ಮಂಗಳೂರು,ಡಿ.18 : ಸಂತ ಅಲೋಶಿಯಸ್ (ಸ್ವಾಯತ್ತ) ಕಾಲೇಜಿನ ರಾಷ್ಟ್ರಮಟ್ಟದ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಉತ್ಸವ ಅಲೋಶಿಯನ್ ಫೆಸ್ಟ್ 2014-15 ಉತ್ಸವದ ಉದ್ಘಾಟನೆಯು ಗುರುವಾರ ಕಾಲೇಜು ಆವರಣದಲ್ಲಿ ನಡೆಯಿತು. ಸೆಂಟ್ರಲ್ ಬ್ಯಾಂಕ್ ಆಫ಼್ ಇಂಡಿಯಾದ, ಹಿರಿಯ ಪ್ರಾದೇಶಿಕ ವ್ಯವಸ್ಥಾಪಕರಾದ ಶ್ರೀ ವಸ್ತಿ ವೆಂಕಟೇಷ್ರವರು ಮುಖ್ಯ ಅತಿಥಿಯಾಗಿ ಈ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಸಂತ ಅಲೋಶಿಯಸ್ ಸಮೂಹ ಸಂಸ್ಥೆಗಳ ರೆಕ್ಟರ್ರೆ| ಫಾ| ಡೆನ್ಜಿಲ್ ಲೋಬೋ ಎಸ್.ಜೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದರು.
ಇಲೆಕ್ಟ್ರೋನಿಕ್ಸ್ ವಿಭಾಗದ ವಿದ್ಯಾರ್ಥಿಗಳು ರಾಸಾಯನಿಕ ವಸ್ತುಗಳನ್ನು ಉಪಯೋಗಿಸಿಕೊಂಡು ವಿನ್ಯಾಸಮಾಡಿದ ದೀಪ ಬೆಳಗಿಸುವ ಮುಖಾಂತರ ಸಮಾರಂಭವನ್ನು ಸಾಂಕೇತಿಕವಾಗಿ ಉದ್ಘಾಟಿಸಿಲಾಯಿತು. ಈ ದೀಪವು ಕಾಲೇಜು ಆಯೋಜಿಸಿದ ಏಳು ವಿವಿಧ ಉತ್ಸವಗಳ ಸಮ್ಮಿಲಿತದ ಸಂಕೇತ. ಈ ಸಂದರ್ಭದಲ್ಲಿ ಪ್ರಾಸ್ತವಿಕ ಮಾತುಗಳನ್ನಾಡಿದ ಕಾಲೇಜಿನ ಪ್ರಾಂಶುಪಾಲರಾದ ರೆ| ಫಾ| ಸ್ವೀಬರ್ಟ್ ಡಿಸಿಲ್ವಾ “ಸಂತ ಅಲೋಶಿಯಸ್ ಕಾಲೇಜು ರಾಷ್ಟ್ರ ಮಟ್ಟದಲ್ಲಿ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸವನ್ನು ಮಾಡುತ್ತಿದೆ. ಮಂಗಳೂರಿನಲ್ಲಿ ಧಾರ್ಮಿಕ ಕಲಹಗಳು ಸಾಮಾನ್ಯವಾಗಿದ್ದರೂ ನಮ್ಮ ವಿದ್ಯಾಸಂಸ್ಥೆಗಳಲ್ಲಿ ಎಲ್ಲಾ ಧರ್ಮದ ವಿದ್ಯಾರ್ಥಿಗಳು ಪರಸ್ಪರ ಗೌರವಿಸಿಕೊಂಡು ಸಹಬಾಳ್ವೆಯಿಂದ ಶಿಕ್ಷಣ ಪಡೆಯುತ್ತಿದ್ದಾರೆ, ವಿದ್ಯಾವಸ್ಥೆಯಲ್ಲಿ ಪಡೆದಂತಹಾ ಸರ್ವ ಧರ್ಮಸಮನ್ವಯತೆಯ ಶಿಕ್ಷಣವನ್ನು ತಮ್ಮ ಭವಿಷ್ಯದಲ್ಲೂ ಅನುಸರಿಸುವ ಅಗತ್ಯತೆಯಿದೆ” ಎಂದು ಅಭಿಪ್ರಾಯ ಪಟ್ಟರು.
ಕಾರ್ಯಕ್ರಮದ ಮುಖ್ಯಅತಿಥಿಗಳಾದ ವಸ್ತಿ ವೆಂಕಟೇಶ್ರವರು “ಈ ಕಾಲೇಜು ಮೌಲ್ಯಾಧಾರಿತ ಶಿಕ್ಷಣವನ್ನು ಸಮಾಜಕ್ಕೆ ನೀಡುತ್ತಾ ಸಮಾಜದಲ್ಲಿ ತನ್ನ ಸ್ಥಾನವನ್ನು ಉಳಿಸಿ-ಬೆಳೆಸಿಕೊಂಡು ಹೋಗುತ್ತಿರುವ ಅಪರೂಪದ ಕಾಲೇಜುಗಳಲ್ಲೊಂದಾಗಿದೆ. ಯುವಜನತೆಯ ಬೆಳವಣಿಗೆಯಲ್ಲಿ ಜಗತ್ತಿನ ಬೆಳವಣಿಗೆ ಅಡಗಿದೆ” ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ರೆಕ್ಟರ್ ರೆ| ಫಾ| ಡೆನ್ಜಿಲ್ ಲೋಬೋ ಎಸ್.ಜೆ. “ಪ್ರತಿಭೆ ಹುಟ್ಟಿನಿಂದ ಮಾನವನಿಗೆ ಇರುವ ಕೊಡುಗೆಯಲ್ಲ ಅದನ್ನ ತಾನು ಬೆಳೆದಂತೆ ಬೆಳೆಸುವಿದರಿಂದ ಅಸಾಮಾನ್ಯವಾಗಿ ಹೊರಹೊಮ್ಮಲು ಸಾಧ್ಯ. ವಿದ್ಯಾರ್ಥಿಗಳ ಯೋಚನಾಶಕ್ತಿಯೆ ಜಗತ್ತಿಗೆ ಮಾದರಿಯಾಗುವಲ್ಲಿ ಕಾರಣೀಭೂತವಾಗಿರುತ್ತದೆ” ಎಂದರು. ಮುಖ್ಯಅಥಿತಿಗಳು ಸಪ್ತಬಗೆಯ ಪ್ರಶಸ್ತಿ ಫಲಕಗಳನ್ನ ಅನಾವರಣಗೊಳಿಸುವುದರ ಮೂಲಕ ಸಾಂಕೇತಿಕವಾಗಿ ಉತ್ಸವಕ್ಕೆ ಚಾಲನೆ ನೀಡಿದರು.
ವೇದಿಕೆಯಲ್ಲಿ ಕಾಲೇಜಿನ ರಿಜಿಸ್ಟ್ರಾರ್ ಎ.ಎಮ್. ನರಹರಿ, ಕಾಲೆಜಿನ ವಿತ್ತ ನಿರ್ವಹಣಾಧಿಕಾರಿ ವಂದನೀಯ ಗುರುಗಳಾದ ವಾಲ್ಟರ್ ಅಂದ್ರಾದೆ, ಕಾಲೇಜಿನ ಎಲ್ಲಾ ಉಪಪ್ರಾಂಶುಪಾಲರು, ಸಪ್ತೋತ್ಸವದ ಸಂಯೋಜಕರು, ವಿದ್ಯಾರ್ಥಿ ನಾಯಕರು ಉಪಸ್ಥಿತರಿದ್ದರು. ಕಾಲೇಜಿನ ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಲಿಝೇನ್ ತಾನ್ಯಾ ಡಿ’ಸೋಜ ಸ್ವಾಗತಿಸಿದರು. ಕಾಲೇಜಿನ ವಿದ್ಯಾರ್ಥಿ ಸಂಘದ ಉಪನಾಯಕನಾದ ವಿನೀತ್ ಲಸ್ರಾಡೊ ವಂದನಾರ್ಪಣೆ ಗೈದರು. ವಿಧ್ಯಾರ್ಥಿ ಸಂಘದ ಕಾರ್ಯದರ್ಶಿ ಸಾತ್ಶ್ಯಾ ಅನ್ನಾ ತರೇನ್ ಕಾರ್ಯಕ್ರಮ ನಿರೂಪಿಸಿದರು.
ಈ ಉತ್ಸವ ಮೂರು ದಿನಗಳ ಕಾಲ ನಡೆಯಲಿದ್ದು ಕಲಾ ವಿಭಾಗದ ಆರ್ಟ್ಬೀಟ್, ವಾಣಿಜ್ಯ ವಿಭಾಗದ ಆಕ್ಮೆ, ವ್ಯವಹಾರ ನಿರ್ವಹಣಾ ವಿಭಾಗದ ಸ್ಪಿನ್ ಔಟ್, ವಿಜ್ಞಾನ ವಿಭಾಗದ ಇಂಪ್ರಿಂಟ್ಸ್, ಮತ್ತು ಕಂಪ್ಯೂಟರ್ ಸೈನ್ಸ್ ವಿಭಾಗದ ಕಾಂಪೋಸಿಟ್ ಎನ್ನುವ ಪ್ರತ್ಯೇಕ ಉತ್ಸವವನ್ನು ವಿವಿಧ ವಿಭಾಗಗಳ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿದೆ. ಅಲ್ಲದೇ, ಅಸ್ತಿತ್ವ ಎನ್ನುವ ಸಾಂಸ್ಕೃತಿಕ ಉತ್ಸವ, ಬ್ಯಾಟಲ್ ಆಫ್ ಬ್ಯಾಂಡ್ಸ್ ಎನ್ನುವ ಸಂಗೀತ ಉತ್ಸವ ಮತ್ತು ಅಲೋಶ್ಯಾಡ್ ಆಟೋಟ ಉತ್ಸವಗಳು ನಡೆಯಲಿದ್ದು, ಈ ವಿಭಾಗದಲ್ಲಿ ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.