ಮಂಗಳೂರು, ಜ.22: ಕದ್ರಿ ಉದ್ಯಾನವನದಲ್ಲಿ ತೋಟಗಾರಿಕೆ ಇಲಾಖೆ ಹಾಗೂ ಸಿರಿ ತೋಟಗಾರಿಕೆ ಸಂಘದ ಜಂಟಿ ಸಹಯೋಗದಲ್ಲಿ ಫಲಪುಷ್ಪ ಪ್ರದರ್ಶನವನ್ನು ಫೆ.14ರಿಂದ ಫೆ.17ರವರೆಗೆ ಏರ್ಪಡಿಸಲಾಗಿದೆ. ಈ ಪ್ರದರ್ಶನದಲ್ಲಿ ತೋಟಗಾರಿಕೆಗೆ ಸಂಬಂಧಿಸಿದ ಚಟುವಟಿಕೆಗಳ ನರ್ಸರಿದಾರರು, ಮಳಿಗೆದಾರರು ಹಾಗೂ ಸ್ವ-ಸಹಾಯ ಗುಂಪುಗಳು ಮತ್ತು ಆಹಾರ ಮಳಿಗೆದಾರರು ಮಳಿಗೆ ತೆರೆಯಲು ಅವಕಾಶ ಕಲ್ಪಿಸಲಾಗಿದೆ.
ಆಸಕ್ತರು ಮಳಿಗೆ ಶುಲ್ಕ ಪಾವತಿಸಿ ಮಳಿಗೆ ಕಾಯ್ದಿರಿಸುವಂತೆ ಕೋರಿದೆ. ಪ್ರದರ್ಶನದಲ್ಲಿ ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಪುಷ್ಪ ಜೋಡಣೆ ಸ್ಪರ್ಧೆ ಏರ್ಪಡಿಸಲಾಗಿದ್ದು, ಸ್ಪರ್ಧಾ ವಿಜೇತರಿಗೆ ಪ್ರಥಮ ರೂ.5,000, ದ್ವಿತೀಯ ರೂ. 3,000, ಹಾಗೂ ತೃತೀಯ ರೂ.2,000 ಬಹುಮಾನ ನೀಡಲಾಗುವುದು.
ಮಳಿಗೆ ತೆರೆಯಲಿಚ್ಛಿಸುವವರು ಮತ್ತು ಹೂ ಜೋಡಣೆ ಸ್ಪರ್ಧೆಯಲ್ಲಿ ಭಾಗವಹಿಸುವರು ಫೆ.7 ರೊಳಗೆ ಸಿರಿ ತೋಟಗಾರಿಕೆ ಸಂಘ(ರಿ) ಬೆಂದೂರು, ಮಂಗಳೂರು ಇಲ್ಲಿ ಹೆಸರು ನೋಂದಾಯಿಸುವಂತೆ ಕೋರಲಾಗಿದೆ. ಹೆಚ್ಚಿನ ಮಾಹಿತಿಗೆ ಮೊಬೈಲ್ ನಂ: 9845523944ನ್ನು ಸಂಪರ್ಕಿಸಬಹುದಾಗಿದೆ.