ಮೂಲ್ಕಿ,ಫೆ.24 :ಯಕ್ಷಗಾನ, ನಾಟಕ, ನೃತ್ಯ, ಜಾನಪದ ಹೀಗೆ ಎಲ್ಲಾ ರಸಾನುಭವಗಳ ಕಲೆಗಳ ಉಗಮ ಸ್ಥಾನವಾಗಿ ಕರಾವಳಿ ಮೂಡಿದ್ದು ಇಲ್ಲಿನ ಸಂಸ್ಕೃತಿ, ಸಂಸ್ಕಾರಕ್ಕೂ ಬಹುದೊಡ್ಡ ಕೊಡುಗೆಯನ್ನು ಸಹ ನೀಡುತ್ತಿದೆ ಇಂತಹ ಪ್ರದೇಶದಲ್ಲಿ ಸಾಹಿತಿಗಳಿಂದ ಹೊಸತನದ ಅವಿಷ್ಕಾರ ನಡೆದರು ಅದರ ಮೂಲ ಸ್ವರೂಪಕ್ಕೆ ಧಕ್ಕೆ ಆಗಬಾರದು ಎಂದು ಸಾಹಿತಿ ಎನ್.ಪಿ.ಶೆಟ್ಟಿ ಮೂಲ್ಕಿ ಹೇಳಿದರು.
ಅವರು ಕಿನ್ನಿಗೋಳಿಯ ಅನುಗ್ರಹ ಬಯಲು ಮಂಟಪದಲ್ಲಿ ಕಿನ್ನಿಗೋಳಿ ಅನಂತ ಪ್ರತಿಭಾ ಪ್ರಕಾಶನದ ಸಂಯೋಜನೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದಲ್ಲಿ ನಡೆದ ಯಕ್ಷಕವಿರತ್ನ ಬಿರುದು ನೀಡುವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಮುಂಬೈಯ ಹಿರಿಯ ಸಾಹಿತಿ ಕೆ.ಜಿ.ಮಲ್ಯ ಅಧ್ಯಕ್ಷತೆಯನ್ನು ವಹಿಸಿದ್ದರು. ಹಿರಿಯ ಸಾಹಿತಿ ನಿವೃತ್ತ ಉಪನ್ಯಾಸಕ ಶ್ರೀಧರ್ ಡಿ.ಎಸ್.ರಿಗೆ ಯಕ್ಷಕವಿರತ್ನ ಬಿರುದನ್ನು ನೀಡಿ ಸನ್ಮಾನಿಸಲಾಯಿತು.
ಯಕ್ಷಗಾನ ಅರ್ಥಧಾರಿ ಅನಂತ ಬೈಪಡಿತ್ತಾಯ, ರಘುರಾಮ ರಾವ್, ಅರುಣಕುಮಾರ್ ಡಿ.ಎಸ್. ಅನಂತ ಪ್ರತಿಭಾ ಪ್ರಕಾಶನದ ಸಂಚಾಲಕ ಉದಯ ಕುಮಾರ್ ಹಬ್ಬು, ಲಕ್ಷ್ಮೀಶ ಶಾಸ್ತ್ರಿ ಹಾಜರಿದ್ದರು.
ಶ್ರೀಧರ್ ಡಿ. ಎಸ್. ರಚಿಸಿರುವ “ಸತ್ವ ಶೈಥಿಲ್ಯ” ಪ್ರಸಂಗವನ್ನು ತಾಳಮದ್ದಲೆ ರೂಪದಲ್ಲಿ ಜಿಲ್ಲೆಯ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ನಡೆಯಿತು.
_ನರೇಂದ್ರ ಕೆರೆಕಾಡು