ಮಂಗಳೂರು,ಫೆ.20 : ಕೃಷಿ ನಮ್ಮ ಬದುಕನ್ನು ರೂಪಿಸುವ ತಾಕತ್ತು ಹೊಂದಿದೆ. ಹಾಗಾಗಿ ಯುವ ಜನರು ಯಾವುದೇ ಕಾರಣಕ್ಕೂ ಭೂಮಿಯನ್ನು ಬರಡಾಗಿರಿಸಲು ಬಿಡದೇ ಆಹಾರ ಉತ್ಪಾದನೆಗೆ ಮುಂದಾಗಬೇಕು. ಯಾವುದೇ ಉದ್ಯೋಗದ ಜತೆಯಲ್ಲಿದ್ದರೂ ಕೃಷಿಯೊಂದಿಗೆ ಕೈಜೋಡಿಸಿ ಸ್ವಾವಲಂಬೀ ಕೃಷಿ ರಾಷ್ಟ್ರದ ಕನಸನ್ನು ನನಸಾಗಿಸಬೇಕು ಎಂದು ಪ್ರಗತಿಪರ ಕೃಷಿಕ, ಒಡ್ಡೂರು ಫಾರ್ಮ್ಸ್ನ ಉಳೆಪಾಡಿಗುತ್ತು ರಾಜೇಶ್ ನಾಕ್ ಹೇಳಿದರು. ಬೆಂಜನಪದವು ಕೆನರಾ ಇಂಜಿನೀಯರಿಂಗ್ ಕಾಲೇಜಿನಲ್ಲಿ ಗುರುವಾರ ರಾಜ್ಯಮಟ್ಟದ ಅಂತರ್ ಕಾಲೇಜು ತಾಂತ್ರಿಕ, ಸಾಂಸ್ಕೃತಿಕ ಉತ್ಸವ ಆಕೃತಿ 2015 ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಹಸಿರು ಕ್ರಾಂತಿಂ ನೆಪದಲ್ಲಿ ಕೆಮಿಕಲ್ ಕೃಷಿ ಜನತೆಯ ಅನಾರೋಗ್ಯಕ್ಕೆ ಕಾರಣವಾಗಿದೆ. ಆದರೆ ಸಾವಯವ ಕೃಷಿಯನ್ನು ಪ್ರೋತ್ಸಾಹಿಸುವುದು ನಮ್ಮ ಕರ್ತವ್ಯ ಎಂದ ಅವರು 40 ಸಾವಿರ ಹೆಕ್ಟೇರ್ ಭತ್ತ ಬೆಳೆಯುತ್ತಿದ್ದ ದ.ಕ ಜಿಲ್ಲೆಯ ಗತ ವೈಭವ ಮರಳಿಸಲು ಕೃಷಿ ಕ್ರಾಂತಿಯ ಪ್ರಯೋಗವನ್ನು ನಡೆಸುತ್ತಿರುವುದಾಗಿ ಅವರು ಹೇಳಿದರು. ಕಾಲೇಜಿನ ಆಡಳಿತ ಮಂಡಳಿ ಕೆನರಾ ಹೈಸ್ಕೂಲ್ ಎಸೊಸಿಯೆಶನ್ ಅಧ್ಯಕ್ಷ ಎಸ್.ಎಸ್. ಕಾಮತ್ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ ಸ್ವಾವಲಂಬನೆಯಿಂದ ಪ್ರಗತಿ ಸಾಧ್ಯವಾಗುತ್ತದೆ ಎಂದರು.
ಆಡಳಿತ ಮಂಡಳಿ ಉಪಾಧ್ಯಕ್ಷ ಎಂ.ಅಣ್ಣಪ್ಪ ಪೈ, ಕಾರ್ಯದರ್ಶಿ ಎಂ.ರಂಗನಾಥ್ ಭಟ್, ಕಾಲೇಜಿನ ಸಂಚಾಲಕ ಎಂ. ಪದ್ಮನಾಭ ಪೈ,ಕಾರ್ಯಕಾರಿ ಸಮಿತಿ ಸದಸ್ಯ ಬಸ್ತಿ ಪುರುಷೋ ತ್ತಮ ಶೆಣೈ, ಎಂ.ಗಣೇಶ್ ಕಾಮತ್, ಕಸ್ತೂರಿ ಶ್ರೀಕಾಂತ ಪೈ, ಆಕೃತಿ ಸಮನ್ವಯಕಾರ ಎನ್, ಸತೀಶ್ ಕುಮಾರ್ , ವಿದ್ಯಾರ್ಥಿ ಸಂಘದ ನಾಯಕ ಸರ್ವೇಶ್ ವಾಘ್ ಉಪಾಧ್ಯಕ್ಷ ರೇಷ್ಮಾ ಸುಂದರ್ ರಾವ್, ಕಾರ್ಯದರ್ಶಿ ರಾಕೇಶ್ ಉಪಸ್ಥಿತರಿದ್ದರು.
ಪ್ರಾಂಶುಪಾಲ ಡಾ.ಗಣೇಶ್ ವಿ.ಭಟ್ ಸ್ವಾಗತಿಸಿದರು. ಆಡಳಿತಾಧಿಕಾರಿ ಎಂ.ಗಣೇಶ್ ಕಾಮತ್ ಅತಿಥಿಗಳನ್ನು ಪರಿಚಯಿಸಿದರು. ಡಾ.ಎನ್.ವೆಂಕಟೇಶ್ ವಂದಿಸಿದರು. ಪ್ರಾಧ್ಯಾಪಕಿ ಅಕ್ಷತಾ ಭಟ್ ಕಾರ್ಯಕ್ರಮ ನಿರ್ವಹಿಸಿದರು.