ಉಡುಪಿ: ಗೇರುಬೀಜ ಸಿಪ್ಪೆ ಸಂಸ್ಕರಣಾ ಕಾರ್ಖಾನೆಗೆ ಆಕಸ್ಮಿಕ ಬೆಂಕಿ ತಗುಲಿ ಲಕ್ಷಾಂತರ ನಷ್ಟವಾದ ಘಟನೆ ಉಡುಪಿ ತಾಲೂಕಿನ ಆವರ್ಸೆ ಸಮೀಪದ ಮಾವಿನಕಟ್ಟೆ ಎಂಬಲ್ಲಿ ಮಂಗಳವಾರ ಬೆಳಿಗ್ಗೆ ನಡೆದಿದೆ. ಈ ಬೆಂಕಿ ಅವಘಡದಲ್ಲಿ ಸುಮಾರು 75 ಲಕ್ಷ ಅಂದಾಜು ನಷ್ಟ ಸಂಭವಿಸಿದೆ ಎಂದು ಮಾಲೀಕರು ತಿಳಿಸಿದ್ದಾರೆ.
ಘಟನೆ ವಿವರ: ನವಭಾರತ ಟ್ರೆಡರ್ಸ್ ಸಂತೋಷ್ ಮಲ್ಲಾರ್ ಎನ್ನುವವರಿಗೆ ಸೇರಿದ ಕಾರ್ಖಾನೆಯಾಗಿದ್ದು, ಸುಮಾರು 8 ವರ್ಷಗಳಿಂದ ಈ ಭಾಗದಲ್ಲಿ ಕಾರ್ಯಚರಿಸುತ್ತಿತ್ತು. ಈ ಕಾರ್ಖಾನೆಯಲ್ಲಿ ವಾಹನ ಚಾಲಕನನ್ನು ಸೇರಿದಂತೆ 7 ಮಂದಿ ಕೆಲಸಗಾರರಿದ್ದಾರೆ. ಎಂದಿನಂತೆ ಮಂಗಳವಾರ ಬೆಳಿಗ್ಗೆ 8.30 ರ ಸಮಯಕ್ಕೆ ಕಾರ್ಖಾಣೆಯ ಕೆಲಸಗಾರರು ಬಂದು ಬಾಗಿಲು ತೆರೆದು ನೋಡಿದಾಗ ಸಣ್ಣದಾಗಿ ಬೆಂಕಿ ಕಾಣಿಸಿದ್ದು, ಅಪಾಯವನ್ನು ಅರಿತು ಬೆಂಕಿ ತಗುಲಿರುವ ಮಾಹಿತಿಯನ್ನು ಮಾಲಕರಿಗೆ ತಿಳಿಸಿದ್ದಾರೆ. ಕೂಡಲೇ ಅಗ್ನಿ ಶಾಮಕ ದಳಕ್ಕೆ ಘಟಕದ ಮಾಲಿಕರು ಸುದ್ದಿ ಮುಟ್ಟಿಸಿದ್ದಾರೆ. ಉಡುಪಿ ಹಾಗೂ ಕುಂದಾಪುರದಿಂದ ತಲಾ ಒಂದೊಂದು ಅಗ್ನಿಶಾಮಕ ದಳ ವಾಹನವು ಕೂಡಲೇ ಸ್ಥಳಕ್ಕೆ ದೌಡಾಯಿಸಿ ಕಾರ್ಯಾಚರಣೆ ಆರಂಭಿಸಿದೆ.
ಈ ಕಾರ್ಖಾನೆಯು ಸುಮಾರು 7 ಸಾವಿರ ಚದರ ಅಡಿ ವಿಸ್ತಿರ್ಣವನ್ನು ಹೊಂದಿದ್ದು ಇದರ ಒಂದು ಭಾಗದಲ್ಲಿ ಗೇರು ಬೀಜ ಸಿಪ್ಪೆಯನ್ನು ಶೇಖರಿಸಿಟ್ಟ ಗೋದಾಮಿತ್ತು. ಒಮ್ಮೆಲೆ ವ್ಯಾಪಿಸಿದ ಬೆಂಕಿಯು ಗೇರು ಬೀಜದ ಸಿಪ್ಪೆಯಲ್ಲಿರುವ ತೈಲದ ಅಂಶದಿಂದಾಗಿ ನೋಡನೊಡುತ್ತಿದ್ದಂತೆ ಬೆಂಕಿಯ ತೀವೃತೆ ಹೆಚ್ಚಾಗಿದ್ದು, ಕಾರ್ಖನೆಯ ಗೋದಾಮಿನಲ್ಲಿ ಗೋಣಿ ಚೀಲಗಳಲ್ಲಿ ಸಂಗ್ರಹಿಸಿದ್ದ ಸಾವಿರಾರು ಚೀಲಗಳಿಗೆ ಬೆಂಕಿ ವ್ಯಾಪಿಸಿದೆ. ಅಗ್ನಿಶಾಮಕ ದಳದವರು ಬರುವಷ್ಟರಲ್ಲಿ ದಾಸ್ತಾನು ಸಿಪ್ಪೆಯ ಚೀಲಗಳಿಗೆ ಬೆಂಕಿ ಆವರಸಿದೆ. 12 ಸಾವಿರ ಚೀಲ ಗೇರು ಬೀಜ ಸಿಪ್ಪೆ ಬೆಂಕಿ ತಗುಲಿ ಭಸ್ಮವಾಗಿದೆ. ಹಾಗೂ ದಾಸ್ತಾನಿನ ಕೊಠಡಿಯು ಸೇರಿದಂತೆ ಇಡೀ ಕಾರ್ಖಾನೆಯ ಬೆಂಕಿ ಪ್ರಕರತೆಗೆ ಹಾನಿಗೊಳಗಾಗಿದೆ.
ಕಾರ್ಖಾನೆ ಮಾಲಿಕ ಸಂತೋಷ್ ಅವರು ಹೇಳುವ ಪ್ರಕಾರ, ನಿತ್ಯ ಕೆಲಸ ಮುಗಿಸಿ ಮನೆಗೆ ಹೊರಡುವ ಸಂದರ್ಭದಲ್ಲಿ ವಿದ್ಯುತ್ನ್ನು ಸ್ಥಗಿತಗೊಳಿಸಿ ಹೋಗಿರುತ್ತೇವೆ. ಬೆಳಿಗ್ಗೆ ಬಂದ ನಂತರ ವಿದ್ಯುತ್ ಚಾಲುಮಾಡುತ್ತೇವೆ. ಬಹುಷ: ರಾತ್ರಿಯ ವೇಳೆಯಲ್ಲಿ ಇಲಿಗಳು ವಿದ್ಯುತ್ ತಂತಿಗಳನ್ನು ಕಚ್ಚಿ ತುಂಡು ಮಾಡಿರಬಹುದು, ಬೆಳಿಗ್ಗೆ ಬಂದು ವಿದ್ಯುತ್ ಸ್ವಿಚ್ ಹಾಕಿದ ಸಂದರ್ಭ ಶಾರ್ಟ್ ಸರ್ಕ್ಯೂಟ್ ಆಗಿ ಬೆಂಕಿಯ ಕಿಡಿ ಗೇರು ಬೀಜ ಸಿಪ್ಪೆಗೆ ತಗುಲಿ ಬೆಂಕಿ ಇಡೀ ಕೊಠಡಿಯನ್ನು ವ್ಯಾಪಿಸಿದ ಅನುಮಾನವನ್ನು ವ್ಯಕ್ತಪಡಿಸಿದ್ದಾರೆ.
ಅಪಾರ ನಷ್ಟ: ಗೇರು ಬೀಜ ಸಿಪ್ಪೆಯಿಂದ ಸುಮಾರು 18-20 ಲಕ್ಷ ನಷ್ಟವಾಗಿದ್ದು, ಇಡೀ ಕಾರ್ಖಾನೆಯು ಬೆಂಕಿಗಾಹುತಿಯಾಗಿರುವುದರಿಂದ ೫೦ ಲಕ್ಷ ನಷ್ಟ , ಹೀಗೆ ಸುಮಾರು ಒಟ್ಟು ಸುಮಾರು 75 ಲಕ್ಷ ರೂ. ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.
ಸತತ ಕಾರ್ಯಚರಣೆ: ಬೆಂಕಿ ಅವಘಡದ ತರುವಾಯ 10 ಗಂಟೆ ವೇಳೆಗೆ 2ಅಗ್ನಿಶಾಮಕ ದಳಗಳ ವಾಹನಗಳಿಂದ ಆರಂಭಗೊಂಡ ಬೆಂಕಿ ನಂದಿಸುವ ಕಾರ್ಯಚರಣೆ ಸಂಜೆ 6 ಗಂಟೆಯವರೆಗೂ ಸಾಗಿತ್ತು. ನಡುವೆ ಕಾರ್ಖಾನೆಯ ಕೆಲವು ಗೋಡೆ, ಕಿಟಕಿ ಹಾಗೂ ಮೇಲ್ಚಾವಣಿ ತೆರವಿಗಾಗಿ ಜೆಸಿಬಿ ಯಂತ್ರವನ್ನು ಕೂಡ ಉಪಯೋಗಿಸಿಕೊಳ್ಳಲಾಗಿತ್ತು. 7-8 ಗಂಟೆ ನಿರಂತರ ಕಾರ್ಯಚರಣೆ ಬಳಿಕ ಸಂಪೂರ್ಣ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.