ಮಂಗಳೂರು,ಮಾರ್ಚ್.16 : ಉಳ್ಳಾಲ ವಲಿಯ್ಯ್ನ ಸ್ಥಾನದಲ್ಲಿದ್ದವರಿಗೆ ಪವಾಢಗಳು ಇರುತ್ತವೆ. ಇದರಿಂದ ಹಲವು ಬದಲಾವಣೆಗಳು ಸಾಧ್ಯವಿದೆ. ಮೊಹಿಯುದ್ದೀನ್ ಶೇಖ್ ಹಿರಿಯ ಪವಾಢ ಪುರುಷರಾಗಿದ್ದರು. ಅವರ ಸ್ಮರಿಸುವ ಪ್ರಯುಕ್ತ ರಾತೀಬ್ಗಳನ್ನು ಮಾಡಲಾಗುತ್ತದೆ ಎಂದು ಕಾಞಂಗಾಡ್ ಸಂಯುಕ್ತ ಖಾಝಿ ಶೈಖುನಾ ಜಿಫ್ರಿ ಮುತ್ತು ಕೋಯ ತಂಙಳ್ ಹೇಳಿದರು
ಅವರು ಮೊಹಿಯ್ಯುದ್ದೀನ್ ಜುಮಾ ಮಸೀದಿ ಮೇಲಂಗಡಿ ಉಳ್ಳಾಲ ಇದರ ಆಶ್ರಯದಲ್ಲಿ 82 ನೇ ಮಹಿಯ್ಯುದ್ದೀನ್ ರಾತೀಬ್ನ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ಸಮಸ್ತ ಕೇರಳ ಜಂಮೀಯತುಲ್ ಉಲಮಾ ಶೈಕ್ಷಣಿಕ ಕೇಂದ್ರವನ್ನು ಅಭಿವೃದ್ದಿಗೊಳಿಸುವುದೇ ಮುಖ್ಯ ಗುರಿಯಾಗಿದೆ. ಇಸ್ಲಾಂನ ಮೂಲ ಸಿದ್ದಾಂತಗಳನ್ನು ಸಮಸ್ತದ ಮೂಲಕ ಕಲಿಸಲಾಗುತ್ತದೆ. ಇದನ್ನು ಸದುಪಯೋಗಪಡಿಸಿಕೊಂಡು ಧಾರ್ಮಿಕ ಶಿಕ್ಷಣವನ್ನು ಎಲ್ಲರೂ ಪಡೆಯಬೇಕು. ಜ್ಞಾನ ಅಭಿವೃದ್ಧಿಯಾದಲ್ಲಿ ಮಾತ್ರ ಇಸ್ಲಾಂ ಬೆಳೆಯಲು ಸಾಧ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ದ.ಕ. ಜಿಲ್ಲಾ ಖಾಝಿ ತ್ವಾಕಾ ಅಹ್ಮದ್ ಮುಸ್ಲಿಯಾರ್ ವಹಿಸಿದ್ದರು. ಹುಸೈನ್ ಬಾಖವಿ ಕೆಸಿರೋಡ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಪ್ರಾದಿಕಾರದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಇಬ್ರಾಹಿಂ ಕೋಡಿಜಾಲ್ ಅವರನ್ನು ಸನ್ಮಾನಿಸಲಾಯಿತು. ವಕ್ಫ್ಬೋರ್ಡ್ನ ಜಿಲ್ಲಾಧ್ಯಕ್ಷ ರಶೀದ್ ಹಾಜಿ, ಕಾಂಗ್ರೆಸ್ನ ಜಿಲ್ಲಾ ವಕ್ತಾರ ಫಾರೂಕ್ ಉಳ್ಳಾಲ್, ಯೂತ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಯು.ಬಿ. ಸಲೀಂ, ಮಂಗಳೂರು ಕೇಂದ್ರ ಜುಮಾ ಮಸೀದಿಯ ಟ್ರಸ್ಟಿ ಮಹಮ್ಮದ್ ಹನೀಫ್, ಮಾಜಿ ಮೇಯರ್ ಅಶ್ರಫ್, ಕೆ.ಎಂ. ಇಸ್ಮಾಯಿಲ್ ಕಲ್ಲಡ್ಕ, ಅಬೂಬಕರ್ ಗೋಳ್ತಮಜಲ್, ಸೆಯ್ಯದ್ ಮದನಿ ಚಾರಿಟೇಬಲ್ ಟ್ರಸ್ಟ್ನ ಮಾಜಿ ಕಾರ್ಯದರ್ಶಿ ಯು.ಎಚ್. ಅಹ್ಮದ್ ಬಾವಾ, ಬದ್ರುದ್ದೀನ್ ಅಹ್ಮದ್, ಝೀನತ್ ಭಕ್ಷ್ ಯತೀಂ ಖಾನದ ಪ್ರಧಾನ ಕಾರ್ಯದರ್ಶಿ ಟಿ. ಮುಸ್ತಫಾ ಹೈದರ್ ಮೊದಲಾದವರು ಉಪಸ್ಥಿತರಿದ್ದರು.


