ಕನ್ನಡ ವಾರ್ತೆಗಳು

ಮತಾಂತರ ನಿಷೇಧ ಕಾಯ್ದೆ ಜಾರಿ ಮಾಡದಿದ್ದರೆ ಘರ್ ವಾಪಸಿ ನಿಲ್ಲದು : ಡಾ.ಪ್ರವೀಣ್ ಭಾಯ್ ತೊಗಾಡಿಯಾ

Pinterest LinkedIn Tumblr

Puttur_hindu_samavesa

ಪುತ್ತೂರು: ”ಮರು ಮತಾಂತರವನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಎಲ್ಲಿಯ ವರೆಗೆ ಕೇಂದ್ರ ಸರಕಾರ ಮತಾಂತರ ನಿಷೇಧ ಕಾಯ್ದೆ ಜಾರಿ ಮಾಡುವುದಿಲ್ಲವೋ ಅಲ್ಲಿಯ ವರೆಗೆ ಘರ್ ವಾಪಸಿ ನಡೆದೇ ನಡೆಯುತ್ತದೆ” ಎಂದು ವಿಶ್ವ ಹಿಂದೂ ಪರಿಷತ್‌ನ ಅಂತರಾಷ್ಟ್ರೀಯ ಅಧ್ಯಕ್ಷ ಡಾ.ಪ್ರವೀಣ್ ಭಾಯ್ ತೊಗಾಡಿಯಾ ಹೇಳಿದ್ದಾರೆ.

ಪುತ್ತೂರಿನಲ್ಲಿ ಶುಕ್ರವಾರ ಸಂಜೆ ವಿಶ್ವ ಹಿಂದೂ ಪರಿಷದ್ ಸುವರ್ಣ ಮಹೋತ್ಸವದ ಅಂಗವಾಗಿ ಆಯೋಜಿಸಿದ ವಿರಾಟ್ ಹಿಂದೂ ಹೃದಯ ಸಂಗಮದಲ್ಲಿ ಅವರು ಪ್ರಧಾನ ಭಾಷಣ ಮಾಡಿದರು.

Puttur_hindu_samavesa_2 Puttur_hindu_samavesa_1

”ಹಿಂದೂ ಈ ನೆಲದ ಧರ್ಮ. ಈ ನೆಲ ಹಿಂದೂಗಳ ಹಕ್ಕು. ಕಳೆದ ಒಂದು ಸಾವಿರ ವರ್ಷಗಳಿಂದ ನಿರಂತರವಾಗಿ ಹಿಂದುಗಳ ಮತಾಂತರ ನಡೆಯುತ್ತಲೇ ಬಂದಿದೆ. ಇನ್ನು ಏನಿದ್ದರೂ ಮರು ಮತಾಂತರದ ಕಾಲ. ಹಿಂದೂ ಧರ್ಮವನ್ನು ತ್ಯಜಿಸಿ ಹೋದವರು ಮರಳಿ ಈ ಧರ್ಮದ ಹೊಸ್ತಿಲಲ್ಲಿ ಬಂದು ನಿಂತಿದ್ದಾರೆ. ಅವರನ್ನು ಒಳಗೆ ಕರೆದುಕೊಳ್ಳುವುದು ನಮ್ಮ ಕರ್ತವ್ಯ. ಈ ನಿಟ್ಟಿನಲ್ಲಿ ಒಂದಲ್ಲ ಒಂದು ದಿನ ವಿಶ್ವ ಹಿಂದೂ ಪರಿಷದ್ ಪಾಕಿಸ್ತಾನದಲ್ಲೂ ಮರು ಮತಾಂತರ ಮಾಡಿ ತೋರಿಸಲಿದೆ” ಎಂದರು.

”ಕಳೆದ ಐದು ದಶಕಗಳಲ್ಲಿ 50 ಲಕ್ಷ ಹಿಂದೂಗಳನ್ನು ಮತಾಂತರದಿಂದ ರಕ್ಷಿಸಲಾಗಿದೆ. ಭಾರತದ ಸಂವಿಧಾನದಲ್ಲಿ ಧರ್ಮ ಪ್ರಚಾರದ ಹಕ್ಕು ನೀಡಲಾಗಿದೆಯೇ ವಿನ: ಮತಾಂತರ ಮಾಡಿ ಎನ್ನಲಾಗಿಲ್ಲ. ಆದರೆ, ಧರ್ಮಪ್ರಚಾರವನ್ನೇ ಮತಾಂತರ ಎಂದು ಪರಿಗಣಿಸಿ ಬೇರೆ ಬೇರೆ ಆಮಿಷಗಳನ್ನು ಒಡ್ಡಿ ಅಮಾಯಕ ಹಿಂದೂಗಳನ್ನು ಇಸ್ಲಾಂ ಮತ್ತು ಕ್ರೈಸ್ತೀಕರಣ ಮಾಡಲಾಗುತ್ತಿದೆ” ಎಂದು ಅವರು ಆರೋಪಿಸಿದರು. ಸಂಪೂರ್ಣ ಮತಾಂತರ ನಿಷೇಧ ಕಾನೂನನ್ನು ಸರಕಾರ ಜಾರಿ ಮಾಡಬೇಕು. ಮತಾಂತರಿಗಳಿಗೆ ಉಗ್ರ ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿದರು.

Puttur_hindu_samavesa_4 Puttur_hindu_samavesa_3

ಆಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ವಿಹಿಂಪದ ಅಂತಿಮ ಗುರಿ. ಕಾಶ್ಮೀರದಿಂದ ಪರಿತ್ಯಕ್ತಗೊಂಡ ನಾಲ್ಕು ಹಿಂದೂಗಳನ್ನು ಮರಳಿ ಅಲ್ಲಿಗೆ ಕಳುಹಿಸಿ ಕೊಡುವುದು ವಿಹಿಂಪದ ಉದ್ದೇಶ. ಇಂದು ಜಗತ್ತಿನ ನೂರು ದೇಶಗಳಲ್ಲಿ ವಿಹಿಂಪ ಶಾಖೆಗಳಿವೆ. ಭಾರತದ ಎರಡು ಲಕ್ಷ ಹಳ್ಳಿಗಳಲ್ಲಿ ವಿಹಿಂಪ ಕಾರ್ಯೋನ್ಮುಖವಾಗಿದೆ. ಸಮಗ್ರ ಭಾರತದ ನಿರ್ಮಿಸಿ ರಾವಲ್ಪಿಂಡಿಯಲ್ಲಿ ಕೇಸರಿ ಧ್ವಜ ಹಾರಿಸಿದ ಬಳಿಕವೇ ವಿಶ್ವ ಹಿಂದೂ ಪರಿಷತ್ ವಿಜಯೋತ್ಸವ ಆಚರಿಸಲಿದೆ ಎಂದರು ತೊಗಾಡಿಯಾ.

ಸಮಾವೇಶದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಆರೆಸ್ಸೆಸ್ ದಕ್ಷಿಣ ಕ್ಷೇತ್ರೀಯ ಸಂಪರ್ಕ ಪ್ರಮುಖ್ ಡಾ.ಕಲ್ಕಡ ಪ್ರಭಾಕರ ಭಟ್, ಹಿಂದೂ ಸಮಾಜದ ನಿರ್ಮಾಣ ಈ ಭೂಮಿಯ ಹುಟ್ಟಿನೊಂದಿಗೆ ಆರಂಭಗೊಂಡಿದೆ. ಹಿಂದೂಗಳನ್ನು ಪರಂಪರೆಯಿಂದ ಸ್ವತಂತ್ರ ಭಾರತದಲ್ಲಿ ನಿರ್ಲಕ್ಷಿಸುತ್ತಾ ಬರಲಾಗಿದೆ. ಇದನ್ನು ತಪ್ಪಿಸಲು ಹಿಂದೂಗಳ ಸಮಗ್ರ ಸಂಘಟನೆ ಅಗತ್ಯವಿದೆ. ಮತಾಂತರ, ಲವ್ ಜಿಹಾದ್ ಹಿಂದೂ ಧರ್ಮದ ಅವಹೇಳನ, ಗೋಹತ್ಯೆ ವಿರುದ್ಧ ಹಿಂದೂಗಳು ಕಟ್ಟೆಚ್ಚರ ವಹಿಸಬೇಕಾಗಿದೆ ಎಂದರು.

Puttur_hindu_samavesa_7 Puttur_hindu_samavesa_6

ಸಮಾರಂಭದಲ್ಲಿ ಪಾಲ್ಗೊಂಡ ವಜ್ರದೇಹಿ ಮಠದ ರಾಜಶೇಖರಾನಂದಜೀ, ರಾಜ್ಯ ಸರಕಾರ ಹಿಂದೂಗಳ ರಕ್ಷಣೆಯಲ್ಲಿ ವಿಫಲವಾಗಿದೆ ಎಂದು ಆರೋಪಿಸಿದರು. ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ, ಮಠ ಮಾನ್ಯಗಳನ್ನು ರಕ್ಷಿಸಲು ಹಿಂದೂಗಳು ಒಗ್ಗೂಡಬೇಕು ಎಂದರು. ಮಾಣಿಲ ಶ್ರೀ ಮೋಹನದಾಸ ಸ್ವಾಮೀಜಿ, ಹಿಂದೂ ಸಾರಸತ್ವದ ಗ್ರಹಿಕೆಯಿಲ್ಲದ ನಕಲಿ ಹಿಂದೂ ಸಂಘಟನೆಗಳನ್ನು ಹಿಂದೂಗಳು ತಿರಸ್ಕರಿಸಬೇಕು ಎಂದರು.

ಬಾಳೆಕೋಡಿಯ ಶ್ರೀ ಶಶಿಕಾಂತಮಣಿ ಸ್ವಾಮೀಜಿ, ವಿಹಿಂಪದ ಮುಖಂಡರಾದ ಚಂದ್ರಕಾಂತ ದೇವಿ, ಗೋಪಾಲಜಿ, ಮೀನಾಕ್ಷಿ ತಾಯಿ, ಉದ್ಯಮಿ ಕುಡ್ಗಿ ಸುಧಾಕರ ಶೆಣೈ, ಬಾಬು ಮೊಗೇರ, ಬಜರಂಗದಳದ ಶರಣ್ ಪಂಪ್‌ವೆಲ್, ವಿಹಿಂಪ ರಾಜ್ಯಾಧ್ಯಕ್ಷ ಎಂ.ಬಿ.ಪುರಾಣಿಕ್ ಮತ್ತಿತರರು ಉಪಸ್ಥಿತರಿದ್ದರು. ಹೃದಯ ಸಂಗಮ ಸಮಿತಿಯ ಡಾ.ಪ್ರಸಾದ್ ಭಂಡಾರಿ ಸ್ವಾಗತಿಸಿದರು. ಅರುಣ್ ಪುತ್ತಿಲ ಪ್ರಸ್ತಾವನೆ ಮಾಡಿದರು. ಡೀಕಯ್ಯ ಪೆರ‌್ವೋಡಿ ವಂದಿಸಿದರು. ಸೂರ್ಯನಾರಾಯಣ ಭಟ್ ಕಶೆಕೋಡಿ, ಹರಿಣಿ ಪುತ್ತೂರಾಯ, ಮುರಳೀಕೃಷ್ಣ ಹಸಂತಡ್ಕ ಕಾರ್ಯಕ್ರಮ ಸಂಯೋಜಿಸಿದರು.

ವ್ಯಾಪಾರಿ ಜೆಹಾದ್, ಜನಸಂಖ್ಯೆ ಜೆಹಾದ್: ಹಿಂದೂಗಳು ಲವ್ ಜಿಹಾದ್‌ನ್ನು ಮಾತ್ರ ಉಲ್ಲೇಖಿಸುತ್ತಿದ್ದಾರೆ. ಆದರೆ, ಭಾರತದಲ್ಲಿ ಲವ್ ಜಿಹಾದ್ ಮಾತ್ರ ಕಂಟಕವಲ್ಲ. ವ್ಯಾಪಾರಿ ಜಿಹಾದ್, ಜನಸಂಖ್ಯೆ ಜಿಹಾದ್‌ಗಳು ಈ ದೇಶವನ್ನು ಹಿಂದೂಗಳ ಕೈಯಿಂದ ಕಸಿಯುತ್ತಿದೆ. ಇದಕ್ಕೆ ಪರಿಹಾರ ಭಾರತವನ್ನು ಹಿಂದೂ ರಾಷ್ಟ್ರವಾಗಿ ಘೋಷಿಸಬೇಕು. ಇದಕ್ಕಾಗಿ ಸಂವಿಧಾನದಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕು. ಮುಂದಿನ ಒಂದು ಸಾವಿರ ವರ್ಷಗಳ ನಂತರವೂ ಈ ಭಾರತ ಹಿಂದೂ ರಾಷ್ಟ್ರವಾಗಿ ಉಳಿಯಬೇಕಾದರೆ ಆಡಳಿತಾರೂಢರು ಕಾನೂನು ಕ್ರಮಗಳನ್ನು ಬಿಗಿಗಗೊಳಿಸುವ ಅಗತ್ಯವಿದೆ’ ಎಂದರು. ತೊಗಾಡಿಯಾ

ಕನಿಷ್ಠ 3 ಮಕ್ಕಳು ಇರಲಿ-ತೊಗಾಡಿಯಾ: ವಿಹಿಂಪ ಮುಂದಿನ ಒಂದು ಸಹಸ್ರ ವರ್ಷಗಳ ಕಾರ್ಯಸೂಚಿ ಹೊಂದಿದೆ. ನಮ್ಮ ಮುಂದಿನ ಪೀಳಿಗೆಗಳು ಸುರಕ್ಷತೆಯಿಂದ, ಸಮೃದ್ಧಿಯಿಂದ, ಸನ್ಮಾನದಿಂದ ಬದುಕಬೇಕು ಎನ್ನುವುದು ವಿಹಿಂಪದ ಆಶಯವಾಗಿದೆ. ಇದಕ್ಕಾಗಿ ಹಿಂದೂಗಳು ಮೊದಲಾಗಿ ತಮ್ಮ ಸಂಖ್ಯೆಯನ್ನು ವೃದ್ಧಿಸಿಕೊಳ್ಳಬೇಕು. ಪ್ರತಿಯೊಂದು ಹಿಂದೂ ದಂಪತಿಯೂ ಕನಿಷ್ಠ ಮೂರು ಮಕ್ಕಳನ್ನು ಹೊಂದಿರಬೇಕು. 70 ಕೋಟಿ ಹಿಂದೂಗಳ ಸಂಖ್ಯೆ 700 ಕೋಟಿ ತಲುಪಬೇಕು ಎಂದು ತೊಗಾಡಿಯಾ ಹೇಳಿದರು.

Write A Comment