ಮಂಗಳೂರು, ಡಿ.22: ದಾದಿಯರು ಉತ್ತಮ ರೀತಿಯಲ್ಲಿ ಆರೈಕೆ ಮಾಡಿದರೆ ರೋಗಿಗಳ ಅರ್ಧಕ್ಕರ್ಧ ರೋಗವನ್ನು ತಡೆಗಟ್ಟಿದಂತಾಗುತ್ತದೆ. ದಾದಿಯರು ರೋಗಿಗಳ ಜೊತೆ ಹೇಗೆ ವರ್ತಿಸಬೇಕು ಎಂಬುದರ ಬಗ್ಗೆ ತಿಳಿದುಕೊಳ್ಳಲು ಸಂವೇದನಾಶೀಲತೆ ಕಾರ್ಯಾಗಾರ ನಡೆಸಲಾಗುತ್ತದೆ. ಇದು ಯಶಸ್ವಿಯಾದರೆ ರಾಜ್ಯಾದ್ಯಂತ ಇದನ್ನು ವಿಸ್ತರಿಸಲಾಗುವುದು ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.
ಜಿಲ್ಲಾ ವೆನ್ಲಾಕ್ ಆಸ್ಪತ್ರೆ ಮತ್ತು ಇನ್ನರ್ವ್ಹೀಲ್ ಕ್ಲಬ್ ಆಫ್ ಮಂಗಳೂರು ಉತ್ತರ ಇದರ ವತಿಯಿಂದ ರವಿವಾರ ನಗರದ ವೆನ್ಲಾಕ್ ಆಸ್ಪತ್ರೆ ಆರ್ಎಪಿಸಿಸಿ ಸಭಾಂಗಣದಲ್ಲಿ ನಡೆದ ‘ದಾದಿಯರಿಗೆ ಸಂವೇದನಾಶೀಲತೆ’ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ನಾಡಿನ ಸುಸ್ಥಿರ ಸಮಾಜದ ಬಹುಪಾಲು ಜನತೆ ನಾನಾ ಕಾರಣಕ್ಕೆ ಮಾನಸಿಕ ಖಿನ್ನತೆಗೆ ಒಳಗಾಗುತ್ತಿದ್ದು, ಇದು ದೇಶಕ್ಕೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿರುವ ಭ್ರಷ್ಟಾಚಾರವನ್ನೂ ಮೀರಿಸುತ್ತಿದೆ ಎಂದು ಸಚಿವರು ಕಳವಳ ವ್ಯಕ್ತಪಡಿಸಿದರು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಬೆಂಗಳೂರಿನ ಎಸ್ಡಿ ಆ್ಯಂಡ್ ಅಸೋಸಿಯೇಟ್ಸ್ನ ಸಿಇಒ ಸ್ಟಾನ್ಲಿ ಡೇವಿಡ್ ಮಾತನಾಡಿ, ದಾದಿಯರಿಗೆ ಸೇವಾ ಮನೋಭಾವ ಮುಖ್ಯ. ದಾದಿಯರು ರೋಗಿಗಳ ಜೊತೆ ಉತ್ತಮ ರೀತಿಯಲ್ಲಿ ಸ್ಪಂದಿಸುವುದು ವೈಜ್ಞಾನಿಕ ದೃಷ್ಟಿಯಿಂದಲೂ ಅತ್ಯಗತ್ಯ ಎಂದರು.
ಸಂಸ್ಥೆಯ ತರಬೇತುದಾರ ಪ್ರೀತಿ ಪಿ. ಉಪನ್ಯಾಸ ನೀಡಿದರು. ಸಮಾರಂಭದಲ್ಲಿ ಕಾರ್ಯಕ್ರಮದ ಸಂಚಾಲಕಿ ಮಾಲಿನಿ ಹೆಬ್ಬಾರ್ ಉಪಸ್ಥಿತರಿದ್ದರು. ವೆನ್ಲಾಕ್ ಆಸ್ಪತ್ರೆಯ ಡಿಎಂಒ ಡಾ.ರಾಜೇಶ್ವರಿ ದೇವಿ ಸ್ವಾಗತಿಸಿದರು. ಇನ್ನರ್ವ್ಹೀಲ್ನ ಅಧ್ಯಕ್ಷ ನಳಿನಿ ಕಿಣಿ ವಂದಿಸಿದರು.