ಕನ್ನಡ ವಾರ್ತೆಗಳು

ಕರಾವಳಿ ಉತ್ಸವ ಮೈದಾನದಲ್ಲಿ ಕರಾವಳಿ ಉತ್ಸವಕ್ಕೆ ನಿಷೇಧ..! ಶೀಘ್ರದಲ್ಲೇ ಇಲ್ಲಿ ವಾಕಿಂಗ್ ಟ್ರ್ಯಾಕ್ ನಿರ್ಮಾಣ

Pinterest LinkedIn Tumblr

Karavali_utsav_start_11

ಮಂಗಳೂರು: ಕರಾವಳಿ ಉತ್ಸವ ಮೈದಾನದಲ್ಲಿ ಫೆಡರೇಶನ್ ಅಥ್ಲೆಟಿಕ್ ಕ್ರೀಡಾಪಟುಗಳಿಗೆ ಹಾಗೂ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವ ದೃಷ್ಟಿಯಲ್ಲಿ 200 ಮೀಟರ್ ವಾಕಿಂಗ್ ಟ್ರ್ಯಾಕ್ ನಿರ್ಮಿಸುವ ಪ್ರಸ್ತಾಪ ಜಿಲ್ಲಾಡಳಿತದ ಮುಂದಿದೆ. ಈ ಮೂಲಕ ‘ಕರಾವಳಿ ಉತ್ಸವ ಮೈದಾನ’ ಮುಂದಿನ ದಿನಗಳಲ್ಲಿ ಕೇವಲ ಹೆಸರಿಗೆ ಮಾತ್ರ ಸೀಮಿತವೇ? ಕರಾವಳಿ ಉತ್ಸವ ಸೇರಿ ಈ ಮೈದಾನದಲ್ಲಿ ನಡೆಯತ್ತಿರುವ ಎಲ್ಲ ಚಟುವಟಿಕೆಗಳಿಗೆ ನಿಷೇಧ ಹೇರಿ ‘ವಾಕಿಂಗ್ ಟ್ರ್ಯಾಕ್’ ನಿರ್ಮಾಣವಾಗಲಿದೆಯೇ ? ಎಂಬ ಗಂಭೀರ ಚರ್ಚೆಯನ್ನು ಸಾರ್ವಜನಿಕರಲ್ಲಿ ಹುಟ್ಟುಹಾಕಿದೆ.

ಮಂಗಳೂರಿನಲ್ಲಿ ರಾಷ್ಟ್ರೀಯ ಫೆಡರೇಶನ್ ಕಪ್ ಅಥ್ಲೆಟಿಕ್ ಚಾಂಪಿಯನ್‌ಷಿಪ್ ಬಗ್ಗೆ ಮಂಗಳವಾರ ಮಹಾನಗರ ಪಾಲಿಕೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮೇಯರ್ ಮಹಾಬಲ ಮಾರ್ಲ ವಿಷಯ ಪ್ರಸ್ತಾಪಿಸಿದ್ದು, ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಮಾಹಿತಿ ನೀಡಿದ್ದಾರೆ.

ಮಂಗಳಾ ಕ್ರೀಡಾಂಗಣದಲ್ಲಿ ಸಿಂಥೆಟಿಕ್ ಟ್ರ್ಯಾಕ್ ಅಳವಡಿಸಿರುವುದರಿಂದ ಕ್ರೀಡಾಪಟುಗಳನ್ನು ಹೊರತುಪಡಿಸಿ ಉಳಿದವರಿಗೆ ವ್ಯಾಯಾಮ ಅಥವಾ ಇತರ ಉದ್ದೇಶಕ್ಕಾಗಿ ಒಳಗಡೆ ಪ್ರವೇಶ ನಿಷೇಧಿಸಲಾಗಿದೆ. ಆದ್ದರಿಂದ ಮುಂದಿನ ದಿನಗಳಲ್ಲಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಹಾಗೂ ಫೆಡರೇಶನ್ ಅಥ್ಲೆಟಿಕ್ ಕ್ರೀಡಾಪಟುಗಳಿಗೆ ಅಭ್ಯಾಸ ಮಾಡುವ ನಿಟ್ಟಿನಲ್ಲಿ ಕರಾವಳಿ ಉತ್ಸವ ಮೈದಾನದಲ್ಲಿ 200 ಮೀಟರ್ ಟ್ರ್ಯಾಕ್ ನಿರ್ಮಿಸಲಾಗುವುದು. ಮುಂದೆ ಇದನ್ನೇ ವಾಕಿಂಗ್ ಟ್ರ್ಯಾಕ್ ಆಗಿ ಬಳಸಬಹುದು ಎಂದರು.

ಕರಾವಳಿ ಉತ್ಸವ ಮೈದಾನದಲ್ಲಿ ಟ್ರ್ಯಾಕ್ ನಿರ್ಮಾಣ ಮಾಡಿದ ಬಳಿಕ ಮುಂದಿನ ದಿನಗಳಲ್ಲಿ ಶಾಲಾ ಕ್ರೀಡಾಕೂಟಗಳನ್ನು ಇಲ್ಲೇ ನಡೆಸಲಾಗುವುದು. ಅಲ್ಲದೆ ಮುಂದಕ್ಕೆ ಯಾವುದೇ ಉತ್ಸವ, ಸರ್ಕಸ್ ಅಥವಾ ಇತರ ವಾಣಿಜ್ಯ ಉದ್ದೇಶಗಳಿಗೆ ಮೈದಾನವನ್ನು ಬಳಕೆ ಮಾಡುವಂತಿಲ್ಲ. ಇದಕ್ಕಾಗಿ ಬದಲಿ ಜಾಗವನ್ನು ನಿಗದಿ ಮಾಡೋಣ ಎಂದು ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ತಿಳಿಸಿದರು.

ಮಂಗಳಾ ಕ್ರೀಡಾಂಗಣದಲ್ಲಿ ಸಾರ್ವಜನಿಕರಿಗೆ ಪ್ರವೇಶ ನಿಷೇಧಿಸಿರುವುದರಿಂದ ಬದಲೀ ವ್ಯವಸ್ಥೆ ಕಲ್ಪಿಸುವಂತೆ ಜನಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳನ್ನು ಸಾರ್ವಜನಿಕರು ಆಗ್ರಹಿಸಿದ್ದರು. ಈ ಬಗ್ಗೆ ಮೇಯರ್ ಮಹಾಬಲ ಮಾರ್ಲ ಅಧಿಕಾರಿಗಳಲ್ಲಿ ಪ್ರಸ್ತಾಪ ಮುಂದಿಟ್ಟಿದ್ದರು. ಇದೇ ಪ್ರಸ್ತಾಪದ ಬಗ್ಗೆ ಜಿಲ್ಲಾಧಿಕಾರಿ ಕರಾವಳಿ ಉತ್ಸವ ಮೈದಾನದಲ್ಲಿ ಮುಂದಿನ ದಿನಗಳಲ್ಲಿ ಸಾಂಸ್ಕೃತಿಕ ಉತ್ಸವವನ್ನು ನಡೆಸದಿರುವ ತೀರ್ಮಾನವನ್ನು ಸಭೆಯಲ್ಲಿ ಪ್ರಕಟಿಸಿದ್ದಾರೆ.

ಮೈದಾನ ಉತ್ಸವಕ್ಕೆ ಮೀಸಲಿಡಬೇಕು :  ಕಲ್ಕೂರ

Kalkura_Home_Santhe_11

ಕರಾವಳಿ ಉತ್ಸವ ಮೈದಾನವನ್ನು ಯಾವುದೇ ಕಾರಣಕ್ಕೂ ಸಾಂಸ್ಕೃತಿಕ ಚಟುವಟಿಕೆ ಬಿಟ್ಟು ಬದಲೀ ವ್ಯವಸ್ಥೆಗೆ ಪರಿವರ್ತಿಸುವುದು ಸರಿಯಲ್ಲ. ಕ್ರೀಡಾ ಚಟುವಟಿಕೆಗಳಿಗೆ ಬದಲೀ ವ್ಯವಸ್ಥೆ ಮಾಡಬೇಕೇ ವಿನಃ ಕರಾವಳಿ ಉತ್ಸವಕ್ಕೆಂದೇ ಇದ್ದ ಮೈದಾನದಲ್ಲಿ ಮುಂದಕ್ಕೆ ಉತ್ಸವ ನಡೆಸಬಾರದು ಎಂಬುದು ಸರಿಯಲ್ಲ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್. ಪ್ರದೀಪ್ ಕುಮಾರ್ ಕಲ್ಕೂರ ಅವರು ಮಾಧ್ಯಮ ಪ್ರತಿನಿಧಿಗಳಲ್ಲಿ ತಿಳಿಸಿದ್ದಾರೆ.

Write A Comment