ಉಪ್ಪಿನಂಗಡಿ,ಎಪ್ರಿಲ್.04 : ಸವಣೂರು ಗ್ರಾಮದ ಕೆಡೆಂಜಿ ಹಾಗೂ ಆಲಂಕಾರು ಗ್ರಾಮದ ಕಕ್ವೆ ಎಂಬ 2 ಪ್ರತ್ಯೇಕ ಕಡೆಗಳಲ್ಲಿ ಕುಮಾರಧಾರಾ ನದಿಯಲ್ಲಿ ನಡೆಯುತ್ತಿದ್ದ ಅಕ್ರಮ ಮರಳುಗಾರಿಕೆ ಅಡ್ಡೆಗೆ ಕಂದಾಯ ಇಲಾಖೆ ಅಧಿಕಾರಿಗಳು ಗುರುವಾರ ದಾಳಿ ನಡೆಸಿ ಅಪಾರ ಪ್ರಮಾಣದ ಮರಳು ಹಾಗೂ ಮರಳುಗಾರಿಕೆಗೆ ಬಳಸುತ್ತಿದ್ದ ಯಂತ್ರಗಳನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ.
ಸವಣೂರು ಗ್ರಾಮದ ಕೆಡೆಂಜಿ ಎಂಬಲ್ಲಿಗೆ ದಾಳಿ ನಡೆಸಿ ನದಿಯಲ್ಲಿ ಯಾಂತ್ರೀಕೃತ ನಾಡ ದೋಣಿ ಬಳಸಿಕೊಂಡು ಅದಕ್ಕೆ ಯಂತ್ರ ಅಳಡಿಸಿ ಮರಳುಗಾರಿಗೆ ನಡೆಯುತ್ತಿದ್ದುದನ್ನು ಪತ್ತೆ ಮಾಡಿದ್ದು, ಕೊಳ್ತಿಗೆ ಗ್ರಾಮದ ಪೆರ್ಲಂಪಾಡಿಯ ನಿವಾಸಿ ಭರತ್ ಕುಮಾರ್ ಹಾಗೂ ಬರೆಪ್ಪಾಡಿಯ ನಿವಾಸಿ ಪ್ರಶಾಂತ್ ಎಂಬವರು ಸಂಗ್ರಹಿಸಿ ಇಟ್ಟಿದ್ದ ಮರಳು ಮತ್ತು ಅದನ್ನು ತೆಗೆಯಲು ಬಳಸುತ್ತಿದ್ದ ಯಂತ್ರೋಪಕರಣಗಳನ್ನು ಮುಟ್ಟುಗೋಲು ಹಾಕಿದ್ದಾರೆ.
ಆಲಂಕಾರು ಗ್ರಾಮದ ಕಕ್ವೆ ಎಂಬಲ್ಲಿಗೆ ಧಾಳಿ ನಡೆಸಿ, ಬೊಮ್ಮಣ್ಣ ಗೌಡ ಎಂಬವರು ಸಂಗ್ರಹಿಸಿ ಇರಿಸಿದ್ದ ಮರಳು ಮತ್ತು ಯಂತ್ರೋಪಕರಣಗಳನ್ನು ಮುಟ್ಟುಗೋಲು ಹಾಕಲಾಗಿದೆ. ಎರಡು ಪ್ರಕರಣಗಳಿಗೆ ಸಂಬಂಧಿಸಿ ಸುಮಾರು 45 ಲಾರಿ ಲೋಡ್ ಮರಳು, ಮರಳುಗಾರಿಕೆಗೆ ಬಳಸುತ್ತಿದ್ದ 2 ಡ್ರೆಜ್ಜಿಂಗ್ ಮಿಷನ್, 4 ಬೋಟ್ಗಳು 34 ಬ್ಯಾರಲ್ಗಳು, 15 ಕಬ್ಬಿಣದ ಪೈಪ್ಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಕಡಬ ವಿಶೇಷ ತಹಶೀಲ್ದಾರ್ ನಿಂಗಯ್ಯ ಅವರ ನಿರ್ದೇಶನದಂತೆ ಕಂದಾಯ ನಿರೀಕ್ಷಕ ನಾರಾಯಣ ಪೂಜಾರಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಿತು. ಗ್ರಾಮಕರಣಿಕರಾದ ನಾಗರಾಜ್, ಕೆಂಚಣ್ಣ ಗೌಡ ಇದ್ದರು.