ಮಂಗಳೂರು, ಡಿ.22: ‘ಕೋಮು ಸೌಹಾರ್ದಕ್ಕೆ ಹೆಸರುವಾಸಿಯಾದ ಕರ್ನಾಟಕದ ಕರಾವಳಿಯು ಪ್ರಸ್ತುತ ಕರಾಳ ದಿನಗಳನ್ನು ಎದುರು ನೋಡುತ್ತಿದೆ. ದೇಶವನ್ನು ಗುತ್ತಿಗೆ ಪಡೆದವರಂತೆ ಸದ್ದಿಲ್ಲದೆ ದೇಶವನ್ನು ಮಾರಾಟ ಮಾಡಲು ಪ್ರಯತ್ನಿಸುವ ಶಕ್ತಿಗಳು ದುಡಿಯುವ ಜನರ ಶ್ರಮ, ಸಂಸ್ಕೃತಿಯನ್ನು ಹಾಳು ಮಾಡುತ್ತಿದೆ. ಈ ಅಪಾಯದ ವಿರುದ್ಧ ಸುಮ್ಮನಿರದೆ ಹೋರಾಟ ಮಾಡಬೇಕಾಗಿದೆ ಎಂದು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಉಪಾಧ್ಯಕ್ಷೆ ಕೆ.ಎಸ್.ವಿಮಲಾ ಕರೆ ನೀಡಿದ್ದಾರೆ.
ರವಿವಾರ ನಗರದಲ್ಲಿ ಜರಗಿ ವಿಮಾ ನೌಕರರ ಸಂಘದ ಉಡುಪಿ ವಿಭಾಗದ 16ನೆ ಮಹಿಳಾ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.ಕನಸುಗಳನ್ನು ಬಿತ್ತಿ ಮನಸ್ಸುಗಳನ್ನು ಧ್ವಂಸ ಮಾಡುತ್ತಲೇ ಏಕಾಧಿಪತ್ಯದಲ್ಲಿ ಮೆರೆಯುವವರ ಮಧ್ಯೆ ಜನಸಾಮಾನ್ಯರು ಆತಂಕದ ದಿನಗಳನ್ನು ದೂಡುತ್ತಿದ್ದಾರೆ. ಸಂತೃಪ್ತಿ, ಸಮೃದ್ಧಿಯಲ್ಲಿ ಕಾಲ ಕಳೆಯಬೇಕಾಗಿದ್ದ ಜನರು ಸಂಘರ್ಷ -ಸಂಕಷ್ಟದ ಬದುಕು ಎದುರಿಸುತ್ತಿದ್ದಾರೆ. ಇಂತಹ ದುಡಿಯುವ ವರ್ಗಗಳಿಗೆ ವಿಮಾ ನೌಕರರು ಧ್ವನಿಯಾಗಬೇಕಾಗಿದೆ ಕೆ.ಎಸ್.ವಿಮಲಾ ಹೇಳಿದರು.
ದೇಶದಲ್ಲಿ ಪ್ರತಿನಿತ್ಯ 92 ಅತ್ಯಾಚಾರ ಪ್ರಕರಣಗಳು ವರದಿಯಾಗುತ್ತಿರುವುದು ಕಳವಳಕಾರಿ ಬೆಳವಣಿಗೆ. ಸಂಸ್ಕೃತಿಯ ರಕ್ಷಕರು ಎಂದು ಹೇಳಿಕೊಳ್ಳುವವರ ಮಧ್ಯೆಯೂ ಭಾರತದಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ಹೆಚ್ಚುತ್ತಿರುವುದು ಗಂಭೀರ ವಿಚಾರ. ಹಳ್ಳಿಗಾಡಿನ ಮಹಿಳೆಯರ ಆಕ್ರಂದನ ಯಾರಿಗೂ ಕೇಳಿಸುತ್ತಿಲ್ಲ ಎಂದವರು ವಿಷಾದ ವ್ಯಕ್ತಪಡಿಸಿದರು.
ಮನಸ್ಸಿನೊಳಗೆ ನೂರಾರು ಕೊಳಕು ವಿಚಾರಗಳನ್ನು ತುಂಬಿ ಅವುಗಳನ್ನು ಸ್ವಚ್ಛ ಮಾಡುವ ಬದಲು ಸ್ವಚ್ಛ ಭಾರತದ ಹೆಸರಿನಲ್ಲಿ ಜನರನ್ನು ವಂಚಿಸಲಾಗು್ತ್ತದೆ. ಒಂದೆಡೆ ಭಗವಾಧ್ವಜ ಮೆರೆಸಿ, ಇನ್ನೊಂದೆಡೆ ಭಗವದ್ಗೀತೆಯನ್ನು ರಾಷ್ಟ್ರೀಯ ಗ್ರಂಥವನ್ನಾಗಿಸಲು ಪ್ರಯತ್ನಿಸಿ, ಹೆಣ್ಣನ್ನು ಭೋಗದ ವಸ್ತುವನ್ನಾಗಿ ಚಿತ್ರಿಸಿದ ಎಸ್.ಎಲ್. ಭೈರಪ್ಪರಂತಹವರನ್ನು ರಾಷ್ಟ್ರೀಯ ಪ್ರೊಫೆಸರ್ ಸ್ಥಾನದಲ್ಲಿ ಕೂರಿಸುವ ಮೂಲಕ ಅಪಾಯಕಾರಿ ವಾತಾವರಣ ಸೃಷ್ಟಿಸಲಾಗುತ್ತಿದೆ. ಇಂತಹ ಆತಂಕದ ಸಂದರ್ಭದಲ್ಲಿ ವಿಮಾ ನೌಕರರು ಸಮಾಜದ ಸುತ್ತಮುತ್ತಲಿನ ಅನ್ಯಾಯ, ಅಕ್ರಮ, ಅನೀತಿಗಳ ವಿರುದ್ಧ ಸೆಟೆದುನಿಲ್ಲಬೇಕು ಎಂದವರು ಕರೆ ನೀಡಿದರು.
ಸಂಘದ ಅಧ್ಯಕ್ಷ ಕೆ.ವಿಶ್ವನಾಥ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ದಕ್ಷಿಣ ಮಧ್ಯ ವಲಯ ವಿಮಾನೌಕರರ ಒಕ್ಕೂಟದ ಜತೆ ಕಾರ್ಯದರ್ಶಿ ಜೆ. ಸುರೇಶ್ ಅತಿಥಿ ಭಾಷಣಮಾಡಿದರು. ವೇದಿಕೆಯಲ್ಲಿ ಸಂಘದ ಪ್ರ.ಕಾರ್ಯದರ್ಶಿ ಯು.ಗುರುದತ್, ಮಹಿಳಾ ಉಪಸಮಿತಿಯ ಸಂಚಾಲಕಿ ನಿರ್ಮಲಾ, ಸಂಘಟಕರಾದ ಕವಿತಾ, ಡಿ.ಕೆ. ರಾಧಾಮಣಿ ಉಪಸ್ಥಿತರಿದ್ದರು. ಸಮ್ಮೇಳನ ಸ್ವಾಗತ ಸಮಿತಿಯ ಗೌರವಾಧ್ಯಕ್ಷ ಯಶವಂತ ಮರೋಳಿ ಸ್ವಾಗತಿಸಿದರು.