ಮಂಗಳೂರು,ಡಿ.01 : ನಮ್ಮ ಆಡಳಿತ ವ್ಯವಸ್ಥೆ ಎಷ್ಟರವರೆಗೆ ಗೋವಧೆ ನಿಲ್ಲಿಸುವುದಿಲ್ಲವೋ ಅಲ್ಲಿಯವರೆಗೆ ನಮ್ಮ ದೇಶಕ್ಕೆ ಶ್ರೇಯಸ್ಸು ಇರುವುದಿಲ್ಲ ಎಂದು ಉಡುಪಿ ಶ್ರೀ ಅದಮಾರು ಮಠಾಧೀಶ ಶ್ರೀ ವಿಶ್ವಪ್ರಿಯತೀರ್ಥ ಸ್ವಾಮೀಜಿ ಹೇಳಿದರು.
ನಗರದ ಶರವು ಮಹಾಗಣಪತಿ ದೇವರ ಸನ್ನಿಧಿಯಲ್ಲಿ ಭಾನುವಾರ ಗೋವನಿತಾಶ್ರಯ ಟ್ರಸ್ಟ್ -ಗೋಪ್ರೇಮಿ ವೇದಿಕೆ ವತಿಯಿಂದ ಪಜೀರು-ಬೀಜಗುರಿ ಇಲ್ಲಿನ ನೂರಾರು ಗೋವುಗಳನ್ನು ಸಲಹಲು ಹಮ್ಮಿಕೊಂಡ ಗೋ ಸಂರಕ್ಷಣಾ ಅಭಿಯಾನದ ಸಮಾರೋಪ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು.
ಈ ದೇಶದ ಶ್ರೇಯಸ್ಸಿಗಾಗಿ ಹಾಗೂ ಆಶಾಂತಿ ದೂರವಾಗಬೇಕಾದರೆ, ದೇಶದಲ್ಲಿ ಕಾಲ ಕಾಲಕ್ಕೆ ಮಳೆಯಾಗಬೇಕಾದರೆ ಎಲ್ಲರೂ ಗೋವುಗಳನ್ನು ಸಂರಕ್ಷಿಸುವ ಕೆಲಸ ಮಾಡಬೇಕು ಎಂದರು.ಈ ದೇಶದಲ್ಲಿ ವಾಸಿಸುವವರು ಎಲ್ಲರೂ ಹಿಂದುಗಳೇ. ಇಲ್ಲಿನ ನೀರು, ಗಾಳಿ, ಮಣ್ಣು ಆಗುವುದಾದರೆ, ಇಲ್ಲಿನ ಸಂಸ್ಕೃತಿ ಆಗುವುದಿಲ್ಲವೇ ? ಎಂದು ಸ್ವಾಮೀಜಿ ಪ್ರಶ್ನಿಸಿದರು. ಪ್ರಾಣಿ ದಯಾ ಸಂಘದವರು ಕಂಬಳದ ಬಗ್ಗೆ ಅದು ಹಿಂಸೆ ಎಂದು ಮಾತನಾಡುತ್ತಾರೆ. ಆದರೆ ಗೋವುಗಳನ್ನು ಕಡಿಯುವ ಬಗ್ಗೆ ಯಾಕೆ ಮಾತನಾಡುತ್ತಿಲ್ಲ. ಒಂದು ವೇಳೆ ಮಾತನಾಡಿದರೆ ಪ್ರಾಣಿ ದಯಾ ಸಂಘವೇ ಇರಲಿಕ್ಕಿಲ್ಲ ಎಂದು ಸ್ವಾಮೀಜಿ ಹೇಳಿದರು.
ಶ್ರೀ ಶರವು ಕ್ಷೇತ್ರ ಶಿಲೆಶಿಲೆ ಮೊಕ್ತೇಸರ ಶರವು ರಾಘವೇಂದ್ರ ಶಾಸ್ತ್ರಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಗೋವು ಇದ್ದರೆ ಒಂದು ದೇವಸ್ಥಾನ ಇದ್ದ ಹಾಗೆ. ಹಾಲು ನೀಡುವ ಗೋವು ನಮ್ಮ ಮಾತೆಗೆ ಸಮಾನ. ನಮ್ಮ ಸಂಸ್ಕೃತಿ, ಸಂಸ್ಕಾರ ಉಳಿಯಬೇಕಾದರೆ ಗೋವುಗಳನ್ನು ಉಳಿಸಿ, ಬೆಳೆಸಬೇಕು ಎಂದರು.
ಜೈನ್ ಮಿಲನ್ ಅಧ್ಯಕ್ಷ ಎಲ್ .ಡಿ. ಬಲ್ಲಾಳ್ ಮುಖ್ಯ ಅತಿಥಿಯಾಗಿದ್ದರು. ಹಿತೇಂದ್ರ ಕೆ., ಶ್ರೀಧರ ಭಟ್, ಜೆ. ಕೆ. ಮೂರ್ತಿ ಉಪಸ್ಥಿತರಿದ್ದರು. ಗೋವನಿತಾಶ್ರಮ ಟ್ರಸ್ಟ್ ಕಾರ್ಯದರ್ಶಿ ಡಾ. ಪಿ. ಅನಂತಕೃಷ್ಣ ಪ್ರಸ್ತಾವಿಕವಾಗಿ ಮಾತನಾಡಿ , ಗೋವುಗಳನ್ನು ಸಲಹಲು ಕೆಲಸವನ್ನು ಸಾಕಷ್ಟು ಶ್ರಮ ಮತ್ತು ಕಷ್ಟಪಟ್ಟು ಮಾಡಲಾಗುತ್ತಿದೆ. ಇದಕ್ಕೆ ಸರ್ವರ ಸಹಕಾರಬೇಕು ಎಂದರು. ಟ್ರಸ್ಟ್ನ ಗೌರವಾಧ್ಯಕ್ಷ ಪ್ರೊ. ಎಂ. ಬಿ. ಪುರಾಣಿಕ್ ಸ್ವಾಗತಿಸಿದರು.