ಮಂಗಳೂರು,ಫೆ.28 : ಸಮಾಜದಲ್ಲಿರುವ ಕೆಲವು ವ್ಯತ್ಯಾಸಗಳನ್ನು ಸರಿಪಡಿಸಿ ಹಿರಿಯರ ಧಯೋದ್ದೇಶದೊಂದಿಗೆ ಸಮಾಜವನ್ನು ಒಟ್ಟಿಗೆ ಕೊಂಡೊಯ್ಯುವ ನಿಟ್ಟಿನಲ್ಲಿ ಬಹಳಷ್ಟು ಸಮಾಜ ಪರ ಕೆಲಸಗಳನ್ನು ಕೈಗೊಳ್ಳಲಾಗುವುದು ಎಂದು ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಮಾಲಾಡಿ ಅಜಿತ್ ಕುಮಾರ್ ರೈ ತಿಳಿಸಿದರು. ಬಂಟ್ಸ್ ಹಾಸ್ಟೇಲ್ನ ಎ.ಬಿ.ಶೆಟ್ಟಿ ಶತಮಾನೋತ್ಸವ ಸಭಾಭವನದಲ್ಲಿ ಶನಿವಾರ ಜರಗಿದ ಬಂಟರ ಯಾನೆ ನಾಡವರ ಮಾತೃಸಂಘ (ರಿ) ದ.ಕ.ಮಂಗಳೂರು ಇದರ 95 ನೇ ವಾರ್ಷಿಕ ಸರ್ವ ಸದಸ್ಯರ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಪ್ರತೀ ತಾಲೂಕಿನಲ್ಲಿ ಭೂಮಿ ಖರೀದಿಯ ಜತೆಗೆ ಅನೇಕ ಕಾರ್ಯಕ್ರಮ ಯೋಜನೆಗಳನ್ನು ರೂಪಿಸಲಾಗುವುದು. ಹಿರಿಯರ ಆಶೋತ್ತರಗಳನ್ನು ಈಡೇರಿಸಲು ಪ್ರಯತ್ನಿಸಲಾಗುವುದು ಎಂದರು. ಏಪ್ರಿಲ್ 2ರಂದು ಬಹಿರಂಗ ಅಧಿವೇಶನದ ಮಹೋನ್ನತ ಕಾರ್ಯಕ್ರಮದಲ್ಲಿ ಸಾಧಕರನ್ನು ಸನ್ಮಾನಿಸಲಾಗುವುದು. ಅದೇ ರೀತಿ ಸಮಾಜದ ಎಲ್ಲಾ ವರ್ಗದವರನ್ನು ಒಂದೇ ಸೂರಿನಡಿ ಸೇರಿಸಲು ಡಿಸೆಂಬರ್ ತಿಂಗಳಲ್ಲಿ ಜಾಗತಿಕ ಬಂಟರ ಸಮ್ಮೇಳನ ನಡೆಸಲಾಗುವುದು ಎಂದು ಅಜಿತ್ಕುಮಾರ್ ರೈ ತಿಳಿಸಿದರು.
ಸಮಾಜದಲ್ಲಿ 40 ಶೇಕಡಾಕ್ಕಿಂತ ಹೆಚ್ಚು ಜನರು ಬಡತನದಲ್ಲಿದ್ದಾರೆ. ಅವರನ್ನು ಸಾಮಾಜಿಕವಾಗಿ ಶೈಕ್ಷಣಿಕವಾಗಿ ಆರ್ಥಿಕವಾಗಿ ಸುದೃಢಗೊಳಿಸುವ ಕಾರ್ಯ ನಡೆಸಲಾಗುವುದು. ಈ ನಿಟ್ಟಿನಲ್ಲಿ ಜಗತ್ತಿನಾದ್ಯಂತ ಇರುವ ಬಂಟ ಬಾಂಧವರ ಸಂಪೂರ್ಣ ಮಾಹಿತಿಗಳನ್ನೊಳಗೊಂಡ ವಿಶ್ವ ಬಂಟರ ಮಾಹಿತಿ ಕೋಶವು ಮುಂದಿನ ದಿನಗಳಲ್ಲಿ ಸಂಘದ ಅಂತರ್ಜಾಲದಲ್ಲಿ ಲಭ್ಯವಾಗುವಂತೆ ಮಾಡುವ ಉದ್ದೇಶ ಇದೆ ಎಂದರು.
ಜೂನ್ ತಿಂಗಳಲ್ಲಿ ಬಂಟ್ಸ್ ಹಾಸ್ಟೆಲ್ನಲ್ಲಿ ನೂತನ ಕಟ್ಟಡ ನಿರ್ಮಾಣಕ್ಕೆ ಚಾಲನೆ ನೀಡಲಾಗುವುದು ಎಂದರು. ಸಭೆಯಲ್ಲಿ ಪ್ರಧಾನ ಕಾರ್ಯದರ್ಶಿ ಮೇಘನಾಥ ಶೆಟ್ಟಿ ವಾರ್ಷಿಕ ವರದಿ ಮಂಡನೆ ಮಾಡಿದರು. ಕೋಶಾಧಿಕಾರಿ ಸಿಎ ಕೆ ಮನಮೋಹನ ಶೆಟ್ಟಿ ವಾರ್ಷಿಕ ಲೆಕ್ಕಪತ್ರಗಳ ಮಂಡನೆ ಮಾಡಿದರು. ವಿದ್ಯಾರ್ಥಿ ಭವನಗಳ, ಶಾಲಾ ಕಾಲೇಜುಗಳ ತಾಲೂಕು ಸಮಿತಿಗಳ ವರದಿ ಮಂಡನೆ ಮಾಡಲಾಯಿತು. ಸಭೆಯಲ್ಲಿ ಎಂ.ಕರುಣಾಕರ ಶೆಟ್ಟಿ, ಎನ್. ನಿವೇಧಿತ ಶೆಟ್ಟಿ, ಚೇತನ್ ಕುಮಾರ್ ಶೆಟ್ಟಿ, ಕೃಷ್ಣಪ್ರಸಾದ ರೈ, ಕಾವು ಹೇಮನಾಥ ಶೆಟ್ಟಿ, ಜಯರಾಮ ಸಾಂತ, ಜಯಕರ ಶೆಟ್ಟಿ ಇಂದ್ರಾಳಿ, ಸಂಪಿಗೆ ಸಂಜೀವ ಶೆಟ್ಟಿ, ಸುನೀಲ್ ಕುಮಾರ್ ಕಾರ್ಕಳ, ಚಂದ್ರಹಾಸ ಶೆಟ್ಟಿ ಬಿ.ಸಿ.ರೋಡ್, ಎಂ.ಜೆ.ಶೆಟ್ಟಿ ಬೆಳ್ತಂಗಡಿ, ದಯಾನಂದ ರೈ ಪುತ್ತೂರು , ದಿವಾಕರ ರೈ ಸುಳ್ಯ, ಪದ್ಮನಾಭ ಶೆಟ್ಟಿ ಕಾಸರಗೋಡು ವರದಿ ಮಂಡಿಸಿದರು.
ಸಭೆಯಲ್ಲಿ ಉಪಾಧ್ಯಕ್ಷ ಕೆಂಚನೂರು ಸೋಮಶೇಖರ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಮೇಘನಾಥ ಶೆಟ್ಟಿ, ಕೋಶಾಧಿಕಾರಿ ಸಿಎಕೆ ಮನಮೋಹನ್ ಶೆಟ್ಟಿ, ಜತೆ ಕಾರ್ಯದರ್ಶಿ ಕಾವು ಹೇಮನಾಥ ಶೆಟ್ಟಿ ಲೆಕ್ಕಪರಿಶೋಧಕ ಎಚ್.ಆರ್.ಶೆಟ್ಟಿ ಉಪಸ್ಥಿತರಿದ್ದರು. ಸಭೆಯಲ್ಲಿ ಲೆಕ್ಕ ಪರಿಶೋಧಕರನ್ನಾಗಿ ಎಚ್.ಆರ್.ಶೆಟ್ಟಿ, ಆಂತರಿಕ ಲೆಕ್ಕಪರಿಶೋಧಕರನ್ನಾಗಿ ಜಯರಾಮ ಶೆಟ್ಟಿ ಅವರನ್ನು ಆಯ್ಕೆಮಾಡಲಾಯಿತು. ಕೆಂಚನೂರು ಸೋಮಶೇಖರ ಶೆಟ್ಟಿ ವಂದಿಸಿದರು. ಸುಖೇಶ್ ಚೌಟ ಕಾರ್ಯಕ್ರಮ ನಿರ್ವಹಿಸಿದರು.