ಮಂಗಳೂರು,ಫೆ.11: ಮಾನವ ನಿರ್ಮಿತ ಅಥವಾ ಪ್ರಾಕೃತಿಕ ವಿಕೋಪದಿಂದ ಜನರ ಜೀವನ ಮತ್ತು ಪರಿಸರದ ಮೇಲೆ ಆಗುವಂತಹ ಪರಿಣಾಮ ಅಗಾಧವಾಗಿದ್ದು, ಅದಕ್ಕಾಗಿ ಮುಂಜಾಗೃತಾ ಕ್ರಮಗಳ ಮೂಲಕ ಅಂತಹ ಪರಿಣಾಮಗಳನ್ನು ತಡೆಗಟ್ಟಬಹುದಾಗಿದ್ದು ಇದಕ್ಕೆ ಸಂಬಂಧಪಟ್ಟ ಇಲಾಖೆಗಳೊಂದಿಗೆ ಸಾರ್ವಜನಿಕರು ಕೈಜೋಡಿಸಬೇಕು ಎಂದು ಪೊಲೀಸ್ ಆಯುಕ್ತ ಎಸ್ ಮುರುಗನ್ ಅವರು ಜಿಲ್ಲಾ ಗೃಹರಕ್ಷಕದಳ, ದಕ್ಷಿಣ ಕನ್ನಡ ಜಿಲ್ಲೆ ಮತ್ತು ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ವಿಭಾಗದ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಪೊಲೀಸ್ ಮೈದಾನದಲ್ಲಿ ಬುಧವಾರ ರಾಷ್ಟ್ರೀಯ ವಿಪತ್ತು ಕಡಿತ ದಿನಾಚರಣೆ ಮತ್ತು ರ್ಯಾಲಿ 2015 ಅನ್ನು ಉದ್ಘಾಟಿಸಿ ಮಾತನಾಡಿದರು
ಭಾರತದಲ್ಲಿ ವಿಪತ್ತು ನಿರ್ವಹಣೆಯಲ್ಲಿ ಸಾರ್ವಜನಿಕರ ಪಾತ್ರ ನೀರಸವಾಗಿದ್ದು, ಬೇರೆ ದೇಶದಲ್ಲಿ ವಿಪತ್ತು ಸಂಭವಿಸಿದಾಗ ಅಲ್ಲಿನ ಜನ ತಮ್ಮ ಮನೆ ಮಠ ಬಿಟ್ಟು ಇತರರ ನೆರವಿಗೆ ಧಾವಿಸುತ್ತಿದ್ದರಂತೆ. ಆದರೆ ಕೇದಾರನಾಥದಲ್ಲಿ ಜಲ ಪ್ರಳಯವಾದಾಗ ಜನ ಮೃತದೇಹಗಳಿಂದ ಚಿನ್ನವನ್ನು ಕಳ್ಳತನ ಮಾಡುತ್ತಿದ್ದರು. ಇಂತಹ ಘಟನೆಗಳು ಮರುಕಳಿಸಬಾರದು. ಮತ್ತೊಬ್ಬರಿಗೆ ಸಹಾಯ ಮಾಡುವ ಗುಣವನ್ನು ನಾವು ಬೆಳೆಸಿಕೊಳ್ಳಬೇಕು ಎಂದರು.
ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದ ಗೃಹರಕ್ಷಕದಳದ ಕಮಾಂಡೆಂಟ್ ಮುರಳಿ ಮೋಹನ್ ಚೊಂತಾರು, ನಮ್ಮ ಜಿಲ್ಲೆಯು ಸುಲಭವಾಗಿ ಪ್ರಕೃತಿಕ ಹಾಗೂ ಮಾನವ ನಿರ್ಮಿತ ವಿಪತ್ತುಗಳಿಗೆ ಸಿಲುಕಬಹುದಾದ ಸೂಕ್ಷ್ಮ ಪ್ರದೇಶವಾಗಿದ್ದು, ಇದಕ್ಕಾಗಿ ನಾವು ಮುಂಜಾಗೃತ ಕ್ರಮಗಳನ್ನು ಕೈಗೊಳ್ಳಬೇಕು. ವಿದ್ಯಾರ್ಥಿಗಳಲ್ಲಿ ಹಾಗೂ ಸಾರ್ವಜನಿಕರಿಗೆ ವಿಪತ್ತುಗಳನ್ನು ಎದುರಿಸುವ ಮತ್ತು ಕಡಿಮೆಗೊಳಿಸುವ ಬಗ್ಗೆ ಅರಿವು ಮೂಡಿಸುವ ಅವಶ್ಯಕತೆ ಇದೆ ಎಂದರು.
ಗೃಹರಕ್ಷಕದಳದ ಡೆಪ್ಯೂಟಿ ಕಮಾಂಡೆಂಟ್ ಇಸ್ಮಾಯಿಲ್, ಅಗ್ನಿಶಾಮಕ ದಳದ ಹೆಚ್.ಎಸ್ ವರದರಾಜ್, ಪ್ರಭಾರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಮೀನಾ ಮಾಲಿನಿ ಮೊದಲಾದವರು ಈ ಸಂಧರ್ಭದಲ್ಲಿ ಉಪಸ್ಥಿತರಿದ್ದರು.