ಮಂಗಳೂರು,ಮಾರ್ಚ್.04 : ವೆನ್ಲಾಕ್ ಜಿಲ್ಲಾ ಅಸ್ಪತ್ರೆಯಲ್ಲಿ 12 ಬೆಡ್ಗಳ ಸುಸಜ್ಜಿತ ಡಯಾಲಿಸಿಸ್ ಕೇಂದ್ರವನ್ನು ಶೀಘ್ರವೇ ಉದ್ಘಾಟಿಸಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.
ಅವರು ವೆನ್ಲಾಕ್ಗೆ ಭೇಟಿ ನೀಡಿ ಡಯಾಲಿಸಿಸ್ ಕೇಂದ್ರದ ಕಾಮಗಾರಿಗಳನ್ನು ಪರಿಶೀಲಿಸಿದರು. ಇದೊಂದು ರಾಜ್ಯದಲ್ಲೇ ಮಾದರಿ ಡಯಾಲಿಸಿಸ್ ಕೇಂದ್ರವಾಗಲಿದೆ. ವೆಂಟಿಲೇಟರ್ ಅಳವಡಿಕೆ ಮತ್ತು ಹಾಸಿಗೆಗಳನ್ನು ಈಗಾಗಲೇ ತರಲಾಗಿದೆ. ಇತರ ಉಪಕರಣಗಳು ಶೀಘ್ರವೇ ಬರಲಿದೆ ಎಂದು ಅವರು ಹೇಳಿದರು.
ಡಯಾಲಿಸಿಸ್ ಕೇಂದ್ರವನ್ನು ಅತ್ಯಾಧುನಿಕವಾಗಿ ಸಿದ್ದಗೊಳಿಸಲಾಗುವುದು. ರೋಗಿಯ ಡಯಾಲಿಸಿಸ್ಗೆ ಕನಿಷ್ಟ 4 ಗಂಟೆ ಅವಧಿ ತಗಲುವುದರಿಂದ ಕೇಂದ್ರದಲ್ಲಿ ಟಿ.ವಿ. ಅಳವಡಿಸಿ, ಆರೋಗ್ಯಕ್ಕೆ ಸಂಬಂದಿಸಿದ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲಾಗುವುದು. ರೋಗಿಗಳು ನಗುಮುಖದಿಂದಲೇ ಚಿಕಿತ್ಸೆ ಪಡೆಯಬೇಕು. ಎಂಬುದು ನಮ್ಮ ಉದ್ದೇಶ ಎಂದು ಸಚಿವರು ಹೇಳಿದರು. ಡಯಾಲಿಸಿಸ್ಗೆ ಬರುವ ರೋಗಿಯ ಜತೆಗೆ ಆಗಮಿಸುವವರಿಗೂ ಈ ಕೇಂದ್ರದ ಪಕ್ಕದಲ್ಲಿಯೇ ವಿಶ್ರಾಂತಿ ಕೊಠಡಿಯನ್ನು ಸ್ಥಾಪಿಸಲಾಗುತ್ತಿದೆ. ಎಂದರು.
ಕರ್ನಾಟಕ ಬ್ಯಾಂಕ್ ಡಯಾಲಿಸಿಸ್ ಕೇಂದ್ರಕ್ಕೆ 15 ಲಕ್ಷ ರೂಪಾಯಿ ನೆರವು ನೀಡಿದೆ. ಈ ನೆರವು ಹಾಗೂ ಇತರೇ ಮೂಲಗಳಿಂದ ಡಯಾಲಿಸಿಸ್ ಕೇಂದ್ರವನ್ನು ಸುಸಜ್ಜಿತ ಗೊಳಿಸಲಾಗುವುದು ಎಂದರು.
ಜನರಿಕ್ ಜೌಷದ ಕೇಂದ್ರ: ರೋಗಿಗಳಿಗೆ ಅತೀ ಕಡಿಮೆ ದರದಲ್ಲಿ ಜೌಷಧಗಳನ್ನು ನೀಡುವ ಸಲುವಾಗಿ ವೆನ್ಲಾಕ್ನಲ್ಲಿ ಜನರಿಕ್ ಮೆಡಿಕಲ್ನ್ನು ಸ್ಥಾಪಿಸಲಾಗುತ್ತಿದೆ. ವೆನ್ಲಾಕ್ ಮುಖ್ಯದ್ವಾರದ ಪಕ್ಕದಲ್ಲಿ ರೈಲು ನಿಲ್ದಾಣ ರಸ್ತೆಯಲ್ಲಿ ಇದು ಸ್ಥಾಪನೆಯಾಗಲಿದೆ. ಈಗಾಗಲೇ ಕಟ್ಟಡ ನಿರ್ಮಾಣ ಕಾಮಗಾರಿ ನಡೆಯುತ್ತಿದೆ.
ವೆನ್ಲಾಕ್ ಅಲ್ಲದೇ ಇತರೇ ಖಾಸಗಿ ಆಸ್ಪತ್ರೆಗಳ ರೋಗಿಗಳಿಗೂ ಅಗ್ಗದ ದರದಲ್ಲಿ ಇಲ್ಲಿಂದ ಔಷದ ಖರೀದಿಸಬಹುದು ಎಂದು ಸಚಿವ ಯು.ಟಿ.ಖಾದರ್ ತಿಳಿಸಿದರು. ವೆನ್ಲಾಕ್ ಆಸ್ಪತ್ರೆಯ ಅಧೀಕ್ಷಕಿ ಡಾ ರಾಜೆಶ್ವರಿ ದೇವಿ ಈ ಸಂಧರ್ಭದಲ್ಲಿ ಉಪಸ್ಥಿತರಿದ್ದರು.