ಬೆಳ್ತಂಗಡಿ, ಜ.18: ಪುತ್ತೂರಿನಲ್ಲಿ ಶುಕ್ರವಾರ ನಡೆದ ಹಿಂದೂ ಹೃದಯ ಸಂಗಮ ಕಾರ್ಯಕ್ರಮ ಮುಗಿಸಿ ಹಿಂದಿರುಗುತ್ತಿದ್ದ ಕಾರ್ಯಕರ್ತರ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ ಎಂದು ಹಿಂದೂ ಹೃದಯ ಸಂಗಮ ಸಂಚಾಲನಾ ಸಮಿತಿಯ ಬೆಳ್ತಂಗಡಿ ತಾಲೂಕು ಅಧ್ಯಕ್ಷ ಹರೀಶ್ ಪೂಂಜ ಆರೋಪಿಸಿದ್ದಾರೆ.
ಅವರು ಶನಿವಾರ ಬೆಳ್ತಂಗಡಿ ವಾರ್ತಾಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ದಾಳಿಯಲ್ಲಿ ಸುಮಾರು 13ಕ್ಕಿಂತಲೂ ಹೆಚ್ಚು ವಾಹನಗಳು ಜಖಂ ಗೊಂಡಿದ್ದು ಏಳು ಜನ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಹೇಳಿದ್ದಾರೆ. ಬಜರಂಗದಳ ಜಿಲ್ಲಾ ಸಂಚಾಲಕ ಭಾಸ್ಕರ್ ಧರ್ಮಸ್ಥಳ ಮಾತನಾಡಿ, ದಾಳಿಗೆ ಕಾರಣರಾಗಿರುವ ಆರೋಪಿಗಳನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು.
ಸಂಚಾಲನಾ ಸಮಿತಿಯ ಉಪಾಧ್ಯಕ್ಷ ಸುಬ್ರಹ್ಮಣ್ಯ ಕುಮಾರ್ ಅಗರ್ತ ಉಪಸ್ಥಿತರಿದ್ದರು.
ಖಂಡನೆ: ಪುತ್ತೂರಿನಲ್ಲಿ ಹಿಂದೂ ಹೃದಯ ಸಂಗಮ ಕಾರ್ಯಕ್ರಮ ಮುಗಿಸಿ ಹಿಂದಿರುಗುತ್ತಿದ್ದವರ ಮೇಲೆ ಕರಾಯದಲ್ಲಿ ಪರಿಸರದ ಬೀದಿ ದೀಪಗಳನ್ನು ನಂದಿಸಿ ಆಯಕಟ್ಟಿನ ಸ್ಥಳಗಳಿಂದ ದುಷ್ಕರ್ಮಿಗಳು ಕಲ್ಲೆಸೆದು ಕಾರ್ಯಕರ್ತರಿಗೆ ದಾಳಿ ನಡೆಸಲಾಗಿದೆ ಎಂದು ಬಿಜೆಪಿಯ ತಾಲೂಕು ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ರಂಜನ್ ಜಿ. ಗೌಡ, ಮಾಜಿ ಶಾಸಕ ಕೆ. ಪ್ರಭಾಕರ ಬಂಗೇರ ಪ್ರಕಟನೆಯಲ್ಲಿ ಆರೋಪಿದ್ದು, ಘಟನೆಯನ್ನು ಖಂಡಿಸಿದ್ದಾರೆ.