ಕಾರ್ಕಳ,ಫೆ.24 : ಯಕ್ಷಗಾನ ಕಲಾವಿದ ದಿ.ವೆಂಕಟ್ರಾವ್ ಪ್ರಶಸ್ತಿಯನ್ನು ಕಟೀಲು ಮೇಳದ ಹಿರಿಯ ಕಲಾವಿದ ರೆಂಜಾಳ ರಾಮಕೃಷ್ಣ ರಾವ್ ಅವರಿಗೆ ಕುಕ್ಕುಂದೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಡೆದ ಸಮಾರಂಭದಲ್ಲಿ ಪ್ರದಾನ ಮಾಡಲಾಯಿತು. ಪ್ರಶಸ್ತಿ ಪ್ರದಾನ ಮಾಡಿದ ಜೈನ ಮಠದ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿ ಮಾತನಾಡಿ, ಯಕ್ಷಗಾನ ಮತ್ತು ತಾಳಮದ್ದಲೆ ನಮ್ಮ ಸನಾತನ ಪರಂಪರೆ ಮತ್ತು ಸಂಸ್ಕೃತಿ ತಿಳಿಯಲು ಸಹಕಾರಿ. ಇದರಿಂದ ಸಾತ್ವಿಕ ಗುಣ ವೃದ್ಧಿಸುತ್ತದೆ ಎಂದರು.
ಕಲಾವಿದ ಪಾತ್ರದ ಕುರಿತು ಅಧ್ಯಯನ ಮತ್ತು ಚಿಂತನೆ ನಡೆಸುವ ಅಗತ್ಯ ಇದೆ ಎಂದು ಸನ್ಮಾನ ಸ್ವೀಕರಿಸಿದ ರೆಂಜಾಳ ರಾಮಕೃಷ್ಣ ರಾವ್ ಹೇಳಿದರು. ಪ್ರಧಾನ ಅರ್ಚಕ ಶಂಕರನಾರಾಯಣ ಭಟ್ ಮಾತನಾಡಿ, ಶ್ರೀಮಂತ ಕಲೆ ಯಕ್ಷಗಾನದಿಂದ ರಾಮಾಯಣ, ಮಹಾಭಾರತ ಮೊದಲಾದ ಪುರಾಣ ತಿಳಿಯಲು ಸಾಧ್ಯ ಎಂದು ಹೇಳಿದರು.
ಈ ಸಂದರ್ಭ ವೇದಮೂರ್ತಿ ಸದಾಶಿವ ಭಟ್, ಜಯಕರ ರಾವ್ ಕುಂಜಾರುಗಿರಿ, ಶಂಕರ ಮಡಿವಾಳ ಶಂಕರಬೆಟ್ಟು, ಶ್ಯಾಮ ಶೆಟ್ಟಿ ಕೊಡ್ಯೇಲು ಅವರನ್ನು ಸನ್ಮಾನಿಸಲಾಯಿತು. ಆಡಳಿತ ಮೊಕ್ತೇಸರ ರತ್ನರಾಜ ಮುದ್ಯ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಮುಖ್ಯೋಪಾಧ್ಯಾಯ ಜಗದೀಶ ಹೆಗ್ಡೆ, ಕಲಾವಿದ ಕರ್ಜೆ ಶ್ರೀಧರ ಹೆಬ್ಬಾರ್, ಬೈಲೂರು ಡಾ.ಮಂಜುನಾಥ ಕಿಣಿ, ಉದ್ಯಮಿ ಗಣಪತಿ ಪೈ, ಉದಯ ವಿ.ಶೆಟ್ಟಿ, ಹರೀಶ್ ನಾಯಕ್ ಕಂಗಿತ್ಲು, ಶ್ರೀನಿವಾಸ ರಾವ್ ಇದ್ದರು.
ಬೆಳುವಾಯಿ ಯಕ್ಷದೇವಾನಂದ ಮಂಡಳಿಯ ದೇವಾನಂದ ಭಟ್ ಸಂಸ್ಮರಣ ಭಾಷಣ ಮಾಡಿದರು. ವಕೀಲ ಶ್ರೀರಮಣ ಆಚಾರ್ಯ ಅಭಿನಂದನೆ ಭಾಷಣ ಮಾಡಿದರು. ಸಂಯೋಜಕ ಉದಯ ರಾವ್ ಸ್ವಾಗತಿಸಿದರು. ರಾಜೇಂದ್ರ ಪ್ರಸಾದ್ ಪ್ರಶಸ್ತಿ ಪತ್ರ ವಾಚಿಸಿದರು. ಶಂಕರ ದೇವಾಡಿಗ ವಂದಿಸಿದರು. ಪ್ರಸಾದ್ ಐಸಿರ ನಿರೂಪಿಸಿದರು