ಮಂಗಳೂರು, ಮಾ.1 : ವಿಶ್ವ ಹಿಂದೂ ಪರಿಷತ್ ಸಂಘಟನೆಯ ಸುವರ್ಣ ಮಹೋತ್ಸವವನ್ನು ದೇಶಾದ್ಯಂತ ಹಮ್ಮಿಕೊಂಡಿದೆ. ಈ ಹಿನ್ನೆಲೆಯಲ್ಲಿ ಮಂಗಳೂರಿನ ಕೇಂದ್ರ ಮೈದಾನದಲ್ಲಿ ಮಾ.1ರಂದು ಹಮ್ಮಿಕೊಂಡಿರುವ ಬೃಹತ್ ಹಿಂದೂ ಸಮಾವೇಶಕ್ಕೆ ಒಂದು ಲಕ್ಷ ಜನರು ಬರುವ ನಿರೀಕ್ಷೆ ಇದ್ದು, ಬಹುತೇಕ ಸಿದ್ಧತೆಗಳು ಪೂರ್ಣಗೊಂಡಿದೆ ಎಂದು ಸಮಾವೇಶದ ಗೌರವಾಧ್ಯಕ್ಷ ಎಸ್.ಗಣೇಶ್ ರಾವ್ ತಿಳಿಸಿದ್ದಾರೆ.
ಶನಿವಾರ ನಗರದ ಸಮಾಜೋತ್ಸವ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಉಡುಪಿಯ ಪೇಜಾವರ ಶ್ರೀಯವರ ನೇತೃತ್ವದಲ್ಲಿ ಸಮಾವೇಶ ನಡೆಯಲ್ಲಿದ್ದು, ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಸಮಾವೇಶದ ಅಧ್ಯಕ್ಷತೆ ವಹಿಸಲಿದ್ದಾರೆ.ವಿಶ್ವ ಹಿಂದೂ ಪರಿಷತ್ತಿನ ಕೇಂದ್ರೀಯ ಮಾರ್ಗದರ್ಶಕ ಮಂಡಳಿ ಸದಸ್ಯೆ, ಮಧ್ಯ ಪ್ರದೇಶದ ಸಾದ್ವಿ ಬಾಲಿಕಾ ಸರಸ್ವತಿ ಅವರು ದಿಕ್ಸೂಚಿ ಭಾಷಣ ಮಾಡಲಿದ್ದು, ವಿವಿಧ ಮಠಾಧೀಶರು ಹಾಗೂ ಪ್ರಮುಖರು ಭಾಗವಹಿಸಲಿರುವರು ಎಂದರು.
ಕೇಂದ್ರ ಮೈದಾನಿನಲ್ಲಿ 13 ಅಡಿ ಎತ್ತರದ, 52 ಅಡಿ ಅಗಲದ ಬೃಹತ್ ವೇದಿಕೆ ಸಿದ್ಧಪಡಿಸಲಾಗಿದ್ದು, ಈ ವೇದಿಕೆಗೆ ಕರ್ನಾಟಕದಲ್ಲಿ ವಿಶ್ವ ಹಿಂದೂ ಪರಿಷತ್ತನ್ನು ಬೆಳೆಸಿದ ದಿ| ಸದಾನಂದ ಕಾಕಡೆ ಅವರ ಹೆಸರನ್ನಿಡಲಾಗಿದೆ. ವೇದಿಕೆಯ ಹಿಂಬದಿ ಸುಮಾರು. 300 ಚದರಡಿಯ ಬೃಹತ್ ಎಲ್ಇಡಿ ಸ್ಕ್ರೀನ್ ಅಳವಡಿಸಲಾಗಿದೆ.
ಕಾರ್ಯಕ್ರಮ ನಿಗದಿತ ವೇಳಾಪಟ್ಟಿಯಂತೆ ನಡೆಯಲಿದೆ. ಜಿಲ್ಲಾಡಳಿತ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದು, 700 ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಪ್ಯಾರಾ ಮಿಲಿಟರಿ ಪಡೆಯನ್ನು ಕರೆಸಲಾಗಿದೆ.ಕಾರ್ಯಕ್ರಮಕ್ಕಾಗಿ 400 ಬಸ್ಗಳನ್ನು ವ್ಯವಸ್ಥೆ ಮಾಡಲಾಗಿದೆ. ಪ್ರತಿ ಬಸ್ಗೆ ಸಂಘಟನೆಯ ಒಬ್ಬ ‘ಪ್ರಮುಖ್’ ರನ್ನು ನೇಮಿಸಲಾಗಿದೆ ಎಂದು ಎಂದು ಗಣೇಶ್ ರಾವ್ ತಿಳಿಸಿದ್ದಾರೆ.
ಸಮಾಜೋತ್ಸವವದ ಅಂಗವಾಗಿ ರವಿವಾರ ಮಧ್ಯಾಹ್ನ 2 ಗಂಟೆಗೆ ನಗರದ ಅಂಬೇಡ್ಕರ್ (ಜ್ಯೋತಿ) ವೃತ್ತದಿಂದ ಕೇಂದ್ರ ಮೈದಾನಿಗೆ ಆಕರ್ಷಕ ಶೋಭಾ ಯಾತ್ರೆ ನಡೆಯಲಿದ್ದು, ಸ್ತಬ್ದ ಚಿತ್ರ ವಾಹನಗಳು, ಚೆಂಡೆ ವಾದನ, ಭಜನಾ ತಂಡಗಳು, ಸಾಂಸ್ಕೃತಿಕ ಮತ್ತು ರಾಷ್ಟ್ರ ಪ್ರೇಮವನ್ನು ಬಿಂಬಿಸುವ ವೇಷ ಭೂಷಣಗಳು ಭಾಗವಹಿಸಲಿವೆ. ವೇದಿಕೆಯಲ್ಲಿ ಮಧ್ಯಾಹ್ನ 3 ಗಂಟೆಗೆ ದೇಶ ಭಕ್ತಿ ಗೀತೆ ಹಾಗೂ 4 ಗಂಟೆಗೆ ಸಭಾ ಕಾರ್ಯಕ್ರಮ ಆರಂಭವಾಗಲಿದ್ದು, 5.45ಕ್ಕೆ ಕಾರ್ಯಕ್ರಮ ಸಮಾರೋಪಗೊಳ್ಳಲಿದೆ ಎಂದು ಮೆರವಣಿಗೆ ಸಮಿತಿಯ ಸಂಚಾಲಕ ರಾಜಗೋಪಾಲ ರೈ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ವಿಶ್ವ ಹಿಂದು ಪರಿಷತ್ ಸಂಘಟನೆಯ ಪ್ರಾಂತ ಕಾರ್ಯಾಧ್ಯಕ್ಷ ಎಂ.ಬಿ.ಪುರಾಣಿಕ್, ಜಿಲ್ಲಾಧ್ಯಕ್ಷ ಜಗದೀಶ್ ಶೇಣವ, ಸಂಘಟಕ ಜಿತೇಂದ್ರ ಕೊಟ್ಟಾರಿ ಮೊದಲಾದವರು ಉಪಸ್ಥಿತರಿದ್ದರು