ಉಳ್ಳಾಲ: ಮಸೀದಿಗೆ ಹಾನಿಯಾದರೆ ಅದನ್ನು ಪುನರ್ನಿರ್ಮಿಸಬಹುದು, ಅದೇ ರೀತಿ ಮದ್ರಸಕ್ಕೆ ತೊಂದರೆಯಾದಲ್ಲಿ ಸರಿಪಡಿಸಬಹುದು. ಆದರೆ ಸಮುದಾಯಕ್ಕೆ ಆಗುವ ಸಮಸ್ಯೆಗಳನ್ನು ಶೀಘ್ರದಲ್ಲಿ ಪರಿಹರಿಸಲು ಆಗದು ಎಂದು ಕೂಟುಂಬಾರ ಅಬ್ದುಲ್ ರಹ್ಮಾನ್ ದಾರಿಮಿ ಹೇಳಿದರು.ಅವರು ಭಾನುವಾರ ಉಳ್ಳಾಲ ದರ್ಗಾದಲ್ಲಿ ನಡೆದ ದ.ಕ. ಜಿಲ್ಲಾ ಮುಸ್ಲಿಂ ಜಮಾಅತ್ ಪ್ರತಿನಿಧಿ ಸಮಾವೇಶದಲ್ಲಿ ವಿಚಾರ ಮಂಡಿಸಿ ಮಾತನಾಡಿದರು.
ಭಾರತದಲ್ಲಿ ಯಾವುದೇ ಘಟನೆ ನಡೆಯಲಿ, ಅದಕ್ಕೆ ಮೂಲ ಕಾರಣಕರ್ತರು ಮುಸ್ಲಿಮರು. ಪಾಕ್ನಲ್ಲಿ ಘಟನೆ ನಡೆದರೂ ಅದಕ್ಕೆ ಕಾರಣರು ಮುಸ್ಲಿಮರು ಎಂದು ಸುದ್ದಿಮಾಧ್ಯಮದಲ್ಲಿ ವರದಿಯಾಗುತ್ತದೆ. ಆದರೆ ಮೂಲ ಕಾರಣಕರ್ತರು ಯಾರು ಎಂಬುದರ ಬಗ್ಗೆ ಸಮಗ್ರ ವರದಿ ಮತ್ತೆ ಆಗುತ್ತಿಲ್ಲ.ಮಸೀದಿಯಲ್ಲಿ ಬಾಂಬ್ ಸ್ಫೋಟಗೊಂಡು ಹಲವು ಮಂದಿ ಮೃತಪಟ್ಟರೆ ಅದರ ಹೊಣೆಯನ್ನು ಮುಸ್ಲಿಂ ಸಂಘಟನೆಗಳು ಹೊತ್ತುಕೊಳ್ಳಬೇಕಾದ ಪರಿಸ್ಥಿತಿ ಬಂದಿದೆ ಎಂದರು.
ಕೇರಳದಲ್ಲಿ ಸಾಧಾರಣ ನೋಡಿದರೆ ಹಲವು ಮಹಾನ್ ಪಂಡಿತರ ಹೆಸರಿನಲ್ಲಿ ಮಸೀದಿಗಳು ಕಂಡುಬರುತ್ತವೆ. ಅಲ್ಲಿ ಸಲಫಿ ಮಸೀದಿ ಕಾಣುವುದು ಕಡಿಮೆ. ಆದರೆ ನಮ್ಮ ಕ್ಷೇತ್ರದಲ್ಲಿ ಸಲಫಿ ಮಸೀದಿಗಳು ಕಾಣುತ್ತವೆ. ಇಲ್ಲಿ ಸಲಫಿಗಳು ಬೆಳೆಯಲು, ಅವರ ಪ್ರತ್ಯೇಕ ಮಸೀದಿ ಸ್ಥಾಪನೆಯಾಗಲು ಕಾರಣರು ಯಾರು ಎನ್ನುವುದನ್ನು ಚಿಂತಿಸಿದಲ್ಲಿ ಮಾತ್ರ ನಮ್ಮಲ್ಲಿ ಕೊರತೆಗಳು ಎಷ್ಟಿವೆ ಎನ್ನುವುದು ಅರ್ಥವಾಗಬಹುದು ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಬೆಳ್ತಂಗಡಿ ಸಂಯುಕ್ತ ಜಮಾಅತ್ನ ಅಧ್ಯಕ್ಷ ಸಯ್ಯಿದ್ ಅಬ್ದುಲ್ ರಹ್ಮಾನ್ ಸಾದಾತ್ ತಂಙಳ್ ಮಾತನಾಡಿ, ಸಮುದಾಯದ ಅಭಿವೃದ್ಧಿಗಾಗಿ ದ.ಕ. ಜಿಲ್ಲಾ ಮುಸ್ಲಿಂ ಜಮಾಅತ್ ಕೌನ್ಸಿಲ್ನ ನೇತೃತ್ವದಲ್ಲಿ ಬಹಳಷ್ಟು ಕೆಲಸಗಳು ಆಗಬೇಕಾಗಿದೆ. ಅಭಿವೃದ್ಧಿ ಪರ ಕೆಲಸಗಳು ಮಾಡಿಸುವ ಅರ್ಹತೆ ಉಳ್ಳಾಲ ಖಾಝಿ ಫಝಲ್ ಕೋಯಮ್ಮ ತಂಙಳ್ ಅವರಿಗಿದೆ. ಅವರ ನೇತೃತ್ವದಲ್ಲಿ ಜಮಾಅತ್ನ ಪ್ರತಿನಿಧಿಗಳು ಮುಸ್ಲಿಂ ಸಮುದಾಯಗಳಿಗೆ ಬೇಕಾದ ಕೆಲಸಗಳನ್ನು ಮಾಡಿಸಲು ಮಂದಾಗಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ದರ್ಗಾ ಅಧ್ಯಕ್ಷ ಯು.ಎಸ್.ಹಂಝ ಮಾತನಾಡಿದರು.ದ.ಕ. ಜಿಲ್ಲಾ ಮುಸ್ಲಿಂ ಸಂಯುಕ್ತ ಜಮಾಅತ್ನ ಅಧ್ಯಕ್ಷ ಸಯ್ಯಿದ್ ಅಬೂಬಕರ್ ಮುರಾ ತಂಙಳ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ದೇರಳಕಟ್ಟೆ ಸಂಯುಕ್ತ ಜಮಾಅತ್ನ ಅಧ್ಯಕ್ಷ ರಝಾಕ್ ಹಾಜಿ ಮಲಾರ್, ಹಾರೂನ್ ಅಹ್ಸನಿ, ಎನ್.ಎಸ್. ಉಮ್ಮರ್ ಮಾಸ್ಟರ್, ಅಬ್ದುಲ್ ರಝಾಕ್ ಸಖಾಫಿ ಮಡಂತ್ಯಾರ್, ಇಸ್ಮಾಯಿಲ್ ಸಅದಿ ಉರುಮಣೆ, ಅಬ್ದುಲ್ ಖಾದರ್ ಹಾಜಿ ಪುತ್ತೂರು, ಬದ್ರುದ್ದೀನ್ ಹಾಜಿ ಗೇರುಕಟ್ಟೆ, ಕೆ.ಇ. ಸಾಲೆತ್ತೂರು, ಮುನೀರ್ ಮಾಸ್ಟರ್ ಮಂಜನಾಡಿ, ಉಳ್ಳಾಲ ದರ್ಗಾ ಲೆಕ್ಕಪರಿಶೋದಕ ಅಬ್ದುಲ್ ಹಮೀದ್, ಅರೆಬಿಕ್ ಟ್ರಸ್ಟ್ ಕಾರ್ಯದರ್ಶಿ ಝಿಯಾ ತಂಙಳ್, ಉಪಾಧ್ಯಕ್ಷ ಹನೀಫ್ ಹಾಜಿ, ದರ್ಗಾ ಉಪಾಧ್ಯಕ್ಷ ಅಶ್ರಫ್ ರೈಟ್ವೇ ಮೊದಲಾದವರು ಉಪಸ್ಥಿತರಿದ್ದರು. ಹಾಫಿಳ್ ಯಾಕೂಬ್ ಸಅದಿ ಅತಿಥಿಗಳನ್ನು ಸ್ವಾಗತಿಸಿದರು.
_ M.Arif Kalkatta