ಮಂಗಳೂರು,ಮಾರ್ಚ್.04: ದಕ್ಷಿಣ ರೈಲ್ವೇ ನೌಕರರ ಸಂಘ, ಚೆನೈ ವಿಭಾಗ ಹಾಗೂ ಮಂಗಳೂರು ಶಾಖೆ ರೈಲ್ವೇ ನೌಕರರ ವತಿಯಿಂದ ಹೊಸ ಒಳ ಚರಂಡಿ ವ್ಯವಸ್ಥೆ ಹಾಗೂ ಕುಡಿಯುವ ನೀರಿಗೆ ಆಗ್ರಹಿಸಿ ನಗರದ ರೈಲ್ವೇ ನಿಲ್ದಾಣದಲ್ಲಿ ಪ್ರತಿಭಟನೆ ನಡೆಯಿತು.
ಪ್ರತಿಭಟನಕಾರರನ್ನು ಉದ್ದೇಶಿಸಿ ಮಾತನಾಡಿದ ಸಂಘದ ಮಂಗಳೂರು ಶಾಖೆ ಕಾರ್ಯದರ್ಶಿ ಜಿ. ಆನಂದ, ಎಲ್ಲರೂ ಸ್ವತ್ಛ ಭಾರತ ನಿರ್ಮಾಣದ ಬಗ್ಗೆ ಮಾತನಾಡುತ್ತಾರೆ. ಆದರೆ, ರೈಲ್ವೇ ಕಾಲನಿಯ ಒಳಚರಂಡಿ, ನೀರಿನ ಅವ್ಯವಸ್ಥೆ ಯಾರಿಗೂ ಕಾಣಿಸುತ್ತಿಲ್ಲ. ಇಲ್ಲಿನ ನಿವಾಸಿಗಳ ಬದುಕು “ಸ್ಲಮ್’ ನಿವಾಸಿಗಳಂತಾಗಿದೆ. ಈ ಸಮಸ್ಯೆಗಳನ್ನು ಒಂದು ತಿಂಗಳ ಒಳಗೆ ನಿವಾರಿಸದಿದ್ದಲ್ಲಿ ಎಪ್ರಿಲ್ 3ರಂದು ಸತ್ಯಾಗ್ರಹ ಕೈಗೊಂಡು ರೈಲು ಸಂಚರಿಸದಂತೆ ತಡೆಯುತ್ತೇವೆ ಎಂದು ಎಚ್ಚರಿಸಿದರು.
ಪ್ರಯಾಣಿಕರ ಸುರಕ್ಷೆಗೆ ಆದ್ಯತೆ ನೀಡುವ ನೌಕರರ ಮಕ್ಕಳ ಆರೋಗ್ಯವೇ ಹದಗೆಡುತ್ತಿದೆ. 15 ವರ್ಷಗಳಿಂದ ಒಳಚರಂಡಿ ನೀರು ಹೊರ ಹರಿಯುತ್ತಿದೆ. ಈ ಬಗ್ಗೆ ಡಿವಿಶನ್ ವ್ಯವಸ್ಥಾಪಕರು ಹಾಗೂ ಪಾಲಿಕೆ ಆಯುಕ್ತರಿಗೆ ಮನವಿ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಮಳೆಗಾಲ ಕಳೆದಂತೆ ಹೊಸ ಕೊಳವೆ ಹಾಕಿದರೆ ಸಮಸ್ಯೆ ಪರಿಹಾರವಾಗುತ್ತದೆ ಎಂದು ಆಶ್ವಾಸನೆ ನೀಡುತ್ತಾರೆ ಹೊರತು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದರು.
ಪರೀಕ್ಷೆಗಳು ಹತ್ತಿರವಾಗುತ್ತಿದೆ. ಆದರೆ ಇಲ್ಲಿನ ಮಕ್ಕಳು ಮಲೇರಿಯಾ ಜ್ವರದಿಂದ ಬಳಲುತ್ತಿದ್ದಾರೆ. ಈ ಹಿಂದೆ ರೈಲ್ವೇ ಕಾಲನಿಗೆ 3 ಲಕ್ಷ ಲೀಟರ್ ನೀರು ಪೂರೈಕೆಯಾಗುತಿತ್ತು. ಆದರೆ, ಈಗ ಕೇವಲ 60 ಸಾವಿರ ಲೀಟರ್ ನೀರು ಒದಗಿಸಲಾಗುತ್ತಿದೆ. ಈ ಎಲ್ಲ ಸಮಸ್ಯೆ ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ಹೇಳಿದರು.
ದಕ್ಷಿಣ ರೈಲ್ವೇ ನೌಕರರ ಸಂಘದ ಸಹಾಯಕ ಪ್ರಧಾನ ಕಾರ್ಯದರ್ಶಿ ಕಲೈ ಪೆರುಮಾಳ್ ಮಾತನಾಡಿ, ರೈಲ್ವೇ ಕಾಲನಿಯ ಒಳಚರಂಡಿ ವ್ಯವಸ್ಥೆ ಸರಿಪಡಿಸಿ ಜನರ ಹಾಗೂ ಮಕ್ಕಳ ಆರೋಗ್ಯ ಕಾಪಾಡುವಂತೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಲ್ಲಿ ಮನವಿ ಮಾಡಿದರು.
ಜನಪ್ರತಿನಿಧಿಗಳು ಚುನಾವಣೆ ಸಮಯ ನಮ್ಮಿಂದ ಓಟು ಪಡೆಯಲು ಬರುತ್ತಾರೆ. ಆದರೆ, ನಮ್ಮ ಅಹವಾಲು ಅವರಿಗೆ ಕೇಳಿಸುತ್ತಿಲ್ಲ. ಸದಾನಂದ ಗೌಡರು ರೈಲ್ವೇ ಸಚಿವರಾಗಿದ್ದ ಸಮಯದಲ್ಲೂ ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಒಂದೇ ತಿಂಗಳಲ್ಲಿ ಸುಮಾರು 57 ಮಂದಿ ಜ್ವರದಿಂದ ಬಳಲುತ್ತಿದ್ದಾರೆ ಎಂದು ಅವರು ಹೇಳಿದರು.
ಮಂಗಳೂರು ಶಾಖಾ ಕೋಶಾಧಿಕಾರಿ ರಾಜೇಶ್ ಹಾಗೂ ರೈಲ್ವೇ ಕಾಲನಿ ನಿವಾಸಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡರು.