ಮಂಗಳೂರು: ವಿಶ್ವ ಹಿಂದೂ ಪರಿಷತ್ ನ ಸ್ವರ್ಣ ಜಯಂತಿ ಅಂಗವಾಗಿ ಮಾ.1ರಂದು ಹಮ್ಮಿಕೊಳ್ಳಲಾಗಿರುವ ಬೃಹತ್ ಹಿಂದೂ ಸಮಾಜೋತ್ಸವದ ಆಮಂತ್ರಣ ಪತ್ರಿಕೆಯ ಬಿಡುಗಡೆ ಸಮಾರಂಭ ಶುಕ್ರವಾರ ನಗರದ ಬಂಟ್ಸ್ ಹಾಸ್ಟೇಲ್ ಸಮೀಪವಿರುವ ಹಿಂದೂ ಸಮಾಜೋತ್ಸವದ ಕಾರ್ಯಾಲಯದಲ್ಲಿ ನಡೆಯಿತು. ರೋಟರಿ ಕ್ಲಬ್ ನ ಮಾಜಿ ಗವರ್ನರ್ ಡಾ. ದೇವದಾಸ್ ರೈ ಅವರು ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ಸ್ವರ್ಣ ಮಹೋತ್ಸವ ಸಮಿತಿ ಗೌರವಾಧ್ಯಕ್ಷರಾದ ಗಣೇಶ್ ರಾವ್ ಅವರು ಮಾತನಾಡಿ ” ಮಾ.೧ರಂದು ನಡೆಯಲಿರುವ ಹಿಂದೂ ಸಮಾಜೋತ್ಸವದಿಂದ ದೇಶವೇ ಮಂಗಳೂರಿನತ್ತ ತಿರುಗಿ ನೋಡಲಿದೆ. ಅಷ್ಟು ಅದ್ದೂರಿಯಾಗಿ ಹಿಂದೂ ಸಮಾಜೋತ್ಸವ ನಡೆಯಲಿದೆ. ಸಮಾಜೋತ್ಸವ ಕಾರ್ಯಕ್ರಮವು ಕಾನೂನು ಚೌಕಟ್ಟಿನಲ್ಲಿ ನಡೆಯುವುದರಿಂದ ಯಾರಿಗೂ ತೊಂದರೆಯಾಗಲ್ಲ. ಈಗಾಗಲೇ 3000 ಕಾರ್ಯಕರ್ತರು ತಮ್ಮನ್ನು ಸಮಾಜೋತ್ಸವ ಕಾರ್ಯದಲ್ಲಿ ತೊಡಗಿಸಿಕೊಂಡಿಸಿಕೊಂಡಿದ್ದಾರೆ ಎಂದು ಹೇಳಿದರು.
ವಿಶ್ವ ಹಿಂದೂ ಪರಿಷತ್ ಪ್ರಾಂತ ಅಧ್ಯಕ್ಷ ಎಂ.ಬಿ ಪುರಾಣಿಕ್ ಅವರು ಮಾತನಾಡಿ, ಸಮಾಜೋತ್ಸವದ ಅಧ್ಯಕ್ಷತೆಯನ್ನು ಡಾ. ಡಿ ವೀರೇಂದ್ರ ಹೆಗ್ಗಡೆಯವರು ವಹಿಸಲಿದ್ದು, ಪರಮ ಪೂಜ್ಯ ವಿಶ್ವೇಶ ತೀರ್ಥ ಶ್ರೀ ಪಾದಂಗಳವರಯ ಆರ್ಶೀವಚನ ನೀಡಲಿದ್ದಾರೆ. ದಿಕ್ಸೂಚಿ ಭಾಷಣವನ್ನು ಸಾದ್ವಿ ಬಾಲಿಕಾ ಸರಸ್ವತೀಜೀಯವರು ಮಾಡಲಿದ್ದಾರೆ. ಅಂತೆಯೇ ವಿಶ್ವ ಹಿಂದೂ ಪರಿಷತ್ ನ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ಗೋಪಾಲ್ ಜೀಯವರು ಭಾಷಣ ಮಾಡಲಿದ್ದಾರೆ ಎಂದು ಹೇಳಿದರು.
ವಿಶ್ವ ಹಿಂದೂ ಪರಿಷತ್ನ ಮತ್ತೋರ್ವ ಪ್ರಮುಖರಾದ ಜಗದೀಶ್ ಶೇಣವ ಅವರು ಮಾತನಾಡಿ, ಸಮಾಜೋತ್ಸವದ ಪ್ರಯುಕ್ತ ಬಜರಂಗದಳ ಮತ್ತು ವಿವಿಧ ಸಂಘಟನೆಗಳಿಂದ ತಾಲೂಕು ಮತ್ತು ನಗರ ಕೇಂದ್ರಗಳಲ್ಲಿ ಫೆ.20ರಂದು ಬೃಹತ್ ವಾಹನ ಜಾಥಾವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ವಾಹನ ಜಾಥಾ ಬೆಳಿಗ್ಗೆ 10ಗಂಟೆಗೆ ಹಿಂದೂ ಸಮಾಜೋತ್ಸವದ ಕಾರ್ಯಾಲಯದಿಂದ ಚಾಲನೆಗೊಳ್ಳಲಿದ್ದು, ಕದ್ರಿ ಮಲ್ಲಿಕಟ್ಟೆ, ಸೈಂಟ್ ಆಗ್ನೇಸ್ ಕಾಲೇಜು ರಸ್ತೆಯಾಗಿ ಬಲ್ಮಠ ಜ್ಯೋತಿ ಸರ್ಕಲ್ ಹಂಪನಕಟ್ಟೆ, ಆರ್ ಟಿ ಸಿ, ಸ್ಟೇಟ್ ಬ್ಯಾಂಕ್ ಮಾರ್ಗವಾಗಿ ಮಾರ್ಕೆಟ್ ರೋಡ್, ಕಾರ್ ಸ್ಟ್ರೀಟ್, ನ್ಯೂಚಿತ್ರ ಟಾಕೀಸ್ ಕುದ್ರೋಳಿ ಮಾರ್ಗವಾಗಿ ಲೇಡಿಹಿಲ್ ,ಲಾಲ್ ಬಾಗ್, ಪಿವಿಎಸ್ ಸರ್ಕಲ್ ಮುಖೇನ ಬಂಟ್ಸ್ ಹಾಸ್ಟೆಲ್ ನಲ್ಲಿರುವ ಸಮಾಜೋತ್ಸವ ಕಾರ್ಯಾಲಯದಲ್ಲಿ ಮುಕ್ತಾಯಗೊಳ್ಳಲಿದೆ ಎಂದರು.
ಕಾರ್ಯಕ್ರಮದಲ್ಲಿ ಹಿಂದೂ ಸಮಾಜೋತ್ಸವ ಸಮಿತಿಯ ಅಧ್ಯಕ್ಷ ವಿಜಯನಾಥ ವಿಠಲ ಶೆಟ್ಟಿ, ಕಾರ್ಯಧ್ಯಕ್ಷ ಜಗದೀಪ್.ಡಿ ಸುವರ್ಣ, ವಿವಿಧ ಹಿಂದೂ ಸಂಘಟನೆಗಳ ಪ್ರಮುಖರಾದ ಗೋಪಾಲ ಕುತ್ತಾರ್, ಶರಣ್ ಪಂಪ್ ವೆಲ್, ಜೀತೇಂದ್ರ ಕೊಟ್ಟಾರಿ, ಭುಜಂಗ ಕುಲಾಲ್, ಶಂಭು ಶರ್ಮ, ಡಾ. ಸತೀಶ್ ರಾವ್ ಮತ್ತಿತರರು ಉಪಸ್ಥಿತರಿದ್ದರು.