ಕುಂದಾಪುರ: ವಾರದ ಹಿಂದೆ ಪಿಕ್ ಅಪ್ ವಾಹನವೊಂದಕ್ಕೆ ಎದುರುಗಡೆಯಿಂದ ಬಂದ ಖಾಸಗೀ ಬಸ್ಸೊಂದು ಡಿಕ್ಕಿ ಹೊಡೆದ ಪರಿಣಾಮ ಜೀವನ್ಮರಣ ಸ್ಥಿತಿಯಲ್ಲಿದ್ದ ಪಿಕ್ಅಪ್ನ ಚಾಲಕ ಚಂದ್ರ ಪೂಜಾರಿ(40) ಡಿ.28ರಂದು ರಾತ್ರಿ ಚಿಕಿತ್ಸೆ ಫಲಕಾರಿಯಾಗದೇ ಮಣಿಪಾಲ ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ.
ಡಿ.23 ರಂದು ಸಂಜೆ ಕುಂಭಾಶಿಯಲ್ಲಿ ರಾಷ್ಟ್ರೀಯ ಹೆದ್ದಾರಿ ೬೬ರಲ್ಲಿ ನಡೆದಿದೆ. ಪಿಕ್ಅಪ್ ವಾಹನದಲ್ಲಿದ್ದ ಕುಂದಾಪುರದ ಮಂಜುನಾಥ ಮಲ್ಯ ಯಾನೆ ಪ್ರಕಾಶ್ ಮಲ್ಯ(49) ಎಂಬಾತ ಗಂಭೀರ ಗಾಯಗೊಂಡು ಆಸ್ಪತ್ರೆಗೆ ಸಾಗಿಸುವ ಸಂದರ್ಭ ದಾರಿ ಮಧ್ಯೆ ಸಾವನ್ನಪ್ಪಿದ್ದರೆ, ಚಾಲಕ ವಂಡ್ಸೆ ನಿವಾಸಿ ಚಂದ್ರ ಪೂಜಾರಿ ಗಂಭೀರ ಗಾಯಗೊಂಡು ಜೀವನ್ಮರಣ ಸ್ಥಿತಿಯಲ್ಲಿ ಮಣಿಪಾಲ ಆಸ್ಪತ್ರೆಯಲ್ಲಿ ದಾಖಲಾಗಿದ್ದರು.
ಗಂಭೀರ ಗಾಯಗೊಂಡ ಚಾಲಕ ಚಂದ್ರ ಪೂಜಾರಿ ಈ ಹಿಂದೆ ಸಂಬಂಧಿಕರ ಲಾರಿಯೊಂದರಲ್ಲಿ ಕಂಡಕ್ಟರ್ ಆಗೆ ಕೆಲಸ ಮಾಡುತ್ತಿದ್ದರು. ನಂತರ ಕುಂದಾಪುರದ ಸ್ಥಳೀಯ ಆಂಗ್ಲ ಮಾಧ್ಯ ಶಾಲೆಯ ಶಾಲಾ ವಾಹನದಲ್ಲಿ ಚಾಲಕರಾಗಿ ಕಳೆದ 23 ವರ್ಷಗಳಿಂದ ಕೆಲಸ ಮಾಡುತ್ತಿದ್ದರು. ಬಹಳಷ್ಟು ಸರಳ ಸ್ವಭಾವದವರಾಗಿದ್ದ ಚಂದ್ರ ಪೂಜಾರಿ ಮಿತಭಾಷಿಯಾಗಿದ್ದರು. ಚಾಲಕ ವೃತ್ತಿಯಲ್ಲಿ ಇದುವರೆಗೆ ಅವರ ಮೇಲೆ ಪ್ರಕರಣಗಳಾಗಲೀ ಅಪಘಾತಗಳನ್ನು ಮಾಡಿದ ಆರೋಪಗಳಾಗಲೀ ಇಲ್ಲದೇ ಸ್ವಚ್ಛ ಚಾಲಕರಾಗಿ ಕೆಲಸ ಮಾಡುತ್ತಿದ್ದರು ಎಂಬುದಾಗಿ ಅವರು ಕೆಲಸ ಮಾಡುತ್ತಿದ್ದ ಶಾಲಾ ಆಡಳಿತ ಮಂಡಳಿ ಹೇಳಿದೆ. ಮೃತ ಚಂದ್ರ ಪೂಜಾರಿ ಕುಟುಂಬ ಅತೀ ಕಡುಬಡತನದಲ್ಲಿದ್ದು, ಪತ್ನಿ ಓರ್ವ ಪುತ್ರ ಹಾಗೂ ಓರ್ವ ಪುತ್ರಿಯರನ್ನು ಅಗಲಿದ್ದಾರೆ. ಮಕ್ಕಳು ಹಾಗೂ ಪತ್ನಿ ಮುಂದಿನ ಭವಿಷ್ಯ ಸಂಪೂರ್ಣ ಕತ್ತಲಲ್ಲಿದೆ.
ಸಾರಿಗೆ ಅಧಿಕಾರಿಗಳು ಎದ್ದೇಳಲಿ – ಮೃತನ ಸಹೋದರ ಆಕ್ರೋಶ : ನಿಮಿಷವೊಂದಕ್ಕೆ ಬಸ್ ರೂಟ್ ನಿಗಧಿ ಮಾಡುವ ಮೂಲಕ ಹೆದ್ದಾರಿಯಲ್ಲಿ ಸಂಚರಿಸುವ ಇತರ ವಾಹನಗಳಿಗೆ ಅಪಾಯ ತಂದೊಡ್ಡುವ ಖಾಸಗೀ ಬಸ್ಗಳ ನೀತಿಯಗೆ ಸಾರಿಗೆ ಇಲಾಖೆಯ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿರುವುದರಿಂದಲೇ ಈ ರೀತಿ ಅವಘಡಗಳಾಗುತ್ತಿವೆ ಎಂಬುದಾಗಿ ಮೃತ ಚಾಲಕ ಚಂದ್ರ ಪೂಜಾರಿಯವರ ಸಹೋದರ ಕೃಷ್ಣ ಪೂಜಾರಿ ಆರೋಪಿಸಿದ್ದಾರೆ. ಆನರ ಜೀವದ ಜೊತೆ ಆಟವಾಡುವ ಖಾಸಗೀ ಬಸ್ಗಳ ಹಾಗೂ ಸಾರಿಗೆ ಇಲಾಖೆಯ ಅಧಿಕಾರಿಗಳು ಇನ್ನಾದರೂ ಇತ್ತ ಕಡೆ ಗಮನ ಹರಿಸಿ ಬಸ್ ರೂಟ್ಗೆ ಹೆಚ್ಚಿನ ಸಮಯಾವಕಾಶ ಕಲ್ಪಿಸಬೇಕಾಗಿದೆ. ಇಲ್ಲವಾದರೆ ಜನಸಾಮಾನ್ಯರು ಹೆದ್ದಾರಿ ಹೆಣವಾಗುವುದನ್ನು ತಪ್ಪಿಸಲಾಗದು ಎನ್ನುವುದನ್ನು ಜನಪ್ರತಿನಿಧಿಗಳೂ ಅರ್ಥ ಮಾಡಿಕೊಂಡು ಸ್ಪಂದಿಸಬೆಕಾಗಿದೆ ಎಂದವರು ಹೇಳಿದ್ದಾರೆ.