(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)
ಮುಂಬಯಿ, ಡಿ.24 : ಮುಂಬಯಿ ನೆಲೆಯ ಪ್ರತಿಭಾನ್ವಿತ ಕಲಾಕಾರ ವೇಣು ಶೆಟ್ಟಿ ವಿಚಾರಧಾರೆ, ಅಭಿನಯದ ಮತ್ತು ಸುಜಾತ ವಿ.ಶೆಟ್ಟಿ ಮತ್ತು ಸ್ನೇಹಲ್ ವ್ಯಾಸ್ ನಿರ್ಮಾಪಕತ್ವದ ಕಾಮಧೇನು ಕಂಬೈನ್ಸ್ನ `ಗೋಪಾಲ’ ಕಾಮಧೇನು ಕಾವಲಿಗ ಚಲನಚಿತ್ರ ಕಲಾಭಿಮಾನಿಗಳು ಮನಪೂರ್ವಕವಾಗಿ ಸ್ವೀಕರಿಸುವ ಆಶಯ ನಮ್ಮಲ್ಲಿದೆ ಎಂದು ಪಾತ್ರಧಾರಿ ಹಿರಿಯ ನಟ ಬಿ.ಎಸ್ ಕುರ್ಕಾಲ್ ತಿಳಿಸಿದರು.
ಇಂದಿಲ್ಲಿ ಬುಧವಾರ ವಡಲಾದಲ್ಲಿನ ಎನ್ಕೆಇಎಸ್ ಶಾಲಾ ಸಭಾಗೃಹದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕುರ್ಕಾಲ್ ಈ ಚಲನಚಿತ್ರವು ಬರುವ ಜನವರಿ ಮೊದಲವಾರದಲ್ಲಿ ಮುಂಬಯಿ ಮಹಾನಗರ ಸೇರಿದಂತೆ ಮಹಾರಾಷ್ಟ್ರದಾದ್ಯಂತ ಹಾಗೂ ಕೊನೆಯ ವಾರದಲ್ಲಿ ಕರ್ನಾಟಕದದಾದ್ಯಂತ ತೆರೆ ಕಾಣಲಿದೆ. ಕನ್ನಡ ಚಿತ್ರವಾಗಿದ್ದರೂ ಮುಂಬಯಿಯಲ್ಲಿ ಯಾಕೆ ಬಿಡುಗಡೆ ಗೊಳಿಸಲ್ಪಡುವುದು ಎಂದು ಕೇಳಿದಾಗ ಈ ಚಿತ್ರದ ಪ್ರಮುಖರು ಮುಂಬಯಿವಾಸಿ ಕನ್ನಡಿಗರು ಮಾತ್ರವಲ್ಲದೆ ಬಹುತೇಕರು ಇಲ್ಲಿಯೇ ಪ್ರಸಿದ್ಧಿಯಲ್ಲಿರುವ ಕಾರಣ ಹೊಸ ಪ್ರಯತ್ನ ಮತ್ತು ನೂತನ ಪ್ರಯೋಗವನ್ನಾಗಿಸಿ ಈ ಬಗ್ಗೆ ಚಿಂತಿಸಲಾಗಿದೆ. ಮೈಸೂರು, ಮೇಲ್ಕೋಟೆ, ಆದಿಚುಂಚನಗಿರಿ, ಮುದನಗಿರಿ ಇತ್ಯಾದಿ ಹಳ್ಳಿ ಪ್ರದೇಶಗಳಲ್ಲಿ ಚಿತ್ರೀಕರಿಸಲ್ಪಟ್ಟ ಈ ಚಿತ್ರ ಸುಮಾರು ಒಂದು ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದ್ದು ಕುಟುಂಬ ಸಮೇತರಾಗಿ ನೋಡಲೇ ಬೇಕಾದ ಚಲನಚಿತ್ರವಾಗಿದೆ. 83 ರ ಹರೆಯದಲ್ಲೂ ನನಗೆ ಅಭಿನಯಿಸುವ ಅವಕಾಶ ಒದಗಿದ್ದು ಈ ಮೂಲಕ ಪ್ರತಿಭಾ ಪ್ರದರ್ಶನಕ್ಕೆ ವಯೋಮಿತಿ ಅಡ್ಡಿಯಾಗದು ಎನ್ನುವುದನ್ನು ಸಾಭೀತು ಪಡಿಸಿ ನಟನೆಯೊಂದಿಗೆ ಆನಂದವನ್ನೂ ಕಂಡಿದ್ದೇನೆ ಎಂದರು.
ಚಿತ್ರದ ತಾರಾಗಣದಲ್ಲಿ ಬಿ.ಎಸ್ ಕುರ್ಕಾಲ್, ವೇಣು ಶೆಟ್ಟಿ, ಶ್ರೀನಿವಾಸ ಮೂರ್ತಿ, ರಮೇಶ್ ಭಟ್, ಅರ್ಪಿತಾ ಗೌಡ, ಅಂಬುಜಾಕ್ಷಿ, ಉಷಾ ಭಂಡಾರಿ, ಟೆನ್ನಿಸ್ ಕೃಷ್ಣ, ಹೊನ್ನವಳ್ಳಿ ಕೃಷ್ಣ, ಸುಲೋಚನಾ ರೈ, ಮೈಸೂರ್ ಮಲ್ಲೇಶ್, ಜ್ಯೋತಿ ಗೌಡ, ಮಾ| ಚಿರಂಜೀವಿ, ರಾಮರಾವ್, ರವೀಂದ್ರನಾಥ್, ಸಿ.ಎ ಮಂಜುನಾಥ್, ಭೀಮಣ್ಣ ರಾಜ್ಕುಮಾರ್, ಚಂದ್ರಶೇಖರ್, ಪ್ರಶಾಂತ್, ಸುರಭಿ, ಮಂಜುಳಾ ಮತ್ತಿತರ ಕಲಾವಿದರು ಅಭಿನಯಿಸಿದ್ದಾರೆ. ರಾಷ್ಟ್ರದ ಹೆಸರಾಂತ ಗಾಯಕ ವಿದ್ಯಾನಿಧಿ ಬಿರುದಾಂಕಿತ ಶ್ರೀ ವಿದ್ಯಾಭೂಷಣ ವಿಶೇಷ ಪಾತ್ರದಲ್ಲಿ ಕಾಣಿಸಿ ಕೊಂಡಿದ್ದಾರೆ.
ವೇಣು ಶೆಟ್ಟಿ ಕಲ್ಪನೆಯ ಈ ಚಿತ್ರವು ಗೋ ಸಂರಕ್ಷಣೆ ಸರ್ವರ ಕರ್ತವ್ಯವಾಗಬೇಕು ಎನ್ನುವ ಧ್ಯೇಯವನ್ನಾಗಿಸಿ ಚಿತ್ರ ವಿರ್ಮಿಸಲಾಗಿದೆ. ಅರೆ ವಾಣಿಜ್ಯತೆಯನ್ನು ಹೊಂದಿ ಬಹುಪಾಲು ಕಲಾತ್ಮಕವಾಗಿ ರಚಿಸಲ್ಪಟ್ಟಿದೆ. ವಸಂತ್ರಾಜ್ ಅವರಿಂದ ರಚಿತ ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಮತ್ತು ನಿರ್ದೇಶನದಲ್ಲಿ ಚಿತ್ರೀಕೃತಗೊಂಡಿದ್ದು ಈ ಚಲನಚಿತ್ರಕ್ಕೆ ಪ್ರಸಾದ್ ಅವರು ಸಂಗೀತವನ್ನೀಡಿದ್ದಾರೆ. ಬಸವರಾಜ್ ಅರಸ್ ಸಂಕಲನದಲ್ಲಿ ನಿರ್ಮಿತ ಈ ಚಿತ್ರವನ್ನು ಬಿ.ಎಲ್ ಬಾಬು ಅವರು ತಮ್ಮ ಕ್ಯಾಮೆರಾದಲ್ಲಿ ಚಿತ್ರಿಕರಿಸಿದ್ದಾರೆ.ಮದನ್ ಮತ್ತು ಹರಿಣಿ ಕೋರಿಯೋಗ್ರಫಿ ಮಾಡಿದ್ದು, ಗೋಪಿ ಅವರು ಪರಿಣಾಮಕಾರಿಯಾಗಿ ದ್ವನಿನಾದ ನೀಡಿದ್ದಾರೆ. ಲಹರಿ ಸಂಸ್ಥೆಯು ಆಡಿಯೋಗ್ರಾಫಿ ನಡೆಸಿದ್ದಾರೆ.
ಕಾದಾಟ (ಫೈಟಿಂಗ್), ಹಾಸ್ಯ ಪ್ರಧಾನವಲ್ಲದೆ ಇಟ್ಟರೆ ಸೆಗಣಿಯಾದೆ ತಟ್ಟಿದರೆಬೆರಣಿಯಾದೆ ಸುಟ್ಟರೆ ನೊಸಲಿಗೆ ವಿಭೂತಿಯಾದೆ, ತಟ್ಟದೆ ಹಾಕಿದರೆ ಮೇಲೊಗೊಬ್ಬರವಾದೆ ನೀನಾರಿಗಾದೆಯೋ ಎಲೆಮಾನವಾ? ಪ್ರಾಚೀನ ಕಾಲದಿಂದಲೂ ಗೋಮಾತೆಯನ್ನು ನಾವು ಪೂಜಿಸುತ್ತಾ ಬಂದ ಹಿಂದಿನ ನೆನಪುಗಳ ದೃಶ್ಯಾವಳಿಗಳನ್ನು ಬಿಂಬಿಸುವ ಪುಣ್ಯಕೋಟಿ ಉಳಿಸಿ ಕೋಟಿ ಪುಣ್ಯ ಗಳಿಸಿ ಎಂದು ಅಪೇಕ್ಷಿಸಿ ಸಿದ್ಧಪಡಿಸಿದ ಈ ಚಲನಚಿತ್ರವು ದೈವಕ್ಯ ಶ್ರೀ ಆದಿ ಚುಂಚನಗಿರಿ ಬಾಲಗಂಗಾಧರನಾಥ ಸ್ವಾಮೀಜಿಗಳ ಅನುಗ್ರಹ, ಉಡುಪಿ ಶ್ರೀ ಪೇಜಾವರ ಅಧೋಕ್ಷಜ ಮಠಧೀಶ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ, ಶ್ರೀ ಕ್ಷೇತ್ರ ಒಡಿಯೂರು ಇದರ ಶ್ರೀ ಗುರುದೇವಾನಂದ ಸ್ವಾಮೀಜಿಗಳ ಆಶಿರ್ವಾಚನದೊಂದಿಗೆ ಶೀಘ್ರದಲ್ಲೇ ಕರ್ನಾಟಕ್ಕ ರಾಜ್ಯದಾದ್ಯಂತ ಬಿಡುಗಡೆ ಆಗಲಿದ್ದು ಮುಂಬಯಿ ಮಹಾನಗರದಲ್ಲೂ ತೆರೆ ಕಾಣಲಿದೆ.
ಪತ್ರಿಕಾಗೋಷ್ಠಿಯಲ್ಲಿ ಸ್ನೇಹಲ್ ವ್ಯಾಸ್, ಕರ್ನೂರು ಮೋಹನ್ ರೈ, ಕೇಶವ ಶೆಟ್ಟಿ, ಪ್ರವೀಣ್ ಶೆಟ್ಟಿ, ಚಂದ್ರ ರೈ ಮತ್ತಿತರರು ಉಪಸ್ಥಿತರಿದ್ದರು.