ಮಂಗಳೂರು: 14ರ ಹರೆಯದ ಅಪ್ರಾಪ್ತೆ ಜತೆಗೆ ಮೊಬೈಲ್ ಮೂಲಕ ಪ್ರೀತಿಯ ನಾಟಕ ವಾಡುತ್ತಿದ್ದ ವಿವಾಹಿತ ಹೊಟೇಲ್ ಮಾಲೀಕನಿಗೆ ಆಕೆಯ ಮನೆಮಂದಿ ಸರಿಯಾಗಿ ತದುಕಿ ಉಳ್ಳಾಲ ಪೊಲೀಸರಿಗೆ ಒಪ್ಪಿಸಿರುವ ಘಟನೆ ನಿನ್ನೆ ತೊಕ್ಕೊಟ್ಟುವಿನಲ್ಲಿ ನಡೆದಿದೆ.
ಪಂಡಿತ್ಹೌಸ್ ನಿವಾಸಿ ಬಶೀರ್ (32) ಪೊಲೀಸ್ ವಶವಾದವನು. ಎರಡು ವಿವಾಹವಾಗಿರುವ ಈತ ಇಬ್ಬರು ಹೆಂಡಿರಿಗೂ ತಲಾಖ್ ನೀಡಿರುವುದಾಗಿ ತಿಳಿದುಬಂದಿದೆ. ಆದರೂ ತನ್ನ ಚಪಲತೆಯನ್ನು ಬಿಡದ ಬಶೀರ್ ಕೆಲ ಸಮಯಗಳಿಂದ ತೊಕ್ಕೊಟ್ಟು ಸಮೀಪದ ಅಪ್ರಾಪ್ತೆ ಬಾಲಕಿ ಜತೆಗೆ ಮೊಬೈಲ್ ಮೂಲಕ ಗುಪ್ಚುಪ್ ಮಾತು ಆರಂಭಿಸಿದ್ದನೆನ್ನಲಾಗಿದೆ. ಆಗಾಗ ಮನೆಗೆ ಹೋಗಿ ಆಕೆಗೆ ಕಿರುಕುಳ ನೀಡಲು ಯತ್ನಿಸುತ್ತಿದ್ದನೆನ್ನ ಲಾಗಿದೆ.
ಈ ಬಗ್ಗೆ ಬಾಲಕಿ ಮನೆಮಂದಿಯಲ್ಲಿ ವಿಷಯ ತಿಳಿಸಿದ್ದಳು. ಅದರಂತೆ ನಿನ್ನೆ ಓಮ್ನಿ ಕಾರಿನಲ್ಲಿ ಬಾಲಕಿ ಸಮೇತ ಮನೆಮಂದಿ ತೊಕ್ಕೊಟ್ಟುವಿನ ಬಶೀರ್ಗೆ ಸೇರಿರುವ ಟಿಕ್ಕಾ ಪಾಯಿಂಟ್ ಹೊಟೇಲಿನತ್ತ ಆಗಮಿಸಿದ್ದರು. ಅಲ್ಲಿ ಬಾಲಕಿಯನ್ನು ಬಶೀರ್ ಜತೆ ಮಾತನಾಡಲು ಬಿಟ್ಟಿದ್ದು, ಆತ ಮಾತನಾಡುತ್ತಿರುವ ಸಂದರ್ಭದಲ್ಲೇ ಹಿಂದಿನಿಂದ ಬಂದ ತಂಡ ಕೈಗೆ ಸಿಕ್ಕ ವಸ್ತುಗಳಲ್ಲಿ ಸರಿಯಾಗಿ ತದುಕಿದ್ದಾರೆ. 15 ನಿಮಿಷಗಳ ಕಾಲ ಹಲ್ಲೆ ಮುಂದುವರಿದಿದ್ದು, ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಉಳ್ಳಾಲ ಪೊಲೀಸರು ಬಶೀರ್ ನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಬಳಿಕ ಬಾಲಕಿ ಮನೆಮಂದಿಯನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದ್ದಾರೆ. ಅಲ್ಲಿ ಪ್ರಕರಣ ರಾಜಿಯಲ್ಲಿ ಇತ್ಯರ್ಥಗೊಳಿಸಲಾಗಿದೆ ಎಂದು ತಿಳಿದುಬಂದಿದೆ .
ಹಿಂದೂ ಮಹಿಳೆಯಿಂದ ಯುವಕನ ರಕ್ಷಣೆಗೆ ಪ್ರಯತ್ನ :
ಬಶೀರ್ ಮೇಲೆ ತಂಡ ಎರ್ರಾಬಿರ್ರಿಯಾಗಿ ಹಲ್ಲೆ ನಡೆಸುತ್ತಿದ್ದಂತೆ ಅಲ್ಲೇ ಇದ್ದ ಹೊರ ಜಿಲ್ಲೆಯ ಹಿಂದು ಮಹಿಳೆ ` ಆತನಿಗೆ ಹೊಡೆಯದಂತೆ ತಡೆಹಿಡಿದಿದ್ದರು. ಅಲ್ಲದೆ ಆತ ಹಸಿದಾಗ ಊಟ ಕೊಡುತ್ತಾನೆ. ಆತ ಅಂತಹವನಲ್ಲ, ಯಾರೂ ಅವನಿಗೆ ಹೊಡೆಯಬೇಡಿ ಎಂದು ಯುವಕನ ರಕ್ಷಣೆಗೆ ಪ್ರಯತ್ನಿಸಿದ ಘಟನೆ ನಡೆದಿದೆ . ಈ ವೇಳೆ ಹಲ್ಲೆ ನಡೆಸುತ್ತಿದ್ದ ತಂಡದವರಲ್ಲಿದ್ದ ಓರ್ವ `ನಿಮ್ಮ ಮಗಳಿಗೆ ಹೀಗಾದ್ರೇ ಬಿಡ್ತೀರಾ ‘ ಅಂತಾ ಪ್ರಶ್ನಿಸಿದ್ದರು. ಆದರೂ ಪಟ್ಟು ಬಿಡದ ಮಹಿಳೆ `ಹೊಡೀಬೇಡಿ ಹೊಡೀಬೇಡಿ’ ಅಂತ ಹಲ್ಲೆ ನಡೆಸುತ್ತಿರುವವರ ಮೇಲೆ ಮುಗಿಬೀಳುತ್ತಿದ್ದಳು ಎನ್ನಲಾಗಿದೆ.