ಕುಂದಾಪುರ: ಕೋಟದಲ್ಲಿ ಡಾ. ಶಿವರಾಂ ಕಾರಂತ ಅವರ ಹೆಸರಿನಲ್ಲಿ ನಿರ್ಮಾಣಗೊಂಡ ಡಾ. ಕೋಟ ಶಿವರಾಂ ಕಾರಂತ ಥೀಂ ಪಾರ್ಕ್ ಅಭೂತಪೂರ್ವ ಕಲ್ಪನೆಯಾಗಿದ್ದು, ಇದರ ನಿರ್ವಹಣೆ ಮಾಡುತ್ತಿರುವ ಸ್ಥಳಿಯ ಪಂಚಾಯತ್ ಕಾರ್ಯ ಅಭಿನಂದನಾರ್ಹ. ಕಾರಂತರ ಆದರ್ಶಗಳು ಎಲ್ಲೆಡೆ ಪಾಲನೆಯಾಗಬೇಕಾಗಿದ್ದು, ಕೋಟದ ಕಾರಂತ ಥೀಂ ಪಾರ್ಕಿಗೆ ಈ ಸಾಲಿನಲ್ಲಿ ಬಿಡುಗಡೆಯಾದ 1 ಕೋಟಿ ರೂ.ವನ್ನು ಶೀಘ್ರ ಬಿಡುಗಡೆಗೊಳಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಉನ್ನತ ಶಿಕ್ಷಣ ಹಾಗೂ ಪ್ರವಾಸೋಧ್ಯಮ ಸಚಿವ ಆರ್.ವಿ. ದೇಶಪಾಂಡೆ ಹೇಳಿದ್ದಾರೆ.
ಅವರು ಬುಧವಾರ ಕೋಟದ ಕಾರಂತ ಥೀಂ ಪಾರ್ಕಿಗೆ ಭೇಟಿ ನೀಡಿದ ಸಂದರ್ಭ ಮಾತನಾಡಿದರು.
ಕಾರಂತ ಥೀಂ ಪಾರ್ಕಿನ ಮುಂಭಾಗದಲ್ಲಿರುವ ಡಾ. ಶಿವರಾಮ ಕಾರಂತರ ಪ್ರತಿಮೆಗೆ ಹೂ ಮಾಲೆ ಅರ್ಪಿಸಿದ ಅವರು ಥೀಂ ಪಾರ್ಕಿನ ಒಳಭಾಗದಲ್ಲಿರುವ ಗ್ರಂಥಾಲಯ, ಸಭಾಂಗಣವನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿದರು.
ಕೋಟ ಅಮ್ರಥೇಶ್ವರಿ ದೇವಳಕ್ಕೆ ಭೇಟಿ: ಹಲವು ಮಕ್ಕಳ ತಾಯಿ ಎಂದೇ ಕರೆಯಲ್ಪಡುವ ಕೋಟದ ಶ್ರೀ ಅಮ್ರಥೇಶ್ವರೀ ದೇವಳಕ್ಕೆ ಭೇಟಿ ನೀಡಿದ ಸಚಿವರು ದೇವಳದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭ ದೇವಳದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಆನಂದ ಸಿ. ಕುಂದರ್ ಸಚಿವರನ್ನು ಭರಮಾಡಿಕೊಂಡರು.
ಈ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಕೋಟತಟ್ಟು ಗ್ರಾಮಪಂಚಾಯತ್ ಅಧ್ಯಕ್ಷೆ ಶೋಭಾ, ಕೋಟ ಗ್ರಾ.ಪಂ. ಅಧ್ಯಕ್ಷ ಶಿವ ಪೂಜಾರಿ, ಕಾಂಗ್ರೆಸ್ ಮುಖಂಡ ಮಲ್ಯಾಡಿ ಶಿವರಾಂ ಶೆಟ್ಟಿ ಮೊದಲಾದವರಿದ್ದರು.