ವರದಿ : ಸತೀಶ್ ಕಾಪಿಕಾಡ್ / ಚಿತ್ರಗಳು : ಸುಕುಮಾರ್ ಹಾಗೂ ಸತೀಶ್ ಕಾಪಿಕಾಡ್
ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಡೆಯುವ ವಿಶ್ವವಿದ್ಯಾನಿಲಯ ಕಾಲೇಜು ಮಟ್ಟದ ಯಾವೂದೇ ಕ್ರೀಡಾ ಚಟುವಟಿಕೆಗಳಿಗೆ ಪಾಲಿಕೆ ವತಿಯಿಂದ ಸಂಪೂರ್ಣ ಸಹಕಾರ ಹಾಗೂ ಪ್ರೋತ್ಸಾಹ ನೀಡಲಾಗುವುದು ಎಂದು ಮಂಗಳೂರು ಮೇಯರ್ ಶ್ರೀ ಮಹಾಬಲ ಮಾರ್ಲ ಹೇಳಿದರು.
ಅವರು ಶುಕ್ರವಾರ ಶ್ರೀ ಗೋಕರ್ಣನಾಥೇಶ್ವರ ಕಾಲೇಜು ಮಂಗಳೂರು ಮತ್ತು ಹಿರಿಯ ವಿದ್ಯಾರ್ಥಿ ಸಂಘ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯ ಇದರ ಸಂಯುಕ್ತ ಆಶ್ರಯದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಮೂರು ದಿನಗಳ ಪುರುಷರ ಕಬಡ್ಡಿ ಪಂದ್ಯಾಟ – 2014 -15ರ ಸಮಾರೋಪ ಸಮಾರಂಭದಲ್ಲಿ ವಿಜೇತ ತಂಡಗಳಿಗೆ ಬಹುಮಾನ ವಿತರಿಸಿ ಮಾತನಾಡಿದರು.
ಇಂತಹ ಸ್ಫರ್ಧೆಗಳಲ್ಲಿ ಪಾಲ್ಗೊಳ್ಳುವ ಅವಕಾಶ ಪ್ರತಿಯೊಬ್ಬರಿಗೂ ಬರುತ್ತದೆ. ಆದರೆ ಅವಕಾಶಗಳನ್ನು ಉಪಯೋಗಿಸಿಕೊಂಡು ಸಾಧನೆ ಮಾಡುವವರು ಕೆಲವೇ ಕೆಲವು ಮಂದಿ. ಈ ರೀತಿ ಸಾಧನೆ ಮಾಡಿದ ಸಾಧಕರು ಹಾಗೂ ಇಂತಹ ಕ್ರೀಡಾ ಚಟುವಟಿಕೆಗಳನ್ನು ಸಂಘಟಿಸುವಂತಹ ಸಂಘಟಕರು ಮುಂದಿನ ಪೀಳಿಗೆಗೂ ಇಂತಹ ಕ್ರೀಡಾ ಅವಕಾಶಗಳನ್ನು ಕಲ್ಪಿಸುವ ಹಾಗೂ ಪ್ರೋತ್ಸಾಹ ನೀಡುವ ಕಾರ್ಯವನ್ನು ಮಾಡುವ ಮೂಲಕ ಕ್ರೀಡಾ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿರ ಬೇಕು ಎಂದು ಹೇಳಿದ ಮೇಯರ್ ಅವರು, ಶ್ರೀ ಗೋಕರ್ಣನಾಥೇಶ್ವರ ಕಾಲೇಜು ಕ್ರೀಡಾ ಚಟುವಟಿಕೆಗಳಿಗೆ ನೀಡುತ್ತಿರುವ ಬೆಂಬಲ ಹಾಗೂ ಪ್ರೋತ್ಸಾಹಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ, ಶುಭಾ ಹಾರೈಸಿದರು.
ಶ್ರೀ ಗೋಕರ್ಣನಾಥೇಶ್ವರ ಕಾಲೇಜಿನ ಪ್ರಾಂಶುಪಾಲರಾದ ಡಾ| ಗಂಗಾಧರ್.ಬಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಶ್ರೀ ಗೋಕರ್ಣನಾಥೇಶ್ವರ ಕಾಲೇಜಿನ ಸಂಚಾಲಕರಾದ ಶ್ರೀ ಎಸ್. ಜಯವಿಕ್ರಮ್, ಶ್ರೀ ಗೋಕರ್ಣನಾಥೇಶ್ವರ ಕಾಲೇಜಿನ ಹಳೇ ವಿಧ್ಯಾರ್ಥಿ ಸಂಘದ ಅಧ್ಯಕ್ಷ ಶ್ರೀ ನವೀನ್ ಚಂದ್ರ, ಎಮ್ಎಮ್ಎನ್ಎಲ್ನ ಸಹ ಉಪಾಧ್ಯಕ್ಷ ಆನಂದ್.ಕೆ, ಮನಪಾ ಸದಸ್ಯ ರಾಧಕೃಷ್ಣ ಮುಂತಾದವರು ಅಥಿತಿಗಳಾಗಿದ್ದರು.
ಕಾಲೇಜಿನ ಆಡಳಿತ ಮಂಡಳಿ ಸದಸ್ಯರಾದ ಡಾ| ಬಿ.ಜಿ ಸುವರ್ಣ, ಬಿ.ಪಿ.ಹರೀಶ್ ಕುಮಾರ್, ಶ್ರೀ ಸಂದೀಪ್ ರಾವ್ ಮುಂತಾದವರು ಉಪಸ್ಥಿತರಿದ್ದರು.
ಶ್ರೀ ಗೋಕರ್ಣನಾಥೇಶ್ವರ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಶ್ರೀ ಪುರುಷೋತ್ತಮ ಪೂಜಾರಿ. ಬಿ ಸ್ವಾಗತಿಸಿದರು. ಶ್ರೀ ಪ್ರವೀಣ್ ಬೆಳ್ತಂಗಡಿ ಕಾರ್ಯಕ್ರಮ ನಿರೂಪಿಸಿದರು. ಕಾಲೇಜಿನ ಅಸೋಸಿಯೇಟ್ ಪ್ರೊಫೆಸರ್ ಡಾ| ಉಮ್ಮಪ್ಪ ಪೂಜಾರಿ ವಂದಿಸಿದರು.
ಆಳ್ವಾಸ್ ಕಾಲೇಜು ಪ್ರಥಮ :
ಅಂತಿಮ ಸುತ್ತಿಗಾಗಿ (ಫೈನಲ್) ನಡೆದ ಇಂದಿನ ಪಂದ್ಯದಲ್ಲಿ ಮೂಡಬಿದೆರೆ ಆಳ್ವಾಸ್ ಕಾಲೇಜು ತಂಡ ಪ್ರಥಮ ಸ್ಥಾನವನ್ನು ಪಡೆದರೆ, ಜಿ.ಎಫ್.ಜಿ.ಸಿ ತೆಂಕನಡಿಯೂರ್ ದ್ವಿತೀಯ ಸ್ಥಾನ, ಎಸ್.ಡಿ.ಎಮ್ ಕಾಲೇಜು ಉಜಿರೆ ತೃತೀಯ ಸ್ಥಾನ ಪಡೆಯಿತು. ಅತಿಥೇಯ ತಂಡವಾದ ಮಂಗಳೂರಿನ ಶ್ರೀ ಗೋಕರ್ಣನಾಥೇಶ್ವರ ಕಾಲೇಜು ನಾಲ್ಕನೆ ಸ್ಥಾನಕ್ಕೆ ತೃಪ್ತಿ ಪಡೆಯಬೇಕಾಯಿತು.
40 ತಂಡಗಳು :
ಮೂರು ದಿನಗಳ ಕಾಲ ನಡೆದ ಈ ಕಬಡ್ಡಿ ಪಂದ್ಯಾಟದಲ್ಲಿ ಮಡಿಕೇರಿ, ಕುಶಾಲನಗರ, ಸೋಮವಾರ ಪೇಟೆ, ತೆಂಕನಡಿಯೂರು, ಉಡುಪಿ, ಕುಂದಾಪುರ, ಕಾರ್ಕಳ, ಮೂಡಬಿದಿರೆ, ಪುತ್ತೂರು, ಸುಳ್ಯ, ಬೆಳ್ತಂಗಡಿ, ಉಜಿರೆ ಸೇರಿದಂತೆ ಮಂಗಳೂರು ಹಾಗೂ ಸುತ್ತಮುತ್ತಲಿನ ಕಾಲೇಜುಗಳ ಸುಮಾರು 40 ತಂಡಗಳು ಈ ಪಂದ್ಯಾಟದಲ್ಲಿ ಪಾಲ್ಗೊಂಡಿದ್ದವು.