ಮಂಗಳೂರು,ಡಿ.31 : ಹಿರಿಯ ಪೊಲೀಸ್ ಅಧಿಕಾರಿಯಾಗಿರುವ ಎಸ್ ಮುರುಗನ್ ಅವರನ್ನು ಮಂಗಳೂರಿನ ನೂತನ ಪೊಲೀಸ್ ಆಯುಕ್ತರನ್ನಾಗಿ ನೇಮಕ ಮಾಡಲಾಗುತ್ತದೆ ಎಂಬ ವಿಚಾರ ಉನ್ನತ ಅಧಿಕಾರಿ ಮೂಲಗಳಿಂದ ಲಭಿಸಿದೆ. ಅಲ್ಲದೆ ಇತ್ತೀಚೆಗೆ ಕುಂದಾಪುರದ ಹೆಚ್ಚುವರಿ ಹೊಣೆ ಹೊತ್ತುಕೊಂಡಿದ್ದ ಎಎಸ್ಪಿ ಅನ್ನಾಮಲೈ ಅವರನ್ನು ಉಡುಪಿಯ ನೂತನ ಎಸ್ಪಿ(ಸೂರಿಂಟೆಂಡೆಂಟ್ ಆಫ್ ಪೊಲೀಸ್) ಆಗಿ ನೇಮಕ ಮಾಡಲಾಗುತ್ತದೆ ಎಂಬ ಮಾಹಿತಿಯೂ ಲಭಿಸಿದೆ.
ಈ ಬಗ್ಗೆ ಅಧಿಕೃತ ಘೋಷಣೆಯನ್ನು ಇಂದು ಮಧ್ಯರಾತ್ರಿ ಅಥವಾ ನಾಳೆ(ಜ.1) ರಂದು ಮಾಡಲಿದೆ ಎಂದು ಹೇಳಲಾಗುತ್ತದೆ. ಎಸ್ ಮುರುಗನ್ ಅವರು ಸದ್ಯ ಅಧಿಕಾರದಲ್ಲಿರುವ ಆರ್ ಹಿತೇಂದ್ರ ಅವರ ಸ್ಥಾನವನ್ನು ವಹಿಸಲಿದ್ದಾರೆ. ಅದೇ ರೀತಿ ಅನ್ನಾಮಲೈ ಅವರು ಸದ್ಯ ಅಧಿಕಾರದಲ್ಲಿರುವ ರಾಜೇಂದ್ರಪ್ರಸಾದ್(ಎಸ್ಪಿ) ಅವರ ಸ್ಥಾನವನ್ನು ಅಲಂಕರಿಸಲಿದ್ದಾರೆ ಎಂದು ಹೇಳಲಾಗುತ್ತದೆ. ಎಸ್ ಮುರುಗನ್ ಹಾಗೂ ಅನ್ನಾಮಲೈ ಅವರು ತಮಿಳುನಾಡು ಮೂಲದವರಾಗಿದ್ದಾರೆ. 1997ರಲ್ಲಿ ಐಪಿಎಸ್ ಅಧಿಕಾರಿಯಾಗಿ ಆಯ್ಕೆಯಾಗಿದ್ದರು. ಎಸ್ ಮುರುಗನ್ ಅವರು ಈಗಾಗಲೇ ಹಲವಾರು ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ ಅನುಭವವಿದೆ. ಪ್ರಸ್ತುತ ಬೆಂಗಳೂರಿನ ಆಂಟಿ ನಕ್ಸಲ್ ಫೋರ್ಸ್ನ ಕಮಾಂಡರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಮೈಸೂರು, ಶಿವಮೊಗ್ಗದಲ್ಲಿ ಎಸ್ಪಿ ಆಗಿ ಕಾರ್ಯನಿರ್ವಹಿಸಿದ್ದರು. ಸಿಐಡಿ, ಉಪ ಐಜಿಪಿ, ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆ(ಆಂತರಿಕ ಭದ್ರತಾ ವಿಭಾಗ), ಬೆಂಗಳೂರಿನ ಡಿಐಸಿ ಎಸ್ಪಿ ಆಗಿ ಕಾರ್ಯನಿರ್ವಸಿಸಿದ ಅನುಭವವಿದೆ.
ಅದೇ ರೀತಿ ಅನ್ನಾಮಲೈ ಅವರು ಕೊಯಂಬುತ್ತೂರು ಮೂಲದವರಾಗಿದ್ದು, ಎಂಬಿಎ ಪದವೀಧರ. ಮೆಕ್ಯಾನಿಕಲ್ ಇಂಜಿನಿಯರಿಂಗ್ ಕಲಿತ ಅವರು 2011ರಲ್ಲಿ ಐಪಿಎಸ್ ಪಾಸ್ ಮಾಡಿದ ನಂತರ ಪೊಲೀಸ್ ಅಧಿಕಾರಿಯಾಗಿ ನೇಮಕಗೊಂಡರು. ಕಾರ್ಕಳದ ಎಎಸ್ಪಿಯಾಗಿ ಅಧಿಕಾರ ವಹಿಸಿದ ಇವರು ದಕ್ಷ ಸೇವೆಗೆ ಹೆಸರು ಗಳಿಸಿದ್ದಾರೆ.