ಕೊಣಾಜೆ: ಮುಕ್ತಿವಂತ ಸಂತ ಜೋಸೆಪ್ ವಾಜ್ ಅವರಿಗೆ ಶ್ರೀಲಂಕಾದ ಕೊಲೊಂಬೊದಲ್ಲಿ ಸಂತ ಪದವಿ ಪ್ರದಾನ ಮಾಡಿದ ಕ್ಷಣವನ್ನು ಮುಡಿಪು ಪವಾಡ ಬೆಟ್ಟದ ಮುಕ್ತಿವಂತ ಸಂತ ಜೋಸೆಪ್ ವಾಜ್ರ ಪುಣ್ಯ ಕ್ಷೇತ್ರದಲ್ಲಿ ಸಹಸ್ರಾರು ಜನರ ಸಮ್ಮುಖ ಸಂಭ್ರಮದಿಂದ ಆಚರಿಸಲಾಯಿತು.
ಜೋಸೆಫ್ ವಾಜ್ ಅವರು ನಮ್ಮ ಪೂರ್ವಜರಿಗೆ ಮತ್ತು ಹಿರಿಯರಿಗೆ ವಿವಿಧ ಕ್ರೈಸ್ತ ಸಂಸ್ಕಾರಗಳನ್ನು ಮತ್ತು ಕ್ರೈಸ್ತ ವಿಶ್ವಾಸದ ಬದುಕಿಗೆ ಪ್ರೇರಣೆ ನೀಡಿದವರು. ಅವರಿಗೆ ಸಂತ ಪದವಿ ಪ್ರಾಪ್ತಿಯಾಗಿರುವುದು ನಮಗೆ ಸಂತಸದ ಮತ್ತು ಹೆಮ್ಮೆಯ ಸಂಗತಿ. ಅವರ ಬದುಕು ಮತ್ತು ಸಲ್ಲಿಸಿದ ಆಧ್ಯಾತ್ಮಿಕ ಹಾಗೂ ಸಾಮಾಜಿಕ ಸೇವೆ ನಮಗೆ ಆದರ್ಶ ಹಾಗೂ ಮಾರ್ಗದರ್ಶನ ಆಗ ಬೇಕು ಎಂದು ಮಂಗಳೂರಿನ ಬಿಷಪ್ ರೆ.ಡಾ. ಅಲೋಶಿಯಸ್ ಪಾವ್ಲ್ ಡಿಸೋಜ ಪ್ರವಚನದಲ್ಲಿ ಹೇಳಿದರು.
ಜೋಸೆಫ್ ವಾಜ್ ಅವರಿಗೆ ಸಂತ ಪದವಿ ಪ್ರಾಪ್ತಿಯನ್ನು ಚರ್ಚ್ಗಳಲ್ಲಿ ಬೆಳಗ್ಗೆ 9 ಗಂಟೆಗೆ ಗಂಟೆಯ ನಿನಾದದೊಂದಿಗೆ ಘೋಷಿಸಲಾಯಿತು ಎಂದು ಬಿಷಪ್ ವಿವರಿಸಿದರು. ಜೋಸೆಫ್ ವಾಜ್ ಅವರ ಜೀವನಕ್ಕೆ ಸಂಬಂಧಿಸಿದ ಪುಸ್ತಕ ಹಾಗೂ ಸಿ.ಡಿ. ಯನ್ನು ಬಿಷಪರು ಬಿಡುಗಡೆ ಮಾಡಿದರು.
ಸಂಭ್ರಮದ ಬಲಿಪೂಜೆ: ಕಾರ್ಯಕ್ರಮದ ಪ್ರಯುಕ್ತ ಮುಡಿಪು ಮುಕ್ತಿಧರ ಜೋಸೆಫ್ ವಾಜ್ ಪುಣ್ಯಕ್ಷೇತ್ರದಲ್ಲಿ ಬಿಷಪ್ ಬಲಿ ಪೂಜೆ ನೆರವೇರಿಸಿದರು. ಅವರ ಜೊತೆಗೆ 25ಕ್ಕೂ ಅಧಿಕ ಧರ್ಮಗುರುಗಳು ಸಹಭಾಗಿಗಳಾಗಿದ್ದರು. ಪುಣ್ಯಕ್ಷೇತ್ರದ ನಿರ್ದೇಶಕ ಫಾ. ಗ್ರೇಗರಿ ಡಿಸೋಜಾ ಅವರು ಉಪಕಾರ ಸ್ಮರಿಸಿದರು.
ಬಲಿ ಪೂಜೆಯ ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಸಂಸದ ನಳಿನ್ ಕುಮಾರ್ ಕಟೀಲು ಮಾತನಾಡಿ, ಮಕರ ಸಂಕ್ರಾಂತಿ ಭಾರತಕ್ಕೆ ಪವಿತ್ರ ದಿನ. ಆ ದಿನದಂದು ಜೋಸೆಫ್ ವಾಜ್ ಅವರನ್ನು ಸಂತ ಪದವಿಗೇರಿಸಿರುವುದು ಕಾಕತಾಳೀಯ ಎಂದರು.
ಲೌಕಿಕ ವಿಚಾರಗಳೊಂದಿಗೆ ಆಧ್ಯಾತ್ಮಿಕ ವಿಚಾರಗಳಿಗೂ ಆದ್ಯತೆ ನೀಡ ಬೇಕೆಂಬುದು ಜೋಸೆಫ್ ವಾಜ್ ಅವರ ಜೀವನ ಸಂದೇಶವಾಗಿದ್ದು, ಅದನ್ನು ನಾವು ಪಾಲಿಸ ಬೇಕೆಂದು ಮಂಗಳೂರು ಧರ್ಮ ಪ್ರಾಂತನ ಪಾಲನಾ ಪರಿಷತ್ನ ಪ್ರಧಾನ ಕಾರ್ಯದರ್ಶಿ ಎಂ.ಪಿ. ನೊರೋನ್ಹಾ ಹೇಳಿದರು. ಜಿ.ಪಂ. ಉಪಾಧ್ಯಕ್ಷ ಸತೀಶ್ ಕುಂಪಲ, ಸಂತೋಷ್ ಕುಮಾರ್ ರೈ ಬೋಳಿಯಾರ್, ಬಾಳೆಪುಣಿ ಗ್ರಾಪಂ ಅಧ್ಯಕ್ಷ ಗಿರೀಶ್ ಬೆಳ್ಳೇರಿ ಉಪಸ್ಥಿತರಿದ್ದರು.
ಪುಣ್ಯಕ್ಷೇತ್ರದ ಫಾದರ್ ಗ್ರೆಗರಿ ಡಿ’ಸೋಜ ಸ್ವಾಗತಿಸಿದರು. ಪಾಲನಾ ಮಂಡಳಿಯ ಉಪಾಧ್ಯಕ್ಷ ರೋಶನ್ ಡಿಸೋಜಾ, ಕಾರ್ಯದರ್ಶಿ ಲಿಯೋ ಡಿಸೋಜಾ ಉಪಸ್ಥಿತರಿದ್ದರು. ಲ್ಯಾನ್ಸಿ ಡಿಸೋಜಾ ಕಾರ್ಯಕ್ರಮ ನಿರ್ವಹಿಸಿದರು.
ಪುಣ್ಯ ಕ್ಷೇತ್ರದ ಹೊಸ ರಸ್ತೆಯನ್ನು ಆರೋಗ್ಯ ಯು.ಟಿ. ಖಾದರ್ ಹಾಗೂ ಜೋಸೆಫ್ ವಾಜ್ ಸ್ಮರಣಾರ್ಥ ಚಿಣ್ಣರ ವನ (ಆಪಾರ್ಕ್)ನ್ನು ಬಿಷಪ್ ರೆ.ಡಾ. ಅಲೋಶಿಯಸ್ ಪಾವ್ಲ್ ಡಿಸೋಜ ಉದ್ಘಾಟಿಸಿದರು.
ಕಾರ್ಯಕ್ರಮ ಮೂರು ದಿನಗಳ ಕಾಲ ನಡೆಯಲಿದ್ದು, ಜ. 16ರಂದು ಜರಗುವ ಸಮಾರೋಪದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ರಾಜ್ಯದ ಪ್ರಮುಖ ಸಚಿವರು ಪಾಲ್ಗೊಳ್ಳಲಿರುವರು.