ಬಂಟ್ವಾಳ,ಫೆ.21 : ತುಂಬೆ ಹೊಸ ಡ್ಯಾಂ ಕಾಮಗಾರಿ ಯೋಜನೆಗೆ ರಾಜ್ಯ ಸರಕಾರದಿಂದ 75 ಕೋಟಿ ಹಾಗೂ ಮನಪಾದಿಂದ 23 ಕೋಟಿ ರೂ. ಬಿಡುಗಡೆಯಾಗಿದ್ದು, ಅನುದಾನದ ಯಾವುದೇ ಕೊರತೆ ಎದುರಾಗುವುದಿಲ್ಲ. ಹೊಸ ಡ್ಯಾಂನಲ್ಲಿ 4 ಮೀಟರ್ ನೀರು ಶೇಖರಿಸಿ, ಬಳಿಕ ಇದರ ಅಧ್ಯಯನ ಮಾಡಿ ಮುಂದಿನ ಯೋಜನೆಯನ್ನು ರೂಪಿಸಲಾಗುವುದು ಹಾಗೂ ನೇತ್ರಾವತಿ ನದಿ ತಿರುವಿನ ಬಗ್ಗೆ ಇನ್ನೂ ಯಾರು ಮಾತನಾಡುವಂತಿಲ್ಲ. ಯಾಕೆಂದರೆ ಅದೊಂದು ಮುಗಿದ ಅಧ್ಯಾಯ ಎಂದು ಸಂಸದ, ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯಿಲಿ ಅವರು ಶನಿವಾರ ತುಂಬೆಯ ಹೊಸ ಡ್ಯಾಂ ಕಾಮಗಾರಿ ವೀಕ್ಷಿಸಿ ಮಾತನಾಡಿದರು.
ಡಿಸೆಂಬರ್ ಅಂತ್ಯದೊಳಗೆ ಡ್ಯಾಂ ಕಾಮಗಾರಿ ಪೂರ್ಣಗೊಳ್ಳಲಿದೆ. ಅನುದಾನ ಕೊರತೆಯಿಂದಾಗಿ ಸ್ಥಗಿತಗೊಂಡಿರುವ ತುಂಬೆ ಡ್ಯಾಂ ಕಾಮಗಾರಿ, ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಸರಕಾರ ಅಸ್ತಿತ್ವ ಬಂದ ಬಳಿಕ ತ್ವರಿತಗೊಂಡಿದೆ. ಸ್ಥಳೀಯರ ದಾರಿ ಹಕ್ಕು ಹಾಗೂ ಕೃಷಿಕರ ನೀರಿನ ಹಕ್ಕು ನೀಡುವ ಬಗ್ಗೆ ನಗರಾಭಿವೃದ್ಧಿ ಸಚಿವ ವಿನಯ ಕುಮಾರ್ ಸೊರಕೆ ಹಾಗೂ ಉನ್ನತಾಧಿಕಾರಿ ಗಳೊಂದಿಗೆ ಚರ್ಚಿಸಿ ಕ್ರಮ ಜರುಗಿಸಲಾಗುವುದು ಎಂದು ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಪ್ರತಿಕ್ರಿಯಿಸಿದರು.
ವಿಧಾನ ಸಭಾ ಪರಿಷತ್ ಸದಸ್ಯ ಐವನ್ ಡಿಸೋಜ, ಮನಪಾ ಮೇಯರ್ ಮಹಾಬಲ ಮಾರ್ಲ, ಉಪಮೇಯರ್ ಕವಿತಾ, ಕಾರ್ಪೊರೇಟರ್ಗಳಾದ ಶೈಲಜಾ, ಅಪ್ಪಿ, ಜೆಸಿಂತಾ, ಕೇಶವ, ಅಶೋಕ್ ಡಿ.ಕೆ, ಭಾಸ್ಕರ್, ಶಶಿಧರ್ ಹೆಗ್ಡೆ, ಜಿಪಂ ಸದಸ್ಯರಾದ ಮಮತಾ ಗಟ್ಟಿ, ಚಂದ್ರಪ್ರಕಾಶ್ ಶೆಟ್ಟಿ, ಪ್ರಮುಖರಾದ ಸುದರ್ಶನ್ ಜೈನ್, ಎಸ್. ಅಬ್ಬಾಸ್ ಸಜೀಪ, ಕೆ.ಪದ್ಮನಾಭ ರೈ, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಯೋಜನೆ ಮಂಡಳಿಯ ಕಾರ್ಯನಿರ್ವಹಕ ಎಂಜಿನಿಯರ್ ರಾಜಶೇಖರ್, ಸಹಾಯಕ ಕಾರ್ಯನಿರ್ವಹಕ ಎಂಜಿನಿಯರ್ ನರೇಶ್ ಶೆಣೈ, ಸಹಾಯಕ ಎಂಜಿನಿಯರ್ ಶೀನ ಮೂಲ್ಯ ಮತ್ತಿತರು ಉಪಸ್ಥಿತರಿದ್ದರು.