ಮೂಡುಬಿದಿರೆ, ಜ. 21 : ಮೂಡುಬಿದಿರೆಯ ಸ್ವರಾಜ್ ಮೈದಾನದಲ್ಲಿ ನಡೆದ 75 ನೇ ಅಖಿಲ ಭಾರತ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಪಟಿಯಾಲದ ಪಂಜಾಬ್ ಯುನಿವರ್ಸಿಟಿ(125 ಅಂಕ) ಸಮಗ್ರ ಪ್ರಶಸ್ತಿಯನ್ನು ಹಾಗೂ ಮಂಗಳೂರು ಯುನಿವರ್ಸಿಟಿ(110.5 ಅಂಕ) ರನ್ನರ್ ಅಪ್ ಪ್ರಶಸ್ತಿಯನ್ನು ಪಡೆದುಕೊಂಡಿವೆ. ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿವಿ ಹಾಗೂ ಕರ್ನಾಟಕ ರಾಜ್ಯಸರ್ಕಾರ-ಆಳ್ವಾಸ್ ಶಿಕ್ಷಣ ಪರತಿಷ್ಠಾನದ ಸಹಯೋಗದೊಂದಿಗೆ ಮೂಡುಬಿದಿರೆಯ ಸ್ವರಾಜ್ ಮೈದಾನದಲ್ಲಿ ನಡೆದ 75 ನೇ ಅಖಿಲ ಭಾರತ ಅಥ್ಲೆಟಿಕ್ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ವಿಜೇತ ತಂಡಗಳಿಗೆ ಪ್ರಶಸ್ತಿಯನ್ನು ವಿತರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕದ ಕ್ರೀಡಾ ಸಚಿವ ಅಭಯಚಂದ್ರ ಜೈನ್ ಮಾತನಾಡಿ, `ಮೂಡುಬಿದಿರೆ ಎಂಬ ಪುಟ್ಟ ಊರು ಕ್ರೀಡೆಯಲ್ಲಿ ಬಹುದೊಡ್ಡ ಹೆಸರು ಮಾಡಬೇಕೆಂಬುದು ಡಾ.ಎಂ.ಮೋಹನ್ ಆಳ್ವರ ಕನಸಾಗಿತ್ತು. ಆ ಕನಸನ್ನು ನನಸು ಮಾಡಲು ಆಳ್ವರು ಶ್ರಮ ವಹಿಸಿದ್ದಾರೆ. ಇದಕ್ಕೆ ಈಗ ನಡೆದ ಈ ಅಖಿಲ ಭಾರತ ಕ್ರೀಡಾಕೂಟವೇ ಸಾಕ್ಷಿ. ಇಲ್ಲಿ ನಿರ್ಮಾಣವಾದ ಸಿಂಥೆಟಿಕ್ ಟ್ರ್ಯಾಕ್ಗಾಗಿ ಆಳ್ವರು ತೋರಿಸಿದ ಆಸಕ್ತಿ ಬಹು ದೊಡ್ಡದು. ಬಹಳಷ್ಟು ಕಾಳಜಿಯಿಂದ ಟ್ರ್ಯಾಕ್ ನಿರ್ಮಾಣವಾಗುವಂತೆ ನೋಡಿಕೊಂಡಿದ್ದಾರೆ. ಈ ಕ್ರೀಡಾ ಕೂಟಕ್ಕಾಗಿ ರಾಜ್ಯ ಸರ್ಕಾರದಿಂದ ಐವತ್ತು ಲಕ್ಷ ಅನುದಾನ ಬಿಡುಗಡೆಯಾಗಿದ್ದು, ಅದನ್ನು ಸದುಪಯೋಗ ಪಡಿಸುವಲ್ಲಿ ಸಂಸ್ಥೆ ಯಶಸ್ವಿಯಾಗಿದೆ’ ಎಂದರು.
ಪಂಜಾಬ್ ಯುನಿವರ್ಸಿಟಿಯ ಕ್ರೀಡಾ ನಿರ್ದೇಶಕ ಹಾಗೂ ಚೀಫ್ ಸೆಲೆಕ್ಟರ್ ಆಫ್ ಇಂಡಿಯನ್ ಯುನಿವರ್ಸಿಟಿಸ್ ಆಗಿರುವ ಪ್ರೊ.ರಾಜಕುಮಾರ್ ಶರ್ಮಾ ಮಾತನಾಡಿ,`ಇದೊಂದು ಅದ್ಭುತ ಕ್ರೀಡಾಕೂಟ. ಇಲ್ಲಿನ ವ್ಯವಸ್ಥೆಗಳು ವೃತ್ತಿಪರ ಆಟಗಾರರಿಗೂ ಸೂಕ್ತವಾಗುವಂತಿದ್ದು, ಅತ್ಯಂತ ಉತ್ತಮ ಮಟ್ಟದ್ದಾಗಿದ್ದವು. ಇಲ್ಲಿಯವರೆಗೂ ನಾನು ಸುಮಾರು ಕ್ರೀಡಾಕೂಟಗಳಲ್ಲಿ ಭಾಗವಹಿಸಿದ್ದು, ಎಲ್ಲಿಯೂ ಇಂತಹ ಗುಣಮಟ್ಟವನ್ನು ನೋಡಿರಲಿಲ್ಲ. ಮೂಡುಬಿದಿರೆಯನ್ನೇ ನಮ್ಮ ಕ್ರೀಡಾಕೂಟದ .ಕೇಂದ್ರವಾಗಿಸಲು ಶಿಫಾರಸ್ಸು ಮಾಡಬಹದು’ ಎಂದರು.
ರಾಜೀವ್ ಗಾಂಧಿ ವಿವಿಯ ರಿಜಿಸ್ಟ್ರಾರ್ ಡಾ.ಡಿ.ಪ್ರೇಮ್ಕುಮಾರ್, ಮಾಜಿ ಸಚಿವ ಅಮರ್ನಾಥ್ ಶೆಟ್ಟಿ, ಭಾರತೀಯ ಅಥ್ಲೆಟಿಕ್ ಫೆಡರೇಶನ್ನ ಸೆಕ್ರೆಟರಿ ಸಿ.ಕೆ.ವ್ಯಾಲ್ಸನ್ ಅಭಿಪ್ರಾಯ ಹಂಚಿಕೊಂಡರು. ಡಾ.ಎಂ.ಮೋಹನ್ ಆಳ್ವ ಸ್ವಾಗತಿಸಿದರು. ಉಪನ್ಯಾಸಕಿ ದೀಪಾ ಕೊಠಾರಿ ನಿರೂಪಿಸಿದರು.
ಭರ್ಜರಿ ದಾಖಲೆಗಳ ದಾಖಲೆ :
ಈ ಬಾರಿ ನಡೆದ ಕ್ರೀಡಾಕೂಟದಲ್ಲಿ 14 ದಾಖಲೆಗಳು ನಿರ್ಮಾಣವಾಗಿವೆ. ಮಹಿಳಾ ವಿಭಾಗದಲ್ಲಿ ಹ್ಯಾಮರ್ ಥ್ರೋ, ಹರ್ಡಲ್ಸ್(100 ಮೀ.), ರಿಲೇ(400ಮೀ.) ಹಾಗೂ ಪುರುಷರ ವಿಭಾಗದಲ್ಲಿ ಸ್ಟೀಪಲ್ ಚೇಸ್(3000 ಮೀ) ಹೀಗೆ ಹಲವಾರು ಇವೆಂಟ್ಗಳಲ್ಲಿ ಕೂಟ ದಾಖಲೆ ನಿರ್ಮಾಣವಾಗಿವೆ. ಈ ಬಾರಿ ದಾಖಲೆಗಳದ್ದೇ ದಾಖಲೆ ನಿರ್ಮಾಣವಾಗಿರುವುದು ವಿಶೇಷವಾಗಿದೆ. ಅಥ್ಲೆಟಿಕ್ ಕ್ರೀಡಾಕೂಟದಲ್ಲಿಯೇ ಅತಿ ಹೆಚ್ಚು ದಾಖಲೆ ನಿರ್ಮಿಸಿದ ಕೀರ್ತಿಗೆ ಈ 75ನೇ ಆಲ್ ಇಂಡಿಯಾ ಅಥ್ಲೆಟಿಕ್ ಕ್ರೀಡಾಕೂಟ ಪಾತ್ರವಾಗಿದೆ.
ದಾಖಲೆ ನಿರ್ಮಿಸಿದ ಕ್ರೀಡಾಪಟುಗಳಿಗೆ ವಿಶೇಷ ಸನ್ಮಾನವನ್ನು ಮಾಡಲಾಯಿತು. ಮೈಸೂರು ಪೇಟ, ಶಾಲು, 25,೦೦೦ರೂ. ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸ್ಮರಣಿಕೆಯನ್ನು ನೀಡಿ ಗೌರವಿಸಲಾಯಿತು.