ಮೂಡುಬಿದರೆ,ಜ.30 : ಹೊಸಬೆಟ್ಟು ಗ್ರಾಮದ ಕರಿಂಗಾಣ ಎಂಬಲ್ಲಿ ವಿವಾಹಿತೆಯೊಬ್ಬರ ಶವ ನೇಣು ಬಿಗಿದ ಸ್ಥಿತಿಯಲ್ಲಿ ಬುಧವಾರ ಪತ್ತೆಯಾಗಿದ್ದು, ಆಕೆ ಗಂಡ ತನ್ನ ಮಗನೇ ಕೊಲೆ ಮಾಡಿದ್ದಾನೆಂದು ಆರೋಪಿಸಿ ಮೂಡುಬಿದರೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಮೃತ ಮಹಿಳೆಯನ್ನು ಲಿಲ್ಲಿ ಗೋವಿಯಸ್(60)ಎಂದು ಗುರುತಿಸಲಾಗಿದೆ. ಈಕೆಯ ಪತಿ ಪೌಲ್ ಗೋವಿಯಸ್ ಮತ್ತು ಪುತ್ರ ಸ್ಟ್ಯಾನಿ ಗೋವಿಯಸ್ ಕಾರ್ಕಳ ಅತ್ತೂರು ಜಾತ್ರೆಗೆ ಹೋಗಿದ್ದರು. ಪತಿ ಪೌಲ್ ಎಂಬವರು ಸುಮಾರು 11 ಗಂಟೆಗೆ ಮನೆಗೆ ಫೋನ್ ಮಾಡಿದಾಗ ಯಾರು ಕರೆ ಸ್ವೀಕರಿಸದಿದ್ದಾಗ ನೆರೆಮನೆಯವರಿಗೆ ಫೋನ್ ಮಾಡಿ ವಿಚಾರಿಸಲು ಹೇಳಿದ್ದರು. ನೆರೆಮನೆಯವರು ಬಂದು ನೋಡಿದಾಗ ಮಹಿಳೆ ಶವ ಮನೆಯ ಪಕ್ಕಾಸಿಗೆ ನೈಲಾನ್ ಹಗ್ಗದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥತಿಯಲ್ಲಿ ಪತ್ತೆಯಾಗಿದೆ.
ಪೌಲ್ ಅವರ ಮತ್ತೋರ್ವ ಪುತ್ರ ಡೋಲ್ಫಿ ಗೋವಿಯಸ್ ಮತ್ತು ಮನೆಯವರಿಗೆ ಹಲವು ಸಮಯಗಳಿಂದ ಗಲಾಟೆ ನಡೆಯುತಿತ್ತು. ಈತನಿಗೆ ಮನೆಗೆ ಬರದಂತೆ ಕೋರ್ಟ್ ನಿಂದ ತಡೆಯಾಜ್ಞೆ ಇದ್ದರೂ ಆರೋಪಿ ಆಗಾಗ್ಗೆ ಮನೆಗೆ ಬಂದು ತಂದೆ ತಾಯಿಗೆ ಹಿಂಸೆ ನೀಡುತ್ತಿದ್ದ ಎನ್ನಲಾಗಿದೆ.
ತನ್ನ ಪತ್ನಿ ಸಾವಿಗೆ ಮಗನ ಕಾರಣ ಎಂದು ಪತಿ ಪೌಲ್ ಎಂಬವರು ಪೊಲೀಸರಿಗೆ ದೂರು ನೀಡಿದ್ದು, ಪೊಲೀಸ್ ನಿರೀಕ್ಷಕ ಅನಂತಪದ್ಮನಾಭ ತನಿಖೆ ನಡೆಸುತ್ತಿದ್ದಾರೆ.