ಮಂಗಳೂರು,ಫೆ.14 : ನಗರದ ಕದ್ರಿ ಪಾರ್ಕ್ನಲ್ಲಿ ವಿಹಾರಕ್ಕಾಗಿ ಬಂದ ಅಪ್ರಾಪ್ತ ಜೋಡಿಗಳಿಗೆ ಮದುವೆ ಮಾಡಲು ಹೊರಟ ಹಿಂದೂ ಮಹಾ ಸಭಾದ ಕಾರ್ಯಕರ್ತರನ್ನು ಕದ್ರಿ ಪೊಲೀಸರು ವಶಕ್ಕೆ ತೆಗೆದುಕೊಂಡ ಘಟನೆ ಶನಿವಾರ ನಡೆದಿದೆ.
ವಾಲೆಂಟೈನ್ ಡೇ ಅಂಗವಾಗಿ ಮಂಗಳೂರಿನ ಕದ್ರಿ ಪಾರ್ಕ್ನಲ್ಲಿ ಕುಳಿತಿದ್ದ ಅಪ್ರಾಪ್ತ ಜೋಡಿಯೊಂದನ್ನು ದೇವಸ್ಥಾನಕ್ಕೆ ಕರೆದೊಯ್ದು ಮದುವೆ ಮಾಡಲು ಪ್ರಯತ್ನಿಸಿದ ಆರೋಪದ ಮೇಲೆ ಹಿಂದೂ ಮಹಾಸಭಾದ ಕಾರ್ಯಕರ್ತರಾದ ರಾಜೇಶ್ ಪೂಜಾರಿ, ನವೀನ್ ಮತ್ತು ಸುರೇಶ್ ಎಂಬವರನ್ನು ಕದ್ರಿ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಫೆ.14 ವಾಲೆಂಟೈನ್ ದಿನದ ಅಪಚಾರವನ್ನು ತಡೆಯುವ ಸಲುವಾಗಿ ಹಿಂದೂ ಮಹಾಸಭಾದ ಕಾರ್ಯಕರ್ತರು ಈ ಮೊದಲೇ ಜೋಡಿ ಕಂಡು ಬಂದರೆ ಅವರಿಗೆ ಮದುವೆ ಮಾಡಿಸುವುದಾಗಿ ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಇಂದು ಬೆಳಗ್ಗಿನಿಂದಲೇ ಕಣ್ಗಾವಲು ನಡೆಸುತ್ತಿದ್ದ ಹಿಂದೂ ಸಭಾ ಕಾರ್ಯಕರ್ತರಿಗೆ ಕದ್ರಿ ಪಾರ್ಕ್ನಲ್ಲಿ ಅಪ್ರಾಪ್ತ ಜೋಡಿಯೊಂದು ಕುಳಿತು ಪ್ರಣಯದಲ್ಲಿ ತೊಡಗಿರುವುದು ಕಂಡು ಬಂದಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಕಾರ್ಯಕರ್ತರು ಜೋಡಿಯನ್ನು ಬಲವಂವಾಗಿ ದೇವಸ್ಥಾನಕ್ಕೆ ಕರೆದೊಯ್ದು ಮದುವೆ ಮಾಡಿಸಲು ಪ್ರಯತ್ನಿಸಿದ್ದಾರೆ ಎನ್ನಲಾಗಿದೆ.
ಆದರೆ ಜೋಡಿ ಅಪ್ರಾಪ್ತ ವಯಸ್ಸಿನವರಾದ ಕಾರಣ ಮದುವೆ ಮಾಡಿಸಲು ವಯಸ್ಸಿನ ಆಡ್ಡಿ ಬಂದಿದೆ ಎಂದು ತಿಳಿದು ಬಂದಿದೆ. ತಕ್ಷಣ ಈ ಬಗ್ಗೆ ಮಾಹಿತಿ ಪಡೆದ ಕದ್ರಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಮೂವರು ಕಾರ್ಯಕರ್ತರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ವಾಲೈಂಟೈನ್ ದಿನ ಭಾರತೀಯ ಸಂಸ್ಕೃತಿಗೆ ವಿರುದ್ಧವಾಗಿದ್ದು, ಈ ದಿನ ಬೀಚ್, ಪಾರ್ಕ್ನಂಥಾ ಪ್ರದೇಶದಲ್ಲಿ ಯುವ ಜೋಡಿಗಳು ಕಂಡುಬಂದರೆ ಅವರಿಗೆ ವಿವಾಹ ಮಾಡಿಸುವುದಾಗಿ ಈ ಮೊದಲೇ ಹಿಂದೂ ಸಭಾದ ಪ್ರಮುಖರಾದ ಪ್ರಣವಾನಂದ ಸ್ವಾಮೀಜಿ ಎಚ್ಚರಿಕೆ ನೀಡಿದ್ದರು.
ವಾಲೆಂಟೈನ್ ದಿನದ ಹಿನ್ನೆಲೆಯಲ್ಲಿ ಇಂಥಹ ಜೋಡಿಗಳನ್ನು ಪತ್ತೆ ಹಚ್ಚಲು ಬೆಂಗಳೂರು, ಮಂಗಳೂರು, ಹುಬ್ಬಳ್ಳಿ ಹಾಗೂ ಬೆಳಗಾವಿ ಮುಂತಾದ ಕಡೆಗಳಲ್ಲಿ ನಮ್ಮ ಸಭಾದ ಕಾರ್ಯಕರ್ತರು ಗಸ್ತು ನಡೆಸುತ್ತಿದ್ದಾರೆ. ನಾವು ಪ್ರೀತಿಯ ವಿರೋಧಿಗಳಲ್ಲ, ಆದರೆ ವಾಲೆಂಟೈನ್ ದಿನ ಆಚರಿಸುವುದನ್ನು ನಾವು ತೀವ್ರವಾಗಿ ವಿರೋಧಿಸುತ್ತೇವೆ. ಈ ಹಿನ್ನೆಲೆಯಲ್ಲಿ ಈ ದಿನ ನಮ್ಮ ಸಭಾದ ವತಿಯಿಂದ ತಂದೆ – ತಾಯಿಗಳ ಪೂಜೆ ಮಾಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ ಎಂದು ಸ್ವಾಮೀಜಿ ತಿಳಿಸಿದ್ದಾರೆ.
ಕಾನೂನು ಉಲ್ಲಂಘಿಸುವವರ ವಿರುದ್ಧ ಕಠಣ ಕ್ರಮ :
ಇದೇ ಸಂದರ್ಭ ವಾಲೆಂಟೈನ್ ದಿನದ ಹಿನ್ನೆಲೆಯಲ್ಲಿ ಪ್ರೇಮಿಗಳಿಗೆ ತೊಂದರೆ ಕೊಡುವುದು, ಸಾರ್ವಜನಿಕ ಸ್ಥಳಗಳಲ್ಲಿ ಅಸಭ್ಯವಾಗಿ ನಡೆದುಕೊಳ್ಳುವುದು ಮುಂತಾದ ಯಾವೂದೇ ಕಾನೂನಿಗೆ ವಿರುದ್ಧವಾದ ಚಟ್ವಟಿಕೆಗಳಲ್ಲಿ ಯಾರದರೂ ತೊಡಗಿಕೊಂಡರೆ ಅಂಥವರನ್ನು ವಶಕ್ಕೆ ತೆಗೆದುಕೊಂಡು ಅವರ ವಿರುದ್ಧ ಕಠಿಣ ಕಾನೂ ಕ್ರಮ ಕೈಗೊಳ್ಳುವುದಾಗಿ ಮಂಗಳೂರು ನಗರ ಪೊಲೀಸ್ ಅಯುಕ್ತ ಎಸ್.ಮುರುಗನ್ ಹಾಗೂ ಡಿಸಿಪಿ (ಅಪರಾಧ ವಿಭಾಗ) ಸಂತೋಷ್ ಬಾಬು ಎಚ್ಚರಿಕೆ ನೀಡಿದ್ದಾರೆ.