತ ಸಮುದಾಯದ ನಾಯಕ ಡೀಕಯ್ಯ ಸಭೆಯ ಗಮನ ಸೆಳೆದರು.
ಕ್ರೈಸ್ತರು ಧರ್ಮವಿಭಾಗದಲ್ಲಿ ತಮ್ಮ ಧರ್ಮವನ್ನು ನಮೂದಿಸಿ ಆವರಣದಲ್ಲಿ ತಮ್ಮ ತಮ್ಮ ಸಮುದಾಯವನ್ನು ನಮೂದಿಸಲು ಅವಕಾಶವಿದೆ. ‘ಮನ್ಸ’ ಎಂಬ ಜಾತಿಯ ಉಲ್ಲೇಖವಿದೆ. ಪರಿಶಿಷ್ಟ ಜಾತಿ ಎಂದು ಯಾವುದೇ ಕೋಡ್ ಸಂಖ್ಯೆ ನೀಡಲಾಗಿಲ್ಲ. ಆಯಾಯ ಸಮುದಾಯವನ್ನೇ ವಿಭಾಗಿಸಲಾಗಿದೆ. ಪಟ್ಟಿಯಲ್ಲಿ ಇಲ್ಲದ ಜಾತಿಯ ಉಲ್ಲೇಖವಿದ್ದರೂ ಇತರ ಎಂಬಲ್ಲಿ ಅದನ್ನು ನಮೂದಿಸಿಕೊಳ್ಳಲು ಅವಕಾಶವಿದೆ ಎಂದು ಸಚಿವ ರೈ ಹೇಳಿದರು.
ಹಿಂದಿನ ಫಾರಂನಲ್ಲಿ ಇಲ್ಲದ ಹೊಸ ವಿಚಾರಗಳನ್ನು ಹೊಸ ಫಾರಂಗಳನ್ನು ಅಳವಡಿಸಲಾಗಿರುವುದರಿಂದ ಗೊಂದಲವಾಗಿದೆ ಎಂದು ಸಭೆಯ ಆರಂಭದಲ್ಲಿ ಹಿಂದುಳಿದ ಜಾತಿಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಜಯಾನಂದ ದೇವಾಡಿಗ ಉಲ್ಲೇಖಿಸಿದ ಹಿನ್ನೆಲೆಯಲ್ಲಿ ಹೊಸ ಫಾರಂಗಳನ್ನು ಸಭೆಯಲ್ಲಿ ಭಾಗವಹಿಸಿದ್ದವರಿಗೆ ನೀಡುವಂತೆ ಸಭೆಯಲ್ಲಿ ಉಪಸ್ಥಿತರಿದ್ದ ಸಚಿವ ಯು.ಟಿ. ಖಾದರ್ರವರು ಅಧಿಕಾರಿಗಳಿಗೆ ಸೂಚಿಸಿದರು.
ಪ್ರತಿಯೊಬ್ಬ ಸದಸ್ಯರಿಂದಲೂ ವೈಯಕ್ತಿಕ ಮಾಹಿತಿ : ಒಂದೆರಡು ದಿನದ ಮಗು (ಇನ್ನೂ ಹೆಸರಿಡದ)ವನ್ನೂ ಸಮೀಕ್ಷಾ ಪಟ್ಟಿಯಲ್ಲಿ ಕುಟುಂಬದ ಸದಸ್ಯರಾಗಿ ಸೇರ್ಪಡೆಗೊಳಿಸಲು ಅವಕಾಶ ಕಲ್ಪಿಸಲಾಗಿದೆ. ಹೆಸರಿನಲ್ಲಿ ಶಿಶು ಎಂದು ನಮೂದಿಸಲಾಗುತ್ತದೆ. ವಿದೇಶದಲ್ಲಿ ಉದ್ಯೋಗದಲ್ಲಿದ್ದರೂ, ಬಾಡಿಗೆ ಮನೆಯಲ್ಲಿದ್ದರೂ ಪಡಿತರ ಚೀಟಿಯಲ್ಲಿ ಹೆಸರಿದ್ದಲ್ಲಿ ಅವರನ್ನು ಕುಟುಂಬದ ಸದಸ್ಯರ ಪಟ್ಟಿಯಲ್ಲಿ ಸೇರಿಸಲಾಗುತ್ತದೆ. ಒಂದು ಕುಟುಂಬದ ಸದಸ್ಯರು (ತಾತ್ಕಾಲಿಕವಾಗಿ ಬೇರೆ ಕಡೆ ನೆಲೆಸಿದ್ದಲ್ಲಿ) ಎರಡೆರಡು ಕಡೆಗಳಲ್ಲಿ ಮಾಹಿತಿ ನೀಡುವ ಅಗತ್ಯವಿಲ್ಲ ಎಂದು ಜಿಲ್ಲಾ ಸಾಂಖ್ಯಿಕ ಅಧಿಕಾರಿ ಪ್ರದೀಪ್ ಡಿಸೋಜ ಸಮೀಕ್ಷಾ ಪಟ್ಟಿ ಕುರಿತು ಸಮಗ್ರ ಮಾಹಿತಿ ನೀಡಿದರು.
ತಪ್ಪು ಮಾಹಿತಿಯಿಂದ ಮುಂದಿನ ಜನಾಂಗಕ್ಕೆ ಅನ್ಯಾಯ : ಗಣತಿದಾರರು ಮನೆಗಳಿಗೆ ಭೇಟಿ ನೀಡುವ ಸಂದರ್ಭ ಮನೆಯವರು ನೈಜ ಮಾಹಿತಿಗಳನ್ನು ನೀಡುವ ಮೂಲಕ ಸಹಕರಿಸಬೇಕು. ತಪ್ಪು ಮಾಹಿತಿ ನೀಡಿದ್ದಲ್ಲಿ ಮುಂದಿನ ಜನಾಂಗಕ್ಕೆ ಅನ್ಯಾಯ ಮಾಡಿದಂತೆ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದರು.
ಕುಟುಂಬದ ಪ್ರತಿಯೊಬ್ಬ ಸದಸ್ಯರ ವೈಯಕ್ತಿಕ ಮಾಹಿತಿಯನ್ನು ಸಮೀಕ್ಷೆಯಲ್ಲಿ ದಾಖಲಿಸಲಾಗುತ್ತಿದ್ದು, ಧರ್ಮ, ಜಾತಿಗೆ ಸಂಬಂಧಿಸಿ ಪ್ರತ್ಯೇಕವಾಗಿ ಜಾತಿ, ಧರ್ಮವನ್ನು ನಮೂದಿಸಲು ಅವಕಾಶವಿದೆ. ತಂದೆ, ತಾಯಿಯರದ್ದು ಜಾತಿ ಬೇರೆ ಬೇರೆಯಾಗಿದ್ದಲ್ಲಿ ತಂದೆಯ ಜಾತಿಯನ್ನೇ ಮಗುವಿಗೆ ನಮೂದಿಸಲು ಆಯೋಗವು ಸೂಚಿಸಿದೆ ಎಂದು ಸಭಿಕರೊಬ್ಬರ ಪ್ರಶ್ನೆಗೆ ಆರೋಗ್ಯ ಸಚಿವ ಯು.ಟಿ.ಖಾದರ್ ಮಾಹಿತಿ ನೀಡಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀವಿದ್ಯಾ, ಮನಪಾ ಆಯುಕ್ತೆ ಹೆಫ್ಸಿಬಾ ರಾಣಿ, ಸಮಾಜ ಕಲ್ಯಾಣ ಅಧಿಕಾರಿ ಸಂತೋಷ್ ಕುಮಾರ್ ಉಪಸ್ಥಿತರಿದ್ದರು.