ವರದಿ ಹಾಗೂ ಚಿತ್ರ : ಸತೀಶ್ ಕಾಪಿಕಾಡ್
ಮಂಗಳೂರು : ವೆಸ್ಟ್ರನ್ ಇನ್ಸಿಟಿಟ್ಯೂಟ್ ಮಾಲಕ ವಾಲ್ಟರ್ ಸ್ಟೀಫನ್ ಮೆಂಡಿಸ್ ಮಂಗಳೂರು ಸುತ್ತಮುತ್ತ ಇರುವ ನಮ್ಮ ಜಾಗಗಳನ್ನು ಕಬಳಿಸಿದ್ದಾರೆ,ಜೊತೆಗೆ ಭಾರತ ಮಾತಾ ಶಿಕ್ಷಣ ಸೊಸೈಟಿಯನ್ನು ಅಸ್ತಿ ಪಾಸ್ತಿಗಳನ್ನು ಪೋರ್ಜರಿ ದಾಖಲೆ ಮೂಲಕ ಕಬಳಿಸುವ ಸಂಚು ಮಾಡುತ್ತಿದ್ದಾರೆ ಎಂದು ನಗರದ ಅಸುಪಾಸಿನ ನಿವಾಸಿಗಳು ದೂರಿದ್ದಾರೆ.
ಶನಿವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಕೆಲವು ವರ್ಷಗಳಿಂದ ಮೆಂಡಿಸ್ ನಮ್ಮ ಜೊತೆ ಅತ್ಮೀಯರಂತೆ ನಟಿಸಿ ನಮ್ಮ ಜಮೀನುಗಳನ್ನು ಪೋರ್ಜರಿ ದಾಖಲೆ ಸೃಷ್ಟಿಸಿ ವಶಪಡಿಸಿಕೊಂಡಿದ್ದಾರೆ. ಈ ಜಮೀನು ಬಗ್ಗೆ ಅವರಲ್ಲಿ ಕೇಳಿದರೆ ರೌಡಿಗಳನ್ನು ಬಿಟ್ಟು ಬೆದರಿಸುತ್ತಿದ್ದಾರೆ. ಈ ಬಗ್ಗೆ ದೂರು ನೀಡಲು ಪೊಲೀಸ್ ಠಾಣೆಗೆ ತೆರಳಿದರೆ ಪೊಲೀಸರು ನಮ್ಮ ದೂರು ದಾಖಲು ಮಾಡಲು ಹಿಂಜರಿಯುತ್ತಿದ್ದಾರೆ. ಮೆಂಡಿಸ್ ಹಣ ಬಲ ಹಾಗೂ ರೌಡಿಗಳ ಬೆಂಬಲದ ಜೊತೆಗೆ ರಾಜಕೀಯ ವ್ಯಕ್ತಿಗಳ ಕೃಪಾಕಟಾಕ್ಷದಿಂದ ನೂರಾರು ಎಕ್ರೆ ಜಮೀನುಗಳನ್ನು ನಕಲಿ ದಾಖಲೆ ಮೂಲಕ ರಿಜಿಸ್ಟ್ರಾರ್ ಮಾಡಿಸಿ ಕೊಂಡಿದ್ದಾರೆ. ಈ ಮೂಲಕ ಇಲ್ಲಿ ಸೇರಿರುವ ನಾವೆಲ್ಲರೂ ಮೆಂಡಿಸ್ ಅವರ ಕುಕೃತ್ಯಕ್ಕೆ ಬಲಿಯಾಗಿ ಜಮೀನು ಕಳೆದುಕೊಂಡಿದ್ದೇವೆ ಎಂದು ತಮ್ಮ ದುಖ ತೋಡಿಕೊಂಡರು.
ಬೆದರಿಸಿ ಸಹಿ ಹಾಕಿಕೊಂಡಿರುವ ಹಾಗೂ ನಕಲಿ ದಾಖಲೆ ಪತ್ರಗಳ ಮೂಲಕ ಜಮೀನು ವಶಪಡಿಸಿಕೊಂಡಿರುವ ಕೆಲವು ಪ್ರಕರಣಗಳು ನ್ಯಾಯಾಲಯದಲ್ಲಿದ್ದು, ಅಲ್ಲಿ ಇವತ್ತಲ್ಲ ನಾಳೆ ನಮಗೆ ನ್ಯಾಯ ಸಿಗಬಹುದೆಂಬ ನಂಬಿಕೆ ನಮಗಿದೆ. ಆದರೆ ಮೆಂಡಿಸ್ ಈಗಾಗಲೇ ಸ್ಥಳೀಯ ಚಾನೆಲ್ ಒಂದರಲ್ಲಿ ಪಾಲು ಹೊಂದಿದ್ದು, ಇದನ್ನೇ ಮುಂದಿಟ್ಟುಕೊಂಡು ತಾನೊಬ್ಬ ಮಾದ್ಯಮದ ವ್ಯಕ್ತಿ ಎಂದು ಹೇಳಿಕೊಂಡು ಪೊಲೀಸ್ ಠಾಣೆಗಳಲ್ಲಿ ಕೂಡ ತನ್ನ ದಬ್ಬಳಿಕೆ ಪ್ರದರ್ಶಿಸಿ, ದೂರು ದಾಖಲು ಮಾಡದಂತೆ ಪೊಲೀಸರ ಮೇಲೆ ಒತ್ತಡ ತರಲು ಪ್ರಯತ್ನಿಸಿದ್ದು, ಇದಕ್ಕೆ ವಿರೋಧ ವ್ಯಕ್ತಪಡಿಸಿದ ಪೊಲೀಸರ ವಿರುದ್ಧ ಮಾದ್ಯಮದ ವ್ಯಕ್ತಿಯ ಮೇಲೆ ಪೊಲೀಸರ ದೌರ್ಜನ್ಯ ಎಂದು ಮೇಲಾಧಿಕಾರಿಗಳಿಗೆ ದೂರು ನೀಡುವ ಮೂಲಕ ಮಾದ್ಯಮವನ್ನು ದುರುಪಯೋಗ ಮಾಡಿದ್ದಾರೆ ಎಂದು ಆರೋಪಿಸಿದರು..
ಕೆಪಿಟಿ ನಿವಾಸಿ ಶಾರದಾ ಶೆಟ್ಟಿ ಎಂಬವರು ಮಾತನಾಡಿ, `ನಮ್ಮ ಎರಡು ಎಕರೆ ಅರವತ್ತೈದು ಸೆಂಟ್ಸ್ ಜಾಗವನ್ನು ಡೂಪ್ಲಿಕೇಟ್ ದಾಖಲೆ ಮಾಡಿ ಲಪಟಾಯಿಸಿದ್ದಾರೆ. ಮೆಂಡಿಸ್ ಜೊತೆಗೇ ಇರುತ್ತಿದ್ದ ನನ್ನ ಮಗ ಜಗನ್ನಾಥ ಶೆಟ್ಟಿ ಮೆಂಡಿಸ್ ಮನೆಗೆ ಹೋಗಿ ಬರುವಾಗ ದಾರಿ ಮಧ್ಯೆ ಶವವಾಗಿ ಪತ್ತೆಯಾದ. ಆತ ಕೊಲೆಯಾಗಿದ್ದಾನೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ ಪೊಲೀಸ್ ಇಲಾಖೆ ಏನೂ ಮಾಡುತ್ತಿಲ್ಲ’ ಎಂದು ಆರೋಪಿಸಿದರು.
ಭಾರತ್ ಮಾತಾ ಎಜ್ಯುಕೇಶನ್ಗೂ ವಂಚನೆ :
ನಾನು ಭಾರತ ಮಾತಾ ಟ್ರಸ್ಟ್ನಡಿಯಲ್ಲಿ ಕಿನ್ನಿಗೋಳಿಯಲ್ಲಿ ನಡೆಸುತ್ತಿದ್ದ ಸೈಂಟ್ ಲಾರೆನ್ಸ್ ಪ್ರಾರ್ಥಮಿಕ ಶಾಲೆಯನ್ನು ಮತ್ತು ಪೊಂಪೈ ಆಂಗ್ಲ ಮಾಧ್ಯಮ ಶಾಲೆಗೆ ಸಂಬಂಧಪಟ್ಟ ಬೆಲೆಬಾಳುವ ಆಸ್ತಿಯನ್ನು ಕಬಳಿಸುವ ಉದ್ದೇಶದಿಂದ ಟ್ರಸ್ಟಿಯಾಗಿ ಸೇರಿಕೊಂಡ ಸ್ಟೀಫನ್ ಮೆಂಡಿಸ್, ಕೊನೆಗೆ ನಕಲಿ ಭಾರತ ಮಾತಾ ಟ್ರಸ್ಟ್ ಸ್ಥಾಪಿಸಿ ಬೆಲೆಬಾಳುವ ಭೂಮಿಯನ್ನು ಹೊಡೆಯಲು ಸಂಚು ಹೂಡಿದ್ದ’ ಎಂದು 85 ವರ್ಷ ಪ್ರಾಯದ ಜೆ.ಬಿ ಸಿಕ್ವೇರ ಅವರು ದೂರಿದ್ದಾರೆ.
ನಮ್ಮ ಒಬ್ಬರು ಪರಿಚಯದ ವ್ಯಕ್ತಿಯೊಬ್ಬರು ಮೆಂಡಿಸ್ ಅವರು ತುಂಬಾ ನಂಬಿಕಸ್ತ ವ್ಯಕ್ತಿ ಎಂದು ತಿಳಿಸಿದ ಹಿನ್ನೆಲೆಯಲ್ಲಿ ನಾವು ನಮ್ಮ ಭಾರತ್ ಮಾತಾ ಎಜ್ಯುಕೇಶನ್ ಟ್ರಸ್ಟಿನಲ್ಲಿ ಮೆಂಡಿಸ್ ಅವರನ್ನು ಟ್ರಸ್ಟಿಯಾಗಿ ನೇಮಕ ಮಾಡಿದೆವು. ಆದರೆ ನಮ್ಮ ಸಂಸ್ಥೆಗೆ ಸೇರಿದ ಮೇಲೆ ನಮ್ಮ ಸಂಸ್ಥೆಯ ಸುಮಾರು ೧೫ ಕೋಟಿ ರೂ.ಮೌಲ್ಯದ ಅಸ್ತಿಗಳನ್ನು ವಶಪಡಿಸಿಕೊಳ್ಳಲು ಸಂಚು ರೂಪಿಸುತ್ತಿರುವುದು ನಮ್ಮ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಟ್ರಸ್ಟ್ ಉಳಿಸುವ ಸಲುವಾಗಿ ಟ್ರಸ್ಟಿಗಳ ಸಭೆ ಕರೆದು ಮೆಂಡಿಸ್ ಅವರ ಸಪ್ಲಿಮೆಂಟರಿ ಟ್ರಸ್ಟ್ ಡೀಡನ್ನು 2013 ಡಿಸೆಂಬರ್ 3ರಂದು ತಾಲೂಕು ರಿಜಿಸ್ಟ್ರಿ ಆಫೀಸಿನಲ್ಲಿ ನೋದಾಯಿಸುವ ಮೂಲಕ 15-10- 2013ರಂದು ಮಾಡಿದ ಡೀಡನ್ನು ರದ್ಧು ಮಾಡಲಾಗಿದೆ.
ಆದರೆ ಮೆಂಡಿಸ್ ಅವರನ್ನು ಟ್ರಸ್ಟ್ನಿಂದ ಹೊರ ಹಾಕಿದ ನಂತರ ಅವರು ನಮ್ಮ ಅಸ್ತಿಗಳನ್ನು ವಶಪಡಿಸುವ ನಿಟ್ಟಿನಲ್ಲಿ ಭಾರತ ಮಾತಾ ಹೆಸರಿನ ಡುಪ್ಲಿಕೇಟ್ ಟ್ರಸ್ಟನ್ನು ನೊಂದಾಣಿ ಮಾಡಿದ್ದಾರೆ. ಈ ಬಗ್ಗೆ ಕೂಡ ಕೋರ್ಟಿನಲ್ಲಿ ದಾವೆ ಹೂಡಲಾಗಿದೆ ಎಂದು ಜೆ.ಬಿ ಸಿಕ್ವೇರ ಪತ್ರಿಕಾಗೋಷ್ಠಿಯಲ್ಲಿ ತಮ್ಮ ನೋವು ತೋಡಿಕೊಂಡರು.
ವಿಕ್ಟರ್ ಡಿಸೋಜಾ ಬಿಜೈ, ಮೈಕಲ್ ಡಿಸೋಜಾ ಬಿಜೈ, ಕಾರ್ಮಿನ್ ಡಿಸೋಜಾ ಬಿಜೈ, ದುಲ್ಸನ್ ಫೆರ್ನಾಂಡಿಸ್ ಬಂಟ್ವಾಳ್, ಬ್ರಿಜಿತ್ ಡಿಸೋಜಾ ಬೊಂದೇಲ್, ಶಾಲಿನಿ ಪ್ರಶಾಂತ್ ಸುವರ್ಣ, ಅತ್ತಾವರ, ಸತೀಶ್ ಶೆಟ್ಟಿ ಕದ್ರಿ, ಕೆನ್ಯೂಟ್ ಡಿಸೋಜಾ ಬಿಜೈ ಮುಂತಾದವರು ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡು ತಾವು ವಾಲ್ಟರ್ ಸ್ಟೀಫನ್ ಮೆಂಡಿಸ್ ಅವರಿಂದ ವಂಚನೆಯಾಗಿರುವ ಬಗ್ಗೆ ಮಾಹಿತಿ ನೀಡಿದರು.
ವರದಿ ಹಾಗೂ ಚಿತ್ರ : ಸತೀಶ್ ಕಾಪಿಕಾಡ್