ಮಂಗಳೂರು,ಜ.27: ‘ದೇಹ ಸ್ವಚ್ಛವಿದ್ದಾಗ ಮನಸ್ಸು ಹೇಗೆ ಹಗುರವಾಗಿರುತ್ತದೆಯೋ, ಅದೇ ರೀತಿ ಪರಿಸರ ಸ್ವಚ್ಛವಿದ್ದಾಗ ಮಾತ್ರ ನಮ್ಮ ಸುತ್ತಮುತ್ತಲಿನ ಸಮಾಜ ಸುಂದರವಾಗಿರುತ್ತದೆ. ಜತೆಗೆ ನಮ್ಮ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ’ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶೆ ಎಂ.ಜಿ. ಉಮಾ ಅವರು ಹೇಳಿದರು.
ದ.ಕ.ಜಿಲ್ಲಾ ವಕೀಲರ ಸಂಘ, ಮಂಗಳೂರು ಮಹಾನಗರ ಪಾಲಿಕೆ, ಜೆಸಿಐ ಮಂಗಳೂರು ಕೇಂದ್ರ ಹಾಗೂ ಆಂಟೋನಿ ವೆಸ್ಟ್ ಸಂಸ್ಥೆ ಸಹಯೋಗದಲ್ಲಿ ಗಣರಾಜ್ಯೋತ್ಸವದ ಅಂಗವಾಗಿ ನಗರದ ನ್ಯಾಯಾಲಯ ಸಂಕೀರ್ಣದ ಆವರಣದಲ್ಲಿ ಆಯೋಜಿಸಿದ ಸ್ವಚ್ಛತಾ ಅಭಿಯಾನ ಉದ್ಘಾಟಿಸಿ ಅವರು ಮಾತನಾಡಿದರು.
ಸ್ವಚ್ಛತೆ ಕಾಪಾಡುವುದು ಸಮಾಜದಲ್ಲಿರುವ ಪ್ರತಿಯೊಬ್ಬರ ಆದ್ಯ ಕರ್ತವ್ಯ ಹಾಗೂ ಜವಾಬ್ದಾರಿಯಾಗಿದೆ. ಸ್ವಚ್ಛತಾ ಅಭಿ ಯಾನ ಎನ್ನುವುದು ಕೇವಲ ಒಂದು ದಿನಕ್ಕೆ ಮತ್ತು ಛಾಯಾಚಿತ್ರ ತೆಗೆಸಿಕೊಳ್ಳುವುದಕ್ಕೆ ಸೀಮಿತಗೊಳ್ಳಬಾರದು. ಅದು ನಿರಂತರವಾಗಿಯೂ, ಮನಃಪೂರ್ವಕವಾಗಿಯೂ ನಡೆಯಬೇಕು ಎಂದು ಹೇಳಿದರು.
ಜಿಲ್ಲಾ ವಕೀಲರ ಸಂಘ, ನ್ಯಾಯಾಲಯದ ಸಿಬ್ಬಂದಿ ಹಾಗೂ ವಿವಿಧ ಸಂಘ ಸಂಸ್ಥೆಗಳು ಸೇರಿಕೊಂಡು ಮಾಡುತ್ತಿರುವ ಈ ಅಭಿಯಾನದಿಂದ ನ್ಯಾಯಾಲಯ ಆವರಣ ಇಡೀ ಮಂಗಳೂರು ನಗರಕ್ಕೆ ಮಾದರಿಯಾಗುವಂತೆ ಸ್ವಚ್ಛಗೊಳ್ಳಬೇಕು. ಆ ನಿಟ್ಟಿನಲ್ಲಿ ಅಭಿಯಾನ ಮುಂದುವರೆಸಿಕೊಂಡು ಹೋಗಬೇಕು ಎಂದು ಸಲಹೆ ಮಾಡಿದರು.
ಅಭಿಯಾನದಲ್ಲಿ ಜಿಲ್ಲಾ ನ್ಯಾಯಾಧೀಶರಾದ ಬಿ.ಕೆ.ನಾಯಕ್, ಜೋಶಿ, ಪುಷ್ಪಾಂಜಲಿ ಸೇರಿದಂತೆ ವಿವಿಧ ನ್ಯಾಯಾಲಯಗಳ ನ್ಯಾಯಾಧೀಶರು, ಆಂಟೋನಿ ಸಂಸ್ಥೆಯ ಹರಿಪ್ರಸಾದ್, ಜೆಸಿಐ ಮಂಗಳೂರು ಕೇಂದ್ರದ ಅಧ್ಯಕ್ಷ ಶ್ರೀಧರ ಎಣ್ಮಕಜೆ, ಮಹಾನಗರ ಪಾಲಿಕೆಯ ಅರ್ಪಿತ ಮತ್ತಿತರರು ಪಾಲ್ಗೊಂಡಿದ್ದರು. ವಕೀಲರ ಸಂಘದ ಅಧ್ಯಕ್ಷ ಎಸ್.ಪಿ.ಚೆಂಗಪ್ಪ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಎಚ್.ವಿ. ವಂದಿಸಿದರು.