ಮಂಗಳೂರು,ಡಿ.05 : ರಾಜ್ಯ ಸರಕಾರಗಳು ಮತ್ತು ಕೇಂದ್ರ ಸರಕಾರ ಏಕಪಕ್ಷೀಯವಾಗಿ ಬದಲಾವಣೆಗಳಿಂದ ಕಾರ್ಮಿಕರ ಟ್ರೇಡ್ ಯೂನಿಯನ್ ಹಕ್ಕುಗಳನ್ನು ಮೊಟಕುಗೊಳಿಸುತ್ತವೆ. ಅವರು ಕೆಲಸ ಮಾಡಲು ಇರುವ ಪೂರಕವಾದ ವಾತಾವರಣವನ್ನು ಹಾಳು ಮಾಡುತ್ತಾರೆ. ಕೇಂದ್ರ ಮತ್ತು ರಾಜ್ಯ ಸರಕಾರಗಳ ಜನ ವಿರೋಧಿ ಮತ್ತು ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಹೋರಾಡಲು ಒಂದು ದಿನ ದೇಶವ್ಯಾಪಿ ಆಂದೋಲನ ನಡೆಸಲು 2014ರ ಸೆಪ್ಟೆಂಬರ್ 15ರಂದು ನವದೆಹಲಿಯಲ್ಲಿ ನಡೆದ ಕೇಂದ್ರ ಕಾರ್ಮಿಕ ಸಂಘಟನೆಗಳ ಅಖಿಲ ಭಾರತ ಸಮಾವೇಶ ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ಶುಕ್ರವಾರ ನಗರದ ಪುರಭವನದ ಬಳಿಯಿಂದ ಮೆರವಣಿಗೆ ಹೊರಟು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಕಾರ್ಮಿಕ ಸಂಘಟನೆಗಳು ಪ್ರತಿಭಟನೆ ನಡೆಸಿದರು.
ಜಿಲ್ಲೆಯ ಕೇಂದ್ರ ಕಾರ್ಮಿಕ ಸಂಘಟನೆಗಳಾದ ಬಿಎಂಎಸ್, ಐಎನ್ಟಿಯುಸಿ, ಎಐಟಿಯುಸಿ, ಸಿಐಟಿಯು, ಹೆಚ್ಎಂಎಸ್ ಸಂಘಟನೆಗಳು ಹಾಗೂ ಬ್ಯಾಂಕ್, ವಿಮಾ, ಬಿಎಸ್ಎನ್ಎಲ್ ಮತ್ತು ಕೇಂದ್ರ ಹಾಗೂ ರಾಜ್ಯ ಸರಕಾರಿ ನೌಕರರ ಒಕ್ಕೂಟಗಳು ಈ ಪ್ರತಿಭಟನೆಯಲ್ಲಿ ಪಾಲ್ಗೋಂಡಿದ್ದರು. ಕಾರ್ಮಿಕ ಕಾಯ್ದೆಗಳಿಗೆ ರಾಜಸ್ಥಾನದ ವಿಧಾನಸಭೆಯು ಅಂಗೀಕರಿಸಿರುವ ಬದಲಾವಣೆಗಳು, ಕೆಲಸಕ್ಕೆ ಸೇರಿಸಿಕೊಳ್ಳುವ ಮತ್ತು ಕೆಲಸದಿಂದ ಕಿತ್ತುಕೊಳ್ಳುವ ಮಾಲೀಕರ ಅಧಿಕಾರವನ್ನು ಮತ್ತಷ್ಟು ಸರಳಗೊಳಿಸಿವೆ. ಇದರಿಂದಾಗಿ ಈಗ ಇರುವ ಕಾಯಂ ಕೆಲಸಗಳು ಮಾಯವಾಗಿ ಎಲ್ಲಾ ಗುತ್ತಿಗೀಕರಣವೇ ಪ್ರಧಾನವಾಗುತ್ತದೆ. ಫ್ಯಾಕ್ಟರಿ ಆ್ಯಕ್ಟ್ ತಿದ್ದುಪಡಿಗಳಿಂದಾಗಿ ಸಣ್ಣ ಮತ್ತು ಮಧ್ಯಮ ಗಾತ್ರದ ಕೈಗಾರಿಕೆಗಳ ಕೆಲಸ ಮಾಡುವ ಜಾಗಗಳಲ್ಲಿ ಸುರಕ್ಷತೆ ಇಲ್ಲದಂತಾಗುತ್ತದೆ. ಗುತ್ತಿಗೆ ಆಧಾರದ ಮೇಲೆ ಕೆಲಸಗಾರರನ್ನು ನೇಮಿಸಿಕೊಳ್ಳಲು ಈಗ ಇರುವ ಮಿತಿಯನ್ನು 20ರಿಂದ 50ಕ್ಕೆ ಏರಿಸಲು ನಿರ್ಧರಿಸಲಾಗಿದೆ.