ಕುಂದಾಪುರ: ಕೃಷಿ ಪ್ರಧಾನವಾದ ಭಾರತದ ಹಳ್ಳಿಗಳಲ್ಲಿ ಇಂದು ಕೃಷಿ ಅವನತಿಯತ್ತ ಸಾಗುತ್ತಿದೆ. ಇದಕ್ಕೆ ಬಹುಮುಖ್ಯ ಕಾರಣ ಯುವ ಜನತೆ ಪಟ್ಟಣದತ್ತ ಮುಖ ಮಾಡುತ್ತಿರುವುದು. ಹಳ್ಳಿಯಲ್ಲಿ ಅವಕಾಶ ಇಲ್ಲ ಎನ್ನುವ ಭಾವನೆ ಯುವಜನತೆಗ ಬಂದಿದ್ದು, ಯುವಕರ ಮೂಲಭೂತ ಅಗತ್ಯತೆಗಳ ಬಗ್ಗೆ ಹಿರಿಯ ಕೃಷಿಕರು, ಪೋಷಕರು ಅರ್ಥ ಮಾಡಿಕೊಳ್ಳಬೇಕಾಗಿದೆ. ಯುವಕರ ನಿರೀಕ್ಷೆಗಳನ್ನು ಗೌರವಿಸುವ ಮೂಲಕ ಕಾರ್ಮಿಕರಿಗೆ ವೇತನ ನೀಡುವ ಕೃಷಿಕ ಹಿರಿಯರು, ಅವರ ಮಕ್ಕಳಿಗೂ ಸಂಭಾವನೆ ನೀಡಿದಾಗ ಮಾತ್ರ ಯುವಕ ಯುವತಿಯರು ಕೃಷಿಯತ್ತ ಆಸಕ್ತರಾಗುವ ಮೂಲಕ ವಲಸೆ ತಡೆಗಟ್ಟಲು ಸಾಧ್ಯ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೇಂದ್ರ ಕಚೇರಿಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಹೆಚ್.ಎಲ್. ಮಂಜುನಾಥ್ ಅಭಿಪ್ರಾಯಪಟ್ಟರು.
ಮಂಗಳವಾರ ಕೋಟೇಶ್ವರ ವಕ್ವಾಡಿಯಲ್ಲಿರುವ ಗುರುಕುಲ ವಿದ್ಯಾಸಂಸ್ಥೆಯ ಆವರಣದಲ್ಲಿ ಜರುಗಿದ ಶ್ರೀ ಕ್ಷೇತ್ರ ಗ್ರಾಮಾಭಿವೃದ್ಧಿ ಯೋಜನೆ, ಕುಂದಾಪುರ ತಾಲೂಕು, ಬಸ್ರೂರು ಅಪ್ಪಣ್ಣ ಹೆಗ್ಡೆ ಪ್ರತಿಷ್ಟಾನ, ಗುರುಕುಲ ವಿದ್ಯಾ ಸಂಸ್ಥೆ ವಕ್ವಾಡಿ, ಕೋಟೇಶ್ವರ ಹಾಗೂ ಕುಂದಾಪುರ ತಾಲೂಕು ಪ್ರಗತಿ ಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟದ ಸಹಯೋಗದಲ್ಲಿ ಹಮ್ಮಿಕೊಳ್ಳಲಾದ ಕೃಷಿ ಉತ್ಸವ ೨೦೧೪ನ್ನು ಉದ್ಘಾಟಿಸಿ ಮಾತನಾಡಿದರು.
ಸ್ವಾತಂತ್ರ್ಯ ಸಿಗುವ ಸಂದರ್ಭಕ್ಕೂ ಈಗಿನ ಸ್ಥಿತಿಗೂ ಹೋಲಿಸಿದರೆ ಭಾರತದಲ್ಲಿ ನಾಲ್ಕು ಪಟ್ಟರು ಜನಸಂಖ್ಯೆ ಹೆಚ್ಚಿದೆ. ದೇಶದಲ್ಲಿರುವ ಆರು ಲಕ್ಷ ಹಳ್ಳಿಗಳನ್ನು ಸಂರಕ್ಷಿಸಿಕೊಂಡಾಗ ಮಾತ್ರ ಜನ ಬದುಕಲು ಸಾಧ್ಯವಿದೆ. ಆದರೆ ಪರಿಸರ ವಾದಿಗಳು ಹಾಗೂ ಆ ಬಗ್ಗೆ ಕಳಿಕಳಿಯುಳ್ಳ ಜನರೆನ್ನಿಸಿಕೊಂಡವರು ೧೯೨೮ರಲ್ಲಿ ರಚಿತವಾದ ಅರಣ್ಯ ಕಾಯಿದೆ ಮುಂದಿಟ್ಟುಕೊಂಡು ಹಲವಾರು ಯೋಜನೆಗಳನ್ನು ಸುಪ್ರೀಂ ಕೋರ್ಟಿನ ಆದೇಶದೊಂದಿಗೆ ಕಳೆದ ೨೦ ವರ್ಷಗಳಿಂದ ನqಸುತ್ತಿದ್ದಾರೆ. ಇದೀಗ ಕಸ್ತೂರಿ ರಂಗನ್ ವರದಿ ಅನುಷ್ಟಾನಕ್ಕೂ ಸಿದ್ಧತೆ ನಡೆಸಲಾಗುತ್ತಿದ್ದು, ಇದರಿಂದ ಪಶ್ಚಿಮ ಘಟ್ಟಗಳ ತಪ್ಪಲಿನ ಜನರಿಗೆ ಸಮಸ್ಯೆಯಾಗಲಿದೆ. ಇದು ಜ್ಯಾರಿಗೊಂಡಿದ್ದರೆ ೬೦ ಸಾವಿರ ಕುಟುಂಬ ಬೀದಿಗೆ ಬರಲಿದೆ. ನೂರಾರು ಹಳ್ಳಿಗಳಿಗೆ ಯಾವುದೇ ಮೂಲಭೂತ ಸೌಲಭ್ಯಗಳಿಂದ ವಂಚಿತವಾಗುವ ಮೂಲಕ ಅಲ್ಲಿಯ ಜನ ಸಮುದಾಯ ಬಹುದೊಡ್ಡ ಸಮಸ್ಯೆ ಎದುರಿಸಲಿದೆ. ಈ ಬಗ್ಗೆ ಸಂಘಟಿತರಾಗಿ ಸುಪ್ರೀಂ ಕೋರ್ಟಿಗೆ ಹಾಗೂ ಸರ್ಕಾರಕ್ಕೆ ವರದಿ ಸಲ್ಲಿಸಬೇಕು ಎಂದರು.
ಸರ್ಕಾರದ ಸಮೀಕ್ಷೆಯಂತೆ ಕುಂದಾಪುರ ತಾಲೂಕಿನಲ್ಲಿ ೨೬ ಸಾವಿರ ಹೆಕ್ಟೇರ್ನಲ್ಲಿ ಭತ್ತ ಬೆಳೆಯುತ್ತಿದ್ದಾರೆ. ಆದರೆ ಸರ್ಕಾರದ ಬಹಳಷ್ಟು ಅವೈಜ್ಞಾನಿಕ ನೀತಿಯಿಂದಾಗಿ ಮತ್ತು ರೂಪಾಯಿಗೆ ಕೆಜಿ ಅಕ್ಕಿ ನೀಡುವ ಮೂಲಕ ಇಡೀ ಮಾರುಕಟ್ಟೆಯನ್ನೇ ತಲೆಕೆಳಗೆ ಮಾಡಲಾಗುತ್ತಿದೆ ಎಂದು ಆರೋಪಿಸಿದ ಅವರು, ಇದರಿಂದಾಗಿ ಅಕ್ಕಿ ಮಾರಾಟಕ್ಕೆ ಕಾಳ ಸಂತೆ ವ್ಯವಹಾರ ಹೆಚ್ಚಾಗುತ್ತಿರುವುದು ಅಪಾಯಕಾರಿ ಬೆಳವಣಿಗೆ ಎಂದರು.
ಕಂಪೆನಿಗಳು ಕೇಳಿದ ಬೆಲೆಗೆ ಸಾಪ್ಟ್ವೇರ್ಗಳನ್ನು ಖರೀದಿಸಲಾಗುತ್ತದೆ ಆದರೆ ಮಾರುಕಟ್ಟೆಯ ದರದಲ್ಲಿ ಅಕ್ಕಿ ಖರೀದಿ ಯಾಕೆ ಸಾಧ್ಯವಾಗುತ್ತಿಲ್ಲ? ಎಂದು ಪ್ರಶ್ನಿಸಿದ ಅವರು, ಇದೇ ರೀತಿ ಮುಂದುವರೆದರೆ ಭತ್ತ ಬೆಳೆ ಸ್ಥಗಿತಗೊಳ್ಳುವ ದಿನ ದೂರವಿಲ್ಲ ಎಂದ ಅವರು, ಕೇರಳದಲ್ಲಿ ಅರ್ಧ ದಿನದ ಅಡಿಕೆ ಕೊಯಿಲಿನ ಕೂಲಿ ೧೫೦೦ ರೂ ಆಗಿದ್ದು, ಸಣ್ಣರೈತರಿಗೆ ಇದರಿಂದ ಬಹಳಷ್ಟು ದೊಡ್ಡ ಸಮಸ್ಯೆ ಉಂಟಾಗುತ್ತಿದೆ. ಅದೇ ಸ್ಥಿತಿ ಕರ್ನಾಟಕದಲ್ಲಿಯೂ ನಿರ್ಮಾಣವಾದರೆ ಅಚ್ಚರಿಪಡಬೇಕಾಗಿಲ್ಲ. ಇದೆಲ್ಲವೂ ಸರಿಯಾಗಬೇಕಾದರೆ ಕೇಂದ್ರ ಮಟ್ಟದಲ್ಲಿರುವ ಬೆಲೆ ನಿಗಧಿ ಆಯೋಗ ಜಿಲ್ಲಾ ಮಟ್ಟದಲ್ಲಿ ಸ್ಥಾಪನೆಯಾಗಬೇಕು. ಈ ಬಗ್ಗೆ ಸರ್ಕಾರ ಹಾಗೂ ಜನಪ್ರತಿನಿಧಿಗಳು ಎಚ್ಚೆತ್ತುಕೊಳ್ಳಬೇಕು ಎಂದವರು ಆಗ್ರಹಿಸಿದರು.
ಶ್ರೀ ಕ್ಷೇತ್ರ ಗ್ರಾಮಾಭಿವೃದ್ಧಿ ಯೋಜನೆಯು ರಾಜ್ಯ ಮಟ್ಟದಲ್ಲಿ ಇದೀಗ ಜನಪ್ರಿಯಗೊಳ್ಳುಯತ್ತಿದ್ದು, ರಾಜ್ಯ ಸರ್ಕಾರ ಯೋಜನೆ ಕಾರ್ಯವನ್ನು ಗುರುತಿಸಿದೆ ಎಂದು ಹೇಳಿದ ಅವರು, ಪರಿಣಾಮವಾಗಿ ರಾಜ್ಯದ ೧೬೧ ಹೋಬಳಿಗಳಲ್ಲಿ ಕನಿಷ್ಟ ತಲಾ ೫೦ ಲಕ್ಷ ರೂಗಳ ರೈತ ಯಂತ್ರ ಮಳಿಗೆ ಸ್ಥಾಪನೆಗೆ ಸರ್ಕಾರ ಶ್ರೀ ಕ್ಷೇತ್ರ ಯೋಜನೆಯೊಂದಿಗೆ ಒಪ್ಪಂದ ಮಾಡಿಕೊಂಡಿದೆ ಎಂದು ಹೇಳಿದರು.
ಬಡ್ಡಿ ಯೋಜನೆಗೆ ಅವಕಾಶ : ಹಳ್ಳಿಗಳಲ್ಲಿರುವ ಮಹಿಳಾ ಸ್ವಸಹಾಯ ಸಂಘಗಳಿಗೆ ಮೂರು ಲಕ್ಷದ ವರೆಗೆ ಶೇ.೨ರ ಬಡ್ಡಿ ಸೌಲಭ್ಯ ಪಡೆಯಲು ಅನುಕೂಲ ಕಲ್ಪಿಸಲು ಡಾ, ಡಿ ವೀರೇಂದ್ರ ಹೆಗ್ಗಡೆ ಚಿಂತನೆ ನಡೆಸಿದ್ದು, ಪ್ರತೀ ಸ್ವಸಹಾಯ ಸಂಘಗಳ ಖಾತೆಯನ್ನು ಜನವರಿ ಒಂದರಿಂದ ಬ್ಯಾಂಕಿನ ಖಾತೆಗೆ ವರ್ಗಾವಣೆ ಮಾಡಲಾಗುತ್ತಿದೆ. ಇದಕ್ಕೆ ಪ್ರತೀ ಗ್ರಾಮಗಳ ಸ್ವಸಹಾಯ ಸಂಘಗಳ ಸದಸ್ಯರು ಗ್ರಾಮ ಸಭೆಯಲ್ಲಿ ಬಡತನ ರೇಖೆಗಿಂತ ಕೆಳಗಿದ್ದಾರೆ ಎನ್ನುವ ನಿರ್ಣಯ ಮಾಡಿ ಬ್ಯಾಂಇಗೆ ನೀಡಬೇಕಾಗುತ್ತದೆ. ಅದೇ ರೀತಿ ಪ್ರಗತಿ ಸಂಘಗಳೂ ೨.೫ ಲಕ್ಷದ ವರೆಗೆ ಸಾಲ ಸೌಲಭ್ಯ ಪಡೆಯಬಹುದಾಗಿದೆ. ಖಸೆಂಬರ್ ಅಂತ್ಯದೊಳಗೆ ಪ್ರಕ್ರಿಯೆ ಮುಗಿಯಲಿದ್ದು ಪ್ರತಿಯೊಬ್ಬ ಸದಸ್ಯರೂ ಸ್ಮಾರ್ಟ್ ಕಾಡ್ ಪಡೆಕೊಳ್ಳಬೇಕು ಎಂದವರು ಹೇಳಿದರು.
ಸಿಂಗಾರ ಹೂ ಅರಳಿಸಿ ಉದ್ಘಾಟನೆ ಮಾಡಿದ ಬೈಂದೂರು ಶಾಸಕ ಕೆ. ಗೋಪಾಲ ಪೂಜಾರಿ ಮಾತನಾಡಿ, ಕರಾವಳಿಯಲ್ಲಿ ಮೀನುಗಾರಿಕೆ, ಬೇಸಾಯ, ಕೃಷಿಗಳ ಜೊತೆಗೆ ಹೈನುಗಾರಿಕೆಯ ಮೂಲಕ ಹಾಲುತ್ಪಾದನೆ ಬಹುದೊಡ್ಡ ಕೊಡುಗೆ, ಮಹಿಳೆಯರನ್ನು ಶೈಕ್ಷಣಿಕವಾಗಿ ಆರ್ಥಿಕವಾಗಿ ಬಲಗೊಳಿಸುವಲ್ಲಿ, ಮಹಿಳೆಯರು ಸ್ವತಂತ್ರವಾಗಿ ಬಾಳುವುದಕ್ಕೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಹಳಷ್ಟು ಶ್ರಮಿಸಿದೆ. ಹಳ್ಳಿಗಳಲ್ಲಿ ಮಹಿಳೆಯರು ಸಾಲ ಪಡೆಯುವ ಜೊತೆಗೆ ಉಳಿತಾಯ ಯೋಜನೆ ಮಾಡುವಲ್ಲಿ ಯೋಜನೆ ಯಶಸ್ವಿಯಾಗಿದೆ ಎಂದರು.
ವಸ್ತು ಪ್ರದರ್ಶನ ಉದ್ಘಾಟಿಸಿದ ಕೊಂಕೋಡಿ ಪದ್ಮನಾಭ ಭಟ್ ಮಾತನಾಡಿ, ಸ್ವಸಹಾಯ ಸಂಘಗಳ ಮೂಲಕ ಕೃಷಿ ಕೈಗಾರಿಕೆಗಳಿಗೆ ಹೆಚ್ಚು ಒತ್ತು ನೀಡುವ ಮೂಲಕ ಗ್ರಾಮೀಣ ಭಾಗದಲ್ಲಿ ಬಹಳಷ್ಟು ಸುಧಾರಣೆಯಾಗುತ್ತಿದೆ. ಕರಾವಳಿಯಲ್ಲಿ ಮೀನುಗಾರಿಕೆಯ ಜೊತೆಗೆ ಭತ್ತದ ಕೃಷಿ ಹೆಚ್ಚಿತ್ತು. ಆದರೆ ಕೃಷಿಯ ಜೊತೆಗೆ ಸಣ್ಣ ಸಣ್ಣ ಕೈಗಾರಿಕೆ ಅಭಿವೃದ್ಧಿಗೆ ಪೂರಕ. ಮಣ್ಣಿಗೆ ಒಗ್ಗುವ ಕೃಷಿಯ ಅಗತ್ಯವಿದೆ. ಕೃಷಿಯಲ್ಲಿ ಯಾಂತ್ರೀಕತೆ ಅನಿವಾರ್ಯತೆಯಿದೆ. ಯಂತ್ರ ಮೇಳಗಳ ಮೂಲಕ ಕೃಷಿಕರನ್ನು ಜಾಗೃತಗೊಳಿಸುವ ಕೆಲಸವಾಗಬೇಕಿದೆ. ಹೈನುಗಾರಿಕೆ ಮತ್ತು ಕೃಷಿಯ ಜೊತೆಗೆ ಮಾಡಿದಾಗ ಸಾವಯಯ ಕೃಷಿಗೆ ಹೆಚ್ಚು ಪಟ್ಟು ಕೊಟ್ಟಂತಾಗುತ್ತದೆ ಎಂದರು.
ಅಡಿಕೆ ಖರೀದಿಯಲ್ಲಿ ದೇಶದಲ್ಲಿಯೇ ಪ್ರಥಮ ಸಂಸ್ಥೆ ಕ್ಯಾಂಪ್ಕೋ. ೧೨೦೦ ಕೋಟಿ ರೂಪಾಯಿಗಳ ವಹಿವಾಟು ಮಾಡುತ್ತಿರುವ ಕ್ಯಾಂಪಕೋದಿಂದ ಕಳೆದ ವರ್ಷಕ್ಕಿಂತ ಎಪ್ಪತು ರೂಪಾಯಿಗಳಷ್ಟು ಹೆಚ್ಚು ದರ ಪಡೆಯಲು ಸಾಧ್ಯವಾಗಿದೆ ಎಂದ ಅವರು, ಎಡೆಕೃಷಿಗಳನ್ನು ಮಾಡಿದಾಗ ಹೆಚ್ಚು ಲಾಭದಾಯಕವಾಗಲು ಸಾಧ್ಯ. ಕೃಷಿ ನಮಗೆ ಅನ್ನ ಕೊಡುವ ಜಾಗ. ಕ್ಯಾಂಪ್ಕೋ, ಎಆರ್ಡಿಎಫ್ ಮತ್ತು ವಿವೇಕಾನಂದ ಕಾಲೇಜಿನ ಜಂಟೀ ಆಶ್ರಯದಲ್ಲಿ ಕಾಲೇಜಿನ ಆವರಂದಲ್ಲಿ ಜನವರಿ ೨೪ರಿಂದ ೨೬ರ ವರೆಗೆ ಬೃಹತ್ ಕೃಷಿ ಯಂತ್ರ ಮೇಳ ೨೦೧೫ ಕಾರ್ಯಕ್ರಮ ಆಯೋಜಿಸಲಾಗಿದ್ದು ಇದರಿಂದ ಕೃಷಿಕರಿಗೆ ಬಹಳಷ್ಟು ಲಾಭವಾಗಲಿದೆ ಎಂದರು.
ಸಭೆಯ ಅಧ್ಯಕ್ಷತೆಯನ್ನು ಕುಂದಾಪುರ ತಾಲೂಕು ಪಂಚಾಯಿತಿ ಅಧ್ಯಕ್ಷ ಭಾಸ್ಕರ ಬಿಲ್ಲವ ವಹಿಸಿದ್ದರು. ಈಲ್ಲಾ ಪಂಚಾಯಿತಿ ಉಪಾಧ್ಯಕ್ಷ ಪ್ರಕಾಶ್ ಮೆಂಡನ್, ಕಾಳಾವರ ಗ್ರಾಮ ಪಂಚಾಯಿತಿ ಅಧ್ಯಕ್ಷ ಚಂದ್ರಶೇಖರ ಶೆಟ್ಟಿಗಾರ್, ಕುಂದಾಪುರ ತಾಲೂಕು ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷ ಚಂದ್ರಶೇಕರ, ವಕ್ವಾಡಿ ಗುರುಕುಲ ಶಿಕ್ಷಣ ಸಂಸ್ಥೆಯ ಜಂಟಿ ಮ್ಯಾನೆಜಿಂಗ್ ಟ್ರಸ್ಟಿಗಳಾದ ಅನುಪಮಾ ಎಸ್. ಶೆಟ್ಟಿ, ಕೆ. ಸುಭಾಶ್ಚಂದ್ರ ಶೆಟ್ಟಿ, ಯೋಜನಾಧಿಕಾರಿ ದುಗ್ಗೇ ಗೌಡ, ಯು.ಎಸ್. ಶೆಣೈ, ಮಹಾವೀರ ಆಜ್ರಿ ಉಪಸ್ಥಿತರಿದ್ದರು.
ಜಾನುವಾರು ಪ್ರದರ್ಶನಗಳನ್ನು ಉದ್ಘಾಟಿಸಿದ ಬಸ್ರೂರು ಮಹತೋಬಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಧರ್ಮದರ್ಶಿ ಬಿ. ಅಪ್ಪಣ್ಣ ಹೆಗ್ಡೆ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಆಕಾಶವಾಣಿ ಕಲಾವಿದ ಗಣೇಶ್ ಗಂಗೊಳ್ಳಿ ರೈತ ಗೀತೆ ಹಾಡಿದರು. ಯೋಜನಾಧಿಕಾರಿ ಅಮರಪ್ರಸಾದ ಶೆಟ್ಟಿ ವರದಿ ವಾಚಿಸಿದರು. ಸುಬ್ರಹ್ಮಣ್ಯ ಶೆಟ್ಟಿ ವಂದಿಸಿದರು. ಚಿತ್ತೂರು ವಲಯ ಮೇಲ್ವಿಚಾರ ಪ್ರಭಾಕರ ಮತ್ತು ಹಾಲಾಡಿ ವಲಯ ಮೇಲ್ವಿಚಾರಕ ಕಲ್ಮೇಶ್ ಕಾರ್ಯಕ್ರಮ ನಿರೂಪಿಸಿದರು.