ಮಂಗಳೂರು,ಫೆ.25 : ನಗರದ ಎಂ.ಜಿ ರಸ್ತೆಯಲ್ಲಿರುವ ಎಂಪೈರ್ ಮಾಲ್ನ ಮೂರನೇ ಮಹಡಿಯಲ್ಲಿ ಕ್ರೆಡೈ ಮಂಗಳೂರು ಘಟಕದ ಸ್ವಂತ ಕಚೇರಿ ಆರಂಭಗೊಂಡಿಡ್ಡು ಬುಧವಾರ ಕ್ರೆಡೈ ರಾಜ್ಯ ಘಟಕದ ಅಧ್ಯಕ್ಷ ನಾಗರಾಜ ರೆಡ್ಡಿ ನೂತನ ಕಚೇರಿಗೆ ಚಾಲನೆ ನೀಡಿದರು. ಈ ಸಂದರ್ಭ ಮಾತನಾಡಿದ ಅವರು, ಕಟ್ಟಡ ನಿರ್ಮಾಣದಲ್ಲಿ ತೊಡಗಿಕೊಂಡಿರುವ ಉದ್ಯಮಿಗಳು ಗುಣಮಟ್ಟಕ್ಕೆ ವಿಶೇಷ ಆದ್ಯತೆ ನೀಡಬೇಕು. ಹೊರಗಿನಿಂದ ಬಂದು ವಸತಿ ಸಮುಚ್ಛಯಗಳನ್ನು ನಿರ್ಮಿಸುವ ಬಿಲ್ಡರ್ಗಳಿಗಿಂತಲೂ ಸ್ಥಳೀಯ ಬಿಲ್ಡರ್ಗಳ ಮೇಲೆ ಗ್ರಾಹಕರು ಹೆಚ್ಚಿನ ನಂಬಿಕೆ, ವಿಶ್ವಾಸ ಹೊಂದಿರುತ್ತಾರೆ. ಗುಣಮಟ್ಟದ ಕಟ್ಟಡಗಳನ್ನು ನಿರ್ಮಿಸುವ ಮೂಲಕ ಮಂಗಳೂರು ಕ್ರೆಡೈ ಘಟಕ ಉತ್ತಮ ಕೆಲಸಗಳನ್ನು ಮಾಡಲಿ ಎಂದು ಶುಭ ಹಾರೈಸಿದರು.
ಕ್ರೆಡೈ ನೂತನ ಕಚೇರಿಯ ಫಲಕವನ್ನು ಮೂಡಾ ಆಯುಕ್ತ ಮೊಹಮ್ಮದ್ ನಝೀರ್ ಅನಾವರಣಗೊಳಿಸಿದರು. ನಗರದ ಬೆಳವಣಿಗೆಯಲ್ಲಿ ಉದ್ಯಮಿಗಳ ಕೊಡುಗೆಯೂ ಮುಖ್ಯವಾದುದು. ಕ್ರೆಡೈವತಿಯಿಂದ ನಗರದ ಅಭಿವೃದ್ಧಿಗೆ ಹೆಚ್ಚಿನ ಸಹಕಾರ ದೊರೆಯಲಿ ಎಂದವರು ಆಶಿಸಿದರು.
ಕ್ರೆಡೈ ರಾಜ್ಯ ಘಟಕದ ನಿಯೋಜಿತ ಅಧ್ಯಕ್ಷ ಜಗದೀಶ್ ಬಾಬು, ಪ್ರಧಾನ ಕಾರ್ಯದರ್ಶಿ ಶ್ರೀರಾಮ್, ಉಪಾಧ್ಯಕ್ಷ ಪಿಎಂಎ ರಜಾಕ್, ಮಂಗಳೂರು ಘಟಕದ ಕಾರ್ಯದರ್ಶಿ ಗಣೇಶ್ ಬಂಗೇರ, ಉಪಾಧ್ಯಕ್ಷ ಡಿ.ಬಿ.ಮೆಹ್ತಾ ಉಪಸ್ಥಿತರಿದ್ದರು.
ಕ್ರೆಡೈ ಮಂಗಳೂರು ಘಟಕದ ಅಧ್ಯಕ್ಷ ಪುಷ್ಪರಾಜ ಜೈನ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ವಿನೋದ್ ಪಿಂಟೋ ವಂದಿಸಿದರು. ಪತ್ರಕರ್ತ ಮನೋಹರ ಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು