ಕುಂದಾಪುರ: ಯುವಕರು ಕೃಷಿಯತ್ತ ತಮ್ಮ ಒಲವನ್ನು ಕಡಿಮೆ ಮಾಡಿಕೊಂಡು ಯಾಂತ್ರಿಕ ಜೀವನದತ್ತ ಮುಖ ಮಶಾಡುತ್ತಿರುವುದು ಸರ್ವೇ ಸಾಮಾನ್ಯವಾಗಿದ್ದು ಇದರಿಂದಾಗಿ ಗ್ರಾಮೀಣ ಪ್ರದೇಶದಲ್ಲಿ ಕೃಷಿ ಚಟುವಟಿಕೆಗಳು ವರ್ಷದಿಂದ ವರ್ಷಕ್ಕೆ ಕ್ಷೀಣಿಸುತ್ತಿವೆ. ಇನ್ನು ಬಹುತೇಕ ಕೃಷಿ ಭೂಮಿಗಳು ಹಡಿಲು ಬೀಳುತ್ತಿವೆ ಆರ್ಥಿಕ ಉದ್ದೇಶಕ್ಕಾಗಿ ಮಾರಾಟವೂ ಆಗ್ತಿದೆ. ಸ್ವಲ್ಪ ಓದಿದ್ರಂತೂ ಮುಗಿತು, ಬೇಸಾಯ ಎಂದ್ರೇ ದೂರ ಓಡೋ ಈ ಟೈಂನಲ್ಲಿ ಕೋಟ ಸಮೀಪದ ಗಿಳಿಯಾರಿನ ಮೂರು ಮಂದಿ ಯುವಕರು ಉತ್ತಮ ಉದ್ಯೋಗದಲ್ಲಿದ್ರೂ ಕೂಡ ತಮ್ಮ ಕೆಲಸದ ಜತೆಗೆ ಕೃಷಿ ಸೇವೆಯಲ್ಲಿ ತೊಡಗಿಸಿಕೊಂಡು ಕಡಿಮೆ ಸಮಯದಲ್ಲಿ ಕಲ್ಲಂಗಡಿ ಬೆಳೆ ಬೆಳೆದು ಒಳ್ಳೆ ಲಾಭವನ್ನು ಕಂಡುಕೊಂಡ ಬಗ್ಗೆ ಒಂದು ಸ್ಟೋರಿಯಿದು.
ಅಷ್ಟಕ್ಕೂ ಇವರ್ಯಾರು ವೃತ್ತಿಪರ ಕೃಷಿಕರಲ್ಲ. ವಸಂತ ಗಿಳಿಯಾರ್, ಅಶೋಕ್ ಶೆಟ್ಟಿ ಬನ್ನಾಡಿ ಹಾಗೂ ಅರುಣಕುಮಾರ್ ಶೆಟ್ಟಿ ಈ ಮೂವರೂ ಬೇರೆ ಬೇರೆ ವೃತ್ತಿಯಲ್ಲಿದ್ದಾರೆ. ವಸಂತ್ ಗಿಳಿಯಾರು ಪಾಕ್ಷಿಕ ಪತ್ರಿಕೆಯಾದ ’ನಿಮ್ಮ ಅಭಿಮತ’ದ ಸಂಪಾದಕರು. ಅಶೋಕ್ ಶೆಟ್ಟಿ ಸಹನಾ ಡೆವಲಪರ್ಸ್ನಲ್ಲಿ ಸಿವಿಲ್ ಇಂಜಿನೀಯರ್ ಆಗಿದ್ದರೇ, ಅರುಣಕುಮಾರ್ ಶೆಟ್ಟಿ ಕೆ.ಎಸ್. ಹೆಗ್ಡೆ & ಕಂಪೆನಿಯಲ್ಲಿ ಚಾರ್ಟೆಡ್ ಅಕೌಂಟೆಂಟ್ ವಿದ್ಯಾರ್ಥಿ. ಹೇಳಿಕೇಳಿ ಎಲ್ಲರದ್ದೂ ವೈಟ್ ಕಾಲರ್ ವೃತ್ತಿ. ಆದರೂ ಕೃಷಿಯಲ್ಲಿ ತೊಡಗಿಸಿಕೊಂಡಿರುವ ಅವರ ಪ್ರವೃತ್ತಿ ಮಾತ್ರ ವಿಶೇಷವಾದುದು.
ಕೈಸೇರಿತು ಒಳ್ಳೆ ಲಾಭ: ಕಳೆದ ಎರಡು ತಿಂಗಳ ಹಿಂದೆ ಬನ್ನಾಡಿಯ ಕಮ್ಮಟಕುದ್ರುವಿನ ವಾರ್ಷಿಕವಾಗಿ ಭತ್ತ ಬೆಳೆಯುತ್ತಿದ್ದ ಒಂದು ಎಕರೆ ಗದ್ದೆಯಲ್ಲಿ ಕಲ್ಲಂಗಡಿ ಬೆಳೆಯುವ ಸಾಹಸಕ್ಕೆ ಮುಂದಾದರು. ಕೇವಲ 15 ಸಾವಿರ ರೂಪಾಯಿ ಬಂಡವಾಳ ವಿನಿಯೋಗಿಸಿ, ಬಿಡುವಿನ ವೇಳೆಯಲ್ಲಿ ಗೊಬ್ಬರ, ನೀರು ಹರಿಸಿ ಗೀಡಗಳನ್ನು ಪೋಷಿಸಿ 70 ದಿನಗಳಲ್ಲಿ ಲಕ್ಷ ರೂಗಳಷ್ಟು ಲಾಭದ ಕಲ್ಲಂಗಡಿ ಬೆಳೆಯನ್ನು ತೆಗೆದಿದ್ದಾರೆ. 68 ದಿನಗಳಲ್ಲಿ ಕಲ್ಲಂಗಡಿ ಕಟಾವಿಗೆ ಸಿದ್ಧಗೊಂಡಿತು. ಮೊದಲ ಹಂತದಲ್ಲಿ 2.5 ಟನ್ ಕಲ್ಲಂಗಡಿ ದೊರೆಯಿತು. ಎರಡನೇ ಕಟಾವಿನ ವೇಳೆಗೆ 3.5 ಟನ್ ಕಲ್ಲಂಗಡಿ ದೊರೆಯಿತು. ಇನ್ನೂ ಒಂದು ಹಂತದ ಕಟಾವು ಬಾಕಿ ಇದೆ. ಕೋಟದ ಭದ್ರ ಪೂಜಾರಿ ಎನ್ನುವವರು ಇವರು ಬೆಳೆದ ಕಲ್ಲಂಗಡಿ ಕೆ.ಜಿಗೆ 12 ರಿಂದ 14 ರೂ. ವರೆಗಿನ ಮಾರುಕಟ್ಟೆಯಲ್ಲಿ ಮೌಲ್ಯದಂತೆ ಹಣ ನೀಡಿ ಖರೀದಿಸಿದ್ದಾರೆ. ಸಹಜವಾಗಿ ನಿರೀಕ್ಷೆಗಿಂತ ಅಧಿಕ ಲಾಭವನ್ನೂ ಪಡೆದಿದ್ದಾರೆ. ಜನರು ಈ ಹಣ್ಣನ್ನು ಕೇಳಿ ಪಡೆಯುತ್ತಿದ್ದೂ ಹಣ್ಣು ಸೂಪರ್ ಅಂತಾರೇ ಭದ್ರ ಪೂಜಾರಿ.
ಈ ಪ್ರದೇಶಗಳಲ್ಲಿ ಸಾಂಪ್ರದಾಯಿಕ ಬೆಳೆ ಭತ್ತವನು ಮಾತ್ರ ಬೆಳೆಯಲಾಗುತ್ತಿತ್ತು. ಉಳಿದಂತೇ ಗದ್ದೆ ಹಡಿಲು ಬಿದ್ದಿರುತ್ತೆ. ಕಮ್ಮಟಕುದ್ರುವಿನ ಭಾಗದಲ್ಲಿ ಹೊಳೆ ಇದ್ದು ಇಲ್ಲಿ ನೀರಿಗೆ ಕೊರತೆ ಇರ್ಲಿಲ್ಲ.. ಕೃಷಿ ಭೂಮಿಯನ್ನು ಹಡಿಲು ಬಿಡುವ ಬದಲು ಕಲ್ಲಂಗಡಿ ಬೆಳೆದರೆ ಹೇಗೆ ಆಲೋಚನೆಗೆ ಪೂರಕವಾಗಿ ಮನು ಶೆಟ್ಟಿ ಎಂಬುವವರು ಈ ಯುವಕರಿಗೆ ಬೆಳೆಯ ಬಗ್ಗೆ ಮಾಹಿತಿ ನೀಡಿದ್ರು.. ಒಮ್ಮನಸ್ಸಿನಿಂದ ಕಮ್ಮಟಕುದ್ರಿನ ಶೇಖರ ಶೆಟ್ಟಿ ಎಂಬುವವರ ಕೃಷಿ ಗದ್ದೆಯಲ್ಲಿ ಸಾಧಾ ಪದ್ಧತಿಯಂತೆ ಏರಿ ತೆಗೆದು ಕಲ್ಲಂಗಡಿ ಬೀಜ ನೆಟ್ಟರು. ಪ್ರತಿ ಎರಡು ದಿನಗಳಿಗೊಮ್ಮೆ ಶೇಖರ ಶೆಟ್ಟಿಯವರ ಮನೆಯ ಬಾವಿಯಿಂದ ಪಂಪ್ ಸೆಟ್ ಮೂಲಕ ಗದ್ದೆಗೆ ನೀರು ಹಾಯಿಸಿದರು. ಹಟ್ಟಿ ಗೊಬ್ಬರ, ಸಾವಯವ ಗೊಬ್ಬರ, ಎಲೆಗಳಿಗೆ ಹುಳಭಾದೆಯನ್ನು ತಪ್ಪಿಸಲು ಬೇವಿನ ಎಣ್ಣೆ ಸಿಂಪಡಿಸಿದರು. ಕಲ್ಲಂಗಡಿ ಕಾಯಿ ಬೆಳೆದು ಉತ್ತಮ ಲಾಭ ಪಡೆದ್ರು.
ನಾವೂ ಮೂವರು ಸ್ನೇಹಿತರು ಒಟ್ಟಾಗಿ ಬಿಡುವಿನ ವೇಳೆಯಲ್ಲಿ ಕೃಷಿ ಚಟುವಟಿಯಲ್ಲಿ ತೊಡಗಿಸಿಕೊಳ್ಳುವ ಸಂಕಲ್ಪ ತೊಟ್ಟು ಕಾರ್ಯ ಪ್ರವೃತ್ತರಾದೆವು. ಮೊದಲ ಪ್ರಯತ್ನಕ್ಕೆ ಯಶಸ್ಸು ಸಿಕ್ಕಿದ್ದು ಕೃಷಿಯಲ್ಲಿ ಇನ್ನೂ ಮುಂದುವರೆಯಲು ಆಸೆಯಿದೆ. ಎನ್ನುತ್ತಾರೆ ಕೃಷಿ ಸಾಧಕ ಅರುಣ್ ಕುಮಾರ್ ಶೆಟ್ಟಿ.
ತ್ರಿಶೂಲ್ ಅಸೋಸಿಯೇಟ್ಸ್ ಎಂಬ ಸಂಸ್ಥೆಯ ಮೂಲಕ ವಿವಿಧ ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಈ ಯುವಕರ ತಂಡ ಕೃಷಿಯನ್ನು ಈ ಸಂಸ್ಥೆಯ ಚಟುವಟಿಕೆಗಳಿಗೆ ಪೂರಕವಾಗಿ ಬಳಸಿಕೊಂಡಿದೆ. ಕೃಷಿಯಿಂದ ಬರುವ ಲಾಭವನ್ನು ಇದರ ಮೂಲಕವೇ ಅಸಾಹಯಕರಿಗೆ, ಅಗತ್ಯವಿರುವವರಿಗೆ ತಲುಪಿಸುವ ಗುರಿ ಇವರದ್ದು.
ಮುಂದಿನ ದಿನಗಳಲ್ಲಿ ಕಲ್ಲಂಗಡಿ ಬೆಳೆಗೆ ಆಧುನಿಕ ಪದ್ದತಿಯಾದ ಡ್ರಿಪ್ಸ್ ಸಿಸ್ಟಮ್ ಮಂತಾದವುಗಳನ್ನು ಅಳವಡಿಸಿಕೊಳ್ಳುವ ಮೂಲಕ ಸರಕಾರದ ನೆರವನ್ನು ಪಡೆಯುವ ಗುರಿ ಇದೆ. ಅಲ್ಲದೇ ವಡ್ಡರ್ಸೆ ಕಾವಾಡಿಯ ೫ ಎಕರೆ ಜಾಗದಲ್ಲಿ ಪಪ್ಪಾಯಿ, ಪರಂಗಿ ಬೆಳೆ ಬೇಳೆಯುವ ಗುರಿ ಇದೆ ಎನ್ನುತ್ತಾರೆ ವಸಂತ್ ಗಿಳಿಯಾರ್.
ಕೃಷಿ ಕ್ಷೇತ್ರದಲ್ಲಿ ಲಾಭವಿದೆ, ಆಧುನಿಕತೆ ಟಚ್ ಕೊಟ್ರೇ ಲಾಭ ಖಚಿತ ಎನ್ನೋದನ್ನ ಈ ಯುವಕರು ಸಾಧಿಸಿ ತೋರಿಸಿದ್ದಾರೆ. ಇವರ ಕೃಷಿ ಸಾಧನೆ ಎಲ್ಲರಿಗೂ ಮಾದರಿಯಾಗಲಿ ಎಂಬುದು ನಮ್ಮ ಹಾರೈಕೆ.
ವರದಿ- ಯೋಗೀಶ್ ಕುಂಭಾಸಿ