ಮಂಗಳೂರು, ಮಾ.03: ಟೆಂಪೊವೊಂದರಲ್ಲಿ ಅಕ್ರಮವಾಗಿ ಪಡಿತರ ಅಕ್ಕಿ ಸಾಗಾಟವಾಗುತ್ತಿದೆ ಎಂಬ ಆರೋಪದಲ್ಲಿ ಸಂಘಟನೆಯೊಂದರ ಕಾರ್ಯಕರ್ತರು ಟೆಂಪೊವನ್ನು ಮರೋಳಿಯಲ್ಲಿ ತಡೆದು ಕದ್ರಿ ಪೊಲೀಸರಿಗೆ ಒಪ್ಪಿಸಿದ ಘಟನೆ ಸೋಮವಾರ ನಡೆದಿದೆ.
ಟೆಂಪೊದಲ್ಲಿ ಸುಮಾರು 60 ಅಕ್ಕಿ ಚೀಲಗಳಿದ್ದು, ಮಂಗಳೂರಿನಿಂದ ಬಂಟ್ವಾಳಕ್ಕೆ ಸಾಗಾಟವಾಗುತ್ತಿತ್ತು. ವಾಹನ ಸಮೇತ ಚಾಲಕನನ್ನು ಪೊಲೀಸರ ವಶಕ್ಕೆ ಕೊಡುವ ಸಂದರ್ಭದಲ್ಲಿ ಚಾಲಕನಲ್ಲಿ ಅಕ್ಕಿ ಸಾಗಾಟದ ಬಗ್ಗೆ ಯಾವುದೇ ದಾಖಲೆ ಪತ್ರಗಳು ಇರಲಿಲ್ಲ ಎಂಬುದು ಕಾರ್ಯಕರ್ತರ ಆರೋಪವಾಗಿದೆ.
ಆದರೆ ಸಾಗಾಟಕ್ಕೆ ಸಂಬಂಧಿಸಿ ಚಾಲಕನ ಬಳಿ ದಾಖಲೆ ಪತ್ರಗಳಿದ್ದು, ಕಾನೂನುಬಾಹಿರ ಅಲ್ಲ ಎಂದು ಸ್ಪಷ್ಟಪಡಿಸಿರುವ ಕದ್ರಿ ಠಾಣಾ ಪೊಲೀಸರು, ಅಕ್ಕಿಯನ್ನು ಹೆಚ್ಚಿನ ಪರಿಶೀಲನೆಗಾಗಿ ಆಹಾರ ಇಲಾಖೆಗೆ ಕಳುಹಿಸಿಕೊಡಲಾಗಿದೆ ಎಂದು ತಿಳಿಸಿದ್ದಾರೆ.