ಮಂಗಳೂರು,ಡಿ.02: ಮಂಗಳೂರಿನ ಪಡೀಲ್-ಬಜಾಲ್ ರಸ್ತೆಯ ರೈಲ್ವೇ ಗೇಟ್ ಬಳಿ ರೈಲ್ವೇ ಅಂಡರ್ ಬ್ರಿಡ್ಜ್ ಕಾಮಗಾರಿಯ ವೇಳೆ ಮಣ್ಣು ಕುಸಿದು ಓರ್ವ ಕಾರ್ಮಿಕ ಮೃತಪಟ್ಟ ಘಟನೆ ಸೋಮವಾರ ರಾತ್ರಿ ನಡೆದಿದೆ. ಮೂರು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಮಣ್ಣಿನಡಿ ಸಿಲುಕಿದ್ದ ಮತ್ತೊಬ್ಬ ಕಾರ್ಮಿಕನನ್ನು ಅಗ್ನಿ ಶಾಮಕದಳದ ಸಿಬ್ಬಂದಿಗಳು ರಕ್ಷಿಸಿದ್ದಾರೆ.ಮೃತಪಟ್ಟ ಕಾರ್ಮಿಕನನ್ನು ಮಧ್ಯಪ್ರದೇಶದ ಬೈತುಲ್ ನಿವಾಸಿ ಮಂಗಲ್ (25) ಎಂದು ಗುರುತಿಸಲಾಗಿದೆ. ಸೋಮವಾರ ರಾತ್ರಿ 10.30ರ ಸಮಯದಲ್ಲಿ ಸುಮಾರು 30 ಅಡಿ ಎತ್ತರದಿಂದ ಮಣ್ಣು ಕುಸಿದು ಬಿದ್ದಿದ್ದು, ಸ್ಥಳದಲ್ಲಿಯೇ ಮಂಗಲ್ ಮೃತಪಟ್ಟರೆ, ನಾಮ್ದೇವ್ (18) ಎಂಬುವವರು ಗಾಯಗೊಂಡಿದ್ದಾರೆ.
ಕಳೆದ ಒಂದು ತಿಂಗಳಿನಿಂದ ಇಲ್ಲಿ ರೈಲ್ವೇ ಅಂಡರ್ ಪಾಸ್ ಕಾಮಗಾರಿ ನಡೆಯುತ್ತಿದ್ದು, ದುರ್ಘಟನೆ ಸಂದರ್ಭದಲ್ಲಿ 15 ಮಂದಿ ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದರು. ಸುಮಾರು 30 ಅಡಿ ಎತ್ತರದಿಂದ ಮಣ್ಣು ಕುಸಿದು ಬಿದಿದ್ದನ್ನು ಕಂಡ ಕಾರ್ಮಿಕರು ಕಿರುಚಿಕೊಂಡು ಎಲ್ಲರಿಗೂ ದೂರ ಓಡುವಂತೆ ಹೇಳಿದ್ದಾರೆ.ಆದರೆ, ಮಂಗಲ್ ಮೇಲೆ ಮಣ್ಣು, ಕಬ್ಬಿಣ್ಣದ ರಾಡ್ಗಳು ಬಿದ್ದಿವೆ. ಕೆಸರಿನಲ್ಲಿ ಆತ ಸಿಕ್ಕಿಹಾಕಿಕೊಂಡಿದ್ದರಿಂದ ದೂರ ಓಡಲಾರದೆ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ನಾಮ್ದೇವ್ ಮಂಗಲ್ನನ್ನು ರಕ್ಷಿಸಲು ಪ್ರಯತ್ನಿಸಿದರೂ ಅದು ವಿಫಲವಾಗಿದೆ.
ಬಹುಕಾಲದ ಬೇಡಿಕೆ : ಪಡೀಲ್ ರೈಲ್ವೇ ಕೆಳ ಸೇತುವೆಯು ಸ್ಥಳೀಯ ಜನರ ಬಹುಕಾಲದ ಬೇಡಿಕೆಯಾಗಿತ್ತು. ಕೇಂದ್ರ ರೈಲ್ವೆ ಸಚಿವರಾಗಿದ್ದ ಡಿ.ವಿ.ಸದಾನಂದ ಗೌಡರು ಕೆಲವು ತಿಂಗಳ ಹಿಂದೆ ಈ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದ್ದರು. 5.61 ಕೋಟಿ ರೂ. ವೆಚ್ಚದಲ್ಲಿ ಈ ಕಾಮಗಾರಿ ನಡೆಯುತ್ತಿದ್ದು, 2015ರ ಮಾರ್ಚ್ವೊಳಗೆ ಪೂರ್ಣಗೊಳಿಸುವ ಗುರಿ ಇದೆ.