ಹೆಬ್ರಿ,ಡಿ.31: ಹೆಬ್ರಿ ಠಾಣಾ ವ್ಯಾಪ್ತಿಯ ಬೇಳಂಜೆ ಚಿನ್ನಾರಕಟ್ಟೆ, ತೋಳಾರ್ಬೆಟ್ಟು, ಪ್ರದೇಶದ ಸರಕಾರಿ ಜಾಗದಲ್ಲಿರುವ ಲಕ್ಷಾಂತರ ಮೌಲ್ಯದ ಮರಗಳನ್ನು ಕಡಿದು ಅಕ್ರಮವಾಗಿ ಬಚ್ಚಿಟ್ಟ ಪ್ರದೇಶವನ್ನು ಅರಣ್ಯ ಇಲಾಖಾಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಸ್ಥಳೀಯರ ಮಾಹಿತಿ ಮೇರೆಗೆ ಮೊದಲನೆಯ ಬಾರಿ ಡಿ. 27ರಂದು ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಲಕ್ಷಾಂತರ ಮೌಲ್ಯದ ಮರ ಪತ್ತೆಯಾಗಿತ್ತು. ಈ ಕಾರಣದಿಂದ ಕಳೆದ ನಾಲ್ಕು ದಿನಗಳಿಂದ ಈ ಪ್ರದೇಶದಲ್ಲಿ ಶೋಧ ಕಾರ್ಯ ಮುಂದುವರಿದಿತ್ತು. ಡಿ. 30ರಂದು ಅಧಿಕಾರಿಗಳು ಪರಿಶೀಲನೆ ನಡೆಸಿದಾಗ ಮತ್ತಷ್ಟು ಕಡಿದ ಮರಗಳು ಪತ್ತೆಯಾಗಿದೆ.
ಮರಗಳನ್ನು ಕಲ್ಲು ಕೋರೆಗಳಲ್ಲಿ ಹೂತು ಹಾಕಲಾಗಿತ್ತು. ಹಾಗೆಯೇ ಕೆಲವು ಮರಗಳನ್ನು ಹುಯ್ಯರಬೆಟ್ಟು, ಬೇಳಂಜೆ ಗರಡಿಯ ಬಳಿ ಅಡಗಿಸಿಟ್ಟಿದ್ದು ಕಂಡುಬಂದಿದೆ. ಮರಗಳ ನಿಖರ ಮೌಲ್ಯ ಸಿಗದಿದ್ದರೂ ಈ ಪ್ರಕರಣದಲ್ಲಿ ಲಕ್ಷಾಂತರ ಮೌಲ್ಯದ ಮರಗಳನ್ನು ನಾಶ ಮಾಡಿರುವುದು ಮೇಲ್ನೋಟಕ್ಕೆ ತಿಳಿಯುತ್ತದೆ ಎಂದು ಅರಣ್ಯಾಧಿಕಾರಿಗಳು ಹೇಳುತ್ತಾರೆ. ಡಿಎಫ್ಒ ಆರ್. ರವಿಶಂಕರ್, ಎಸಿಎಫ್ ಕಿಶೋರ್ ಕುಮಾರ್ ನೇತೃತ್ವದಲ್ಲಿ ಹೆಬ್ರಿ ಅರಣ್ಯಾಧಿಕಾರಿ ತಂಡ ಸ್ಥಳಕ್ಕೆ ಭೇಟಿ ನೀಡಿದ್ದು, ಅಮೃತಕುಮಾರ ಶೆಟ್ಟಿ, ನವೀನ್ ಶೆಟ್ಟಿ ಅವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ತನಿಖೆ ಮುಂದುವರಿದಿದೆ.