ಮಂಗಳೂರು,ಫೆ.06: ನೆಹರೂ ಮೈದಾನದಲ್ಲಿ ಬೃಹತ್ ಹಿಂದೂ ಸಮಾಜೋತ್ಸವ ನಡೆಯಲಿದೆ. ಇದರ ಸಿದ್ಧತೆಗೆ ಆರಂಭವೆಂಬಂತೆ ಹಿಂದೂ ಸಮಾಜೋತ್ಸವದ ಕಚೇರಿಯನ್ನು ಮಂಗಳೂರಿನ ಬಂಟ್ಸ್ ಹಾಸ್ಟೆಲ್ ಬಳಿ ತೆರೆಯಲಾಗಿದ್ದು ಇದರ ಉದ್ಘಾಟನೆಯನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಮುಖಂಡ ಡಾ. ಕಲ್ಲಡ್ಕ ಪ್ರಭಾಕರ್ ಭಟ್ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಡಾ. ಕಲ್ಲಡ್ಕ ಪ್ರಭಾಕರ್ ಭಟ್, ಬಹಳ ವರ್ಷಗಳಿಂದ ನಮ್ಮ ದೇಶ ಹಿಂದೂರಾಷ್ಟ್ರವೆಂದು ಗುರುತಿಸಿಕೊಂಡಿದೆ. ಸರ್ವಸಂಸ್ಕಂತಿಯನ್ನೂ ಹೊಂದಿರುವ ದೇಶ. ಆದರೆ ಹಿಂದೂಗಳು ಈಗ ಇತರರ ಬಳಿ ಬೇಡುವ ಪರಿಸ್ಥಿತಿ ನಿರ್ಮಾಣಗೊಂಡಿದೆ. ಹಿಂದೂ ಸಮಾಜಕ್ಕಾಗಿ ಅನೇಕ ಕೆಲಸಗಳನ್ನು ಮಾಡಿದ ವಿಶ್ವಹಿಂದೂ ಪರಿಷತ್ನ ಮುಖಂಡ ಪ್ರವೀನ್ ಭಾಯ್ ತೊಗಾಡಿಯಾ ಅವರು ಸಮಾಜೋತ್ಸವದಲ್ಲಿ ಭಾಗವಹಿಸದಂತೆ ನಿರ್ಬಂಧ ವಿಧಿಸುವಷ್ಟು ದಾಷ್ಟ್ಯದ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಇದು ಹಿಂದೂಗಳಿಗೆ ಮಾಡುತ್ತಿರುವ ಅವಮಾನ. ಒಂದೆಡೆಯಿಂದ ಪಾಶ್ಚಾತ್ಯರು ನಮ್ಮ ಮೇಲೆ ಆಕ್ರಮಣ ಮಾಡುತ್ತಿದ್ದರೆ ಇನ್ನೊಂದೆಡೆಯಿಂದ ನಮ್ಮವರೇ ನಮ್ಮ ಮೇಲೆ ದಾಳಿ ಮಾಡುತ್ತಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕೊಲ್ಯ ಮಠಾಧೀಶರು, ಚಲನಚಿತ್ರ ನಟ ಶ್ರೀನಗರ ಕಿಟ್ಟಿ, ಸಮಾಜೋತ್ಸವದ ಅಧ್ಯಕ್ಷ ವಿಜಯ್ನಾಥ್ ವಿಠಲ್ ಶೆಟ್ಟಿ, ಬಿ.ಎಸ್ ಶೆಟ್ಟಿ, ಎಂ.ಬಿ ಪುರಾಣಿಕ್ ಮೊದಲಾದವರು ಉಪಸ್ಥಿತರಿದ್ದರು.