ಮಂಗಳೂರು,ಫೆ.02 : ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ಇದರ ದಕ್ಷಿಣ ಕನ್ನಡ ಜಿಲ್ಲಾ ಸಂಸ್ಥೆ ವತಿಯಿಂದ ಕಬ್ಸ್, ಬುಲ್ ಬುಲ್ಸ್, ಸ್ಕೌಟ್ಸ್, ಗೈಡ್ಸ್, ರೋವರ್ಸ್, ರೇಂಜರ್ಸ್ಗಳಿಗೆ ವಿವಿಧ ಪ್ರಶಸ್ತಿ ಪ್ರದಾನ ಸಮಾರಂಭ ಜಿಲ್ಲಾಧಿಕಾರಿ ನಿವಾಸದಲ್ಲಿ ಭಾನುವಾರ ನಡೆಯಿತು.
ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಪ್ರಶಸ್ತಿ ಪ್ರದಾನ ನೆರವೇರಿಸಿ, 100 ವರ್ಷಗಳ ಇತಿಹಾಸವಿರುವ ಭಾರತ್ ಸ್ಕೌಟ್ಸ್ ಸಂಸ್ಥೆಯು ಶಿಸ್ತು, ಪ್ರೇಮ, ಭ್ರಾತೃತ್ವದ ಸಂದೇಶವನ್ನು ಕ್ರಿಯಾಶೀಲವಾಗಿ ನೀಡುತ್ತಾ ಬಂದಿದೆ. ಸಮಾಜದ ಹಲವಾರು ಪಿಡುಗುಗಳಿಗೆ ಸ್ಕೌಟ್ ಆಶಯಗಳು ಮದ್ದಾಗಿದ್ದು, ಜಾರಿ ಆಗಬೇಕಿದೆ ಎಂದು ಆಶಿಸಿದರು.
ಸ್ವಚ್ಛತೆ ಕಾಪಾಡಬೇಕು ಎಂದು ಎಲ್ಲ ಧರ್ಮ, ಸಂಸ್ಕೃತಿಗಳು ಹೇಳುತ್ತಿದ್ದರೂ, ಅನುಷ್ಠಾನ ಮಾತ್ರ ಮನೆಗೆ ಸೀಮಿತವಾಗುತ್ತಿದೆ. ಮನೆ ಕಸ, ಬೀದಿ, ಚರಂಡಿ, ಬೀಚ್ನಲ್ಲಿ ಹಾಕಿ ಕೊಳಕು ಮಾಡುತ್ತೇವೆ. ಮಾತಿಗಿಂತ ಕೃತಿಯಲ್ಲಿ ಅನುಷ್ಠಾನಕ್ಕೆ ಬರಬೇಕು. ವಿದ್ಯಾರ್ಥಿಗಳು ಸ್ವಚ್ಛತೆ ಕಾರ್ಯಕ್ರಮದ ರಾಯಭಾರಿಗಳಾಗಬೇಕು ಎಂದು ಅವರು ಹೇಳಿದರು.
ಅತ್ಯುತ್ತಮ ಸಂಸ್ಕೃತಿ, ಶಿಕ್ಷಣ, ಸ್ನೇಹಕ್ಕೆ ಪ್ರಸಿದ್ಧಿ ಪಡೆದಿರುವ ಜಿಲ್ಲೆಯು ಇತ್ತೀಚೆಗೆ ಅಪಖ್ಯಾತಿಗೆ ಒಳಗಾಗುತ್ತಿದೆ. ಪರಸ್ಪರ ಬೆರೆಯುವ ಮನೋಭಾವ ಮೂಲಕ ಈಗಿರುವ ಪರಿಸ್ಥಿತಿ ಬದಲಾಗಬೇಕು. ಹಿಂದಿನ ಮಾದರಿಯಲ್ಲಿ ಜಿಲ್ಲೆಯು ಮಾದರಿಯಾಗಬೇಕು. ಮಕ್ಕಳ ಮೂಲಕ ಈ ಸಂದೇಶ ಮನೆ ಮನ ತಲುಪಬೇಕು ಎಂದು ಜಿಲ್ಲಾಕಾರಿ ಹೇಳಿದರು.
ಭಾರತ್ ಸ್ಕೌಟ್ಸ್ ಜಿಲ್ಲಾ ಉಪಾಧ್ಯಕ್ಷರಾದ ಶಾರದಾ ಆಚಾರ್ಯ, ವಸಂತರಾಂ, ಕೋಶಾಕಾರಿ ವಾಸುದೇವ ಬೋಳೂರ್ ಉಪಸ್ಥಿತರಿದ್ದರು.
ಸ್ಕೌಟ್ಸ್ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಕುಮಾರ್ ಕದ್ರಿ ಸ್ವಾಗತಿಸಿದರು. ಜಿಲ್ಲಾ ಮುಖ್ಯ ಆಯುಕ್ತ ಎನ್.ಜಿ.ಮೋಹನ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಗೈಡ್ಸ್ ಜಿಲ್ಲಾ ಆಯುಕ್ತೆ ಐರಿನ್ ಡಿಕುನ್ಹ ವಂದಿಸಿದರು.
ಪ್ರಶಸ್ತಿ ಪ್ರದಾನ: 17 ಶಾಲೆಗಳ 132 ಮಂದಿಗೆ ತೃತೀಯ ಚರಣ ಕಬ್ಸ್, 25 ಶಾಲೆಗಳ 200 ಬುಲ್ಬುಲ್ಸ್ಗಳಿಗೆ ಸುವರ್ಣ ಪಂಖ್ ಬುಲ್ಬುಲ್ಸ್, 22 ಶಾಲೆಗಳ 171 ಮಂದಿ ಸ್ಕೌಟ್ಸ್ಗಳಿಗೆ ತೃತೀಯ ಸೋಪಾನ ಸ್ಕೌಟ್ಸ್, 36 ಶಾಲೆಗಳ 287 ಗೈಡ್ಸ್ಗಳಿಗೆ ತೃತೀಯ ಸೋಪಾನ ಗೈಡ್ಸ್, ಏಳು ಕಾಲೇಜುಗಳ 31 ರೋವರ್ಸ್ಗಳಿಗೆ ಪ್ರವೀಣ್ ರೋವರ್ಸ್, ಒಂಬತ್ತು ಕಾಲೇಜುಗಳ 51 ರೇಂಜರ್ಸ್ಗಳಿಗೆ ಪ್ರವೀಣ್ ರೇಂಜರ್ಸ್ ಪ್ರಶಸ್ತಿ ವಿತರಿಸಲಾಯಿತು.