ಕುಂದಾಪುರ: ವಿದ್ಯಾರಂಗ ಮಿತ್ರ ಮಂಡಳಿಯ ನಲವತ್ತೈದನೇ ವಾರ್ಷಿಕೋತ್ಸವದ ಅಂಗವಾಗಿ ಕುಂದಾಪುರದ ಚಿಕ್ಕನ್ ಸಾಲ್ ಸರೆತಯಲ್ಲಿ ಅಂಚೆ ಕಚೇರಿಯ ಎದುರುಗಡೆ ಖಾರ್ವಿಕೇರಿ ರಸ್ತೆ ಸಂಪರ್ಕಿಸುವ ಸ್ಥಳದಲ್ಲಿ ಸುಮಾರು ಹತ್ತು ಸಾವಿರ ರೂಪಾಯಿಗಳ ವೆಚ್ಚದಲ್ಲಿ ನೂತನವಾಗಿ ಅಳವಡಿಸಲಾದ ನಿಮ್ನ ದರ್ಪಣ (ಡೂಂ ಮಿರರ್) ವ್ಯವಸ್ಥೆಯನ್ನು ಪುರಸಭೆಯ ಅಧ್ಯಕ್ಷೆ ಯು.ಎಸ್. ಕಲಾವತಿ ಉದ್ಘಾಟಿಸಿದರು.
ಅಂಚೆ ಕಚೇರಿ ಎದುರು ಇರುವ ಸಂಪರ್ಕ ಸ್ಥಳದಲ್ಲಿ ಅಪಘಾತಗಳು ಸಂಭವಿಸುತ್ತಿದ್ದು, ಮೂರೂ ಬದಿಯಿಂದ ಸಂಚರಿಸುವ ವಾಹನಗಳಿಗೆ ಕಾಣಿಸುವಂತೆ ಈ ವ್ಯವರ್ಸತೆಯನ್ನು ಅಳವಡಿಸಲಾಗಿದೆ. ಪ್ರತಿಯೊಂದು ಅಪಘಾತ ವಲಯದಲ್ಲಿಯೂ ಇಂತಹುದೇ ವ್ಯವಸ್ಥೆಯನ್ನು ಬೇರೆ ಬೇರೆ ಸಂಘ ಸಂಸ್ಥೆಗಳು ಅಳವಡಿಸಲು ಚಿಂತನೆ ನಡೆಸುವ ಮೂಲಕ ಕುಂದಾಪುರದ ರಸ್ತೆಗಳಲ್ಲಿ ಅಪಘಾತ ತಡೆಯುವಲ್ಲಿ ಯತ್ನಿಸಬೇಕು ಎಂದು ವಿದ್ಯಾರಂಗ ಮಿತ್ರ ಮಂಡಳಿಯ ಪದಾಧಿಕಾರಿ ಚಂದ್ರಶೇಕರ ಖಾರ್ವಿ ಹೇಳಿದರು.
ಈ ಸಂದರ್ಭ ವಿದ್ಯಾರಂಗ ಮಿತ್ರ ಮಂಡಳಿ ಅಧ್ಯಕ್ಷ ಕೆ, ಗಣೇಶ್ ನಾಯ್ಕ, ಅಖಿಲ ಭಾರತ ಕೊಂಕಣ ಖಾರ್ವಿ ಮಹಾಜನ ಸಂಘದ ಅಧ್ಯಕ್ಷ ಕೆ. ಬಿ. ಖಾರ್ವಿ, ಕಾರ್ಯದರ್ಶಿ ಉಮಾನಾಥ ಗಂಗೊಳ್ಳಿ ವಿದ್ಯಾನಿಧಿ ಯೋಜನೆ ಅಧ್ಯಕ್ಷ ಪ್ರಕಾಶ್ ಖಾರ್ವಿ, ಪುರಸಭೆ ಸದಸ್ಯರಾದ ರವಿಕಲಾ ಗಣೇಶ್ ಹಾಗೂ ಸಂದೀಪ್ ಪೂಜಾರಿ ಉಪಸ್ಥಿತರಿದ್ದರು.