ಕನ್ನಡ ವಾರ್ತೆಗಳು

ಮುಂಬಾಯಿ ವ್ಯಕ್ತಿಯ ಶವ ಧರ್ಮಸ್ಥಳದಲ್ಲಿ ಪತ್ತೆ : ಕೊಲೆ ಪ್ರಕರಣ ದಾಖಲು: ಓರ್ವ ಪೊಲೀಸ್ ವಶ

Pinterest LinkedIn Tumblr

Mubai_Man_Murder_1

ಬೆಳ್ತಂಗಡಿ,ಫೆ.21 : ಮುಂಬಯಿಯಲ್ಲಿ ನಾಪತ್ತೆಯಾಗಿದ್ದ ವ್ಯಕ್ತಿಯದ್ದು ಎನ್ನಲಾದ ಮೃತದೇಹವೊಂದು ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ಶುಕ್ರವಾರ ಧರ್ಮಸ್ಥಳ ಗ್ರಾಮದ ದೊಂಡೋಲೆ ಸಮೀಪ ಪತ್ತೆಯಾಗಿದೆ.

ಇದೊಂದು ವ್ಯವಸ್ಥಿತ ಕೊಲೆ ಪ್ರಕರಣ ಎಂಬುದು ಮೇಲ್ನೋಟಕ್ಕೆ ಸ್ಪಷ್ಟವಾಗುತ್ತಿದೆ. ಮುಂಬಯಿ ಪೊಲೀಸರು ಬಳ್ಳಾರಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸರ ಸಹಕಾರದೊಂದಿಗೆ ನಡೆಸಿದ ತನಿಖೆಯಲ್ಲಿ ಕೊಲೆ ಪ್ರಕರಣ ಬೆಳಕಿಗೆ ಬಂದಿದ್ದು, ಹಲವರನ್ನು ವಶಕ್ಕೆ ತೆಗೆದುಕೊಂಡು ತನಿಖೆ ನಡೆಸಲಾಗುತ್ತಿದೆ.

ಘಟನೆ ಹಿನ್ನೆಲೆ: ಮುಂಬಯಿ ನಿವಾಸಿ ಸುಮಾರು 62 ವರ್ಷದ ರಾಮದಾಸ್ ಎಂಬವರು ಕಳೆದ ನವೆಂಬರ್ ತಿಂಗಳಲ್ಲಿ ಮುಂಬಯಿಯಿಂದ ನಾಪತ್ತೆಯಾಗಿದ್ದರು. ಈ ಬಗ್ಗೆ ಅವರ ಮನೆಯವರು ಮುಂಬಯಿ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿತ್ತು.

ಘಟನೆ ಸಂಬಂಧ ಮುಂಬಯಿ ಪೊಲೀಸರು ತನಿಖೆಗೆ ಇಳಿದಾಗ ಮನೆಯವರು ನೀಡಿದ ಮೊಬೈಲ್ ನಂಬರ್ ಮತ್ತು ಸೆಟ್‌ನ ಇಎಂಐಇ ನಂಬರ್ ಪೊಲೀಸರ ನೆರವಿಗೆ ಬಂದಿದೆ. ಕೆಲವು ಸಮಯಗಳ ವರೆಗೆ ಮೊಬೈಲ್ ಸ್ವಿಚ್ಡ್ ಆಫ್ ಆಗಿದದು, ಇತ್ತೀಚಿನ ದಿನಗಳಲ್ಲಿ ಆ ಮೊಬೈಲ್ ಸೆಟ್ ಬಳ್ಳಾರಿಯಲ್ಲಿ ಬಳಕೆಯಾಗುತ್ತಿರುವುದು ಪತ್ತೆಯಾಗಿತ್ತು.

Mubai_Man_Murder_2

ಇದರ ಬೆನ್ನತ್ತಿದ ಮುಂಬಯಿ ಪೊಲೀಸರು ಬಳ್ಳಾರಿ ಪೊಲೀಸರ ಸಹಕಾರದೊಂದಿಗೆ ಸ್ಥಳೀಯರ ತಂಡವೊಂದನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಅವರ ವಿಚಾರಣೆ ವೇಳೆ ವಶದಲ್ಲಿರುವ ತಂಡ ಬೆಳ್ತಂಗಡಿ ತಾಲೂಕಿನಲ್ಲಿ ಕೂಲಿ ಕಾರ್ಮಿಕರಾಗಿ ದುಡಿಯುತ್ತಿದ್ದು, ಧರ್ಮಸ್ಥಳ ಸಮೀಪ ವ್ಯಕ್ತಿಯೊಬ್ಬನನ್ನು ಕೊಲೆ ಮಾಡಿ ಹಣ, ಮೊಬೈಲ್ ಮತ್ತು ಇತರ ಸೊತ್ತುಗಳನ್ನು ದೋಚಿರುವುದಾಗಿ ಮಾಹಿತಿ ನೀಡಿದ್ದರು.

ಧರ್ಮಸ್ಥಳದಲ್ಲಿ ತನಿಖೆ:

ಆರೋಪಿಗಳು ನೀಡಿದ ಮಾಹಿತಿ ಆಧಾರದಲ್ಲಿ ಆರೋಪಿಗಳನ್ನು ಬೆಳ್ತಂಗಡಿಗೆ ಕರೆ ತಂದ ಬಳ್ಳಾರಿ ಪೊಲೀಸರು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರನ್ನು ಸಂಪರ್ಕಿಸಿ ಆರೋಪಿಗಳನ್ನು ಧರ್ಮಸ್ಥಳದ ದೊಂಡೋಲೆಗೆ ಕರೆದೊಯ್ದು ತನಿಖೆ ನಡೆಸಿದ್ದಾರೆ.

ಶುಕ್ರವಾರ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಶರಣಪ್ಪ ನೇತೃತ್ವದಲ್ಲಿ ಧರ್ಮಸ್ಥಳ ಗ್ರಾಮದ ದೊಂಡೋಲೆ ಪವರ್ ಪ್ರಾಜೆಕ್ಟ್ ಸಮೀಪದ ನದಿ ಕಿನಾರೆಯಲ್ಲಿ ಆರೋಪಿಯೊಂದಿಗೆ ಹುಡುಕಾಟ ನಡೆಸಿದಾಗ ಅಪರಿಚಿತ ವ್ಯಕ್ತಿಯ ಕೊಳೆತ ಸ್ಥಿತಿಯಲ್ಲಿರುವ ಶವ ಪತ್ತೆಯಾಗಿದೆ. ಘಟನಾ ಸ್ಥಳಕ್ಕೆ ಮಂಗಳೂರಿನಿಂದ ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೃತದೇಹದ ಬಗ್ಗೆ ಗೊಂದಲ:

ಮುಂಬಯಿಯಲ್ಲಿ ನಾಪತ್ತೆಯಾಗಿದ್ದ ರಾಮದಾಸ್ ಅವರ ಕುಟುಂಬಸ್ಥರು ಶುಕ್ರವಾರ ಘಟನಾ ಸ್ಥಳದಲ್ಲಿ ಮೃತದೇಹವನ್ನು ನೋಡಿದ ಬಳಿಕ ಕೆಲ ಅನುಮಾನಗಳನ್ನು ವ್ಯಕ್ತಪಡಿಸಿದ್ದಾರೆ. ಇದು ರಾಮ್‌ದಾಸ್ ಅವರ ಶವ ಆಗಿರುವ ಸಾಧ್ಯತೆ ಕಡಿಮೆ ಎಂದು ಪೊಲೀಸರಲ್ಲಿ ಸಂಬಂಧಿಕರು ಹೇಳಿದ್ದಾರೆ. ಈ ಹೇಳಿಕೆ ತನಿಖೆ ನಡೆಸುತ್ತಿರುವ ಪೊಲೀಸರಲ್ಲಿ ಗೊಂದಲ ಮೂಡಿಸಿದೆ. ಇದು ರಾಮದಾಸ್ ಮೃತದೇಹ ಅಲ್ಲದಿದ್ದಲ್ಲಿ ಸಿಕ್ಕಿರುವ ಮೃತದೇಹ ಯಾರದ್ದು ಎಂಬ ಪ್ರಶ್ನೆ ಎದ್ದಿದೆ. ಇದೀಗ ಪೊಲೀಸ್ ವಶದಲ್ಲಿರುವ ತಂಡ ಇನ್ನಷ್ಟು ಪ್ರಕರಣಗಳಲ್ಲಿ ಭಾಗಿಯಾಗಿರಬಹುದೇ ಎಂಬ ಅನುಮಾನುಗಳು ಪೊಲೀಸರನ್ನು ಕಾಡುತ್ತಿದೆ. ಈ ನಿಟ್ಟಿನಲ್ಲಿಯೂ ತನಿಖೆ ಮುಂದುವರಿಯುತ್ತಿದೆ.

ಡಿಎನ್‌ಎ ಪರೀಕ್ಷೆ: ಪತ್ತೆಯಾದ ಮೃತದೇಹ ಯಾರದ್ದು ಎಂಬುದನ್ನು ನಿಖರವಾಗಿ ಪತ್ತೆಹಚ್ಚಲು ಡಿಎನ್‌ಎ ಪರೀಕ್ಷೆ ನಡೆಸಲಾಗುವುದು ಎಂದು ಎಸ್.ಪಿ.ಡಾ.ಎಸ್‌ಡಿ.ಶರಣಪ್ಪ ವಿಜಯ ಕರ್ನಾಟಕಕ್ಕೆ ತಿಳಿಸಿದ್ದಾರೆ. ಪತ್ತೆಯಾದ ಮೃತದೇಹದ ಸ್ಯಾಂಪಲ್‌ನ್ನು ಹಾಗೂ ಮುಂಬಯಿಯಿಂದ ಬಂದ ರಾಮದಾಸ್ ಅವರ ಕುಟುಂಬದವರ ಸ್ಯಾಂಪಲ್‌ನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗುವುದು. ಇದಕ್ಕೆ ಕುಟುಂಬದ ಸದಸ್ಯರು ಕೂಡಾ ಒಪ್ಪಿಗೆ ಸೂಚಿಸಿದ್ದಾರೆ. ವರದಿ ಬಂದ ಬಳಿಕ ಸ್ಪಷ್ಟ ಚಿತ್ರಣ ಲಭ್ಯವಾಗಲಿದೆ ಎಂದು ಎಸ್‌ಪಿ ತಿಳಿಸಿದ್ದಾರೆ.

ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಎಸ್‌ಪಿ ಡಾ.ಎಸ್.ಡಿ.ಶರಣಪ್ಪ ಮಾರ್ಗದರ್ಶನದಲ್ಲಿ ಬಂಟ್ವಾಳ ಎಎಸ್‌ಪಿ ರಾಹುಲ್ ಕುಮಾರ್, ಬೆಳ್ತಂಗಡಿ ಸರ್ಕಲ್ ಇನ್‌ಸ್ಪೆಕ್ಟರ್ ಬಿ.ಆರ್.ಲಿಂಗಪ್ಪ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ.

Write A Comment