ಮಂಗಳೂರು/ಮೂಲ್ಕಿ,ನ.29: ಮೂಲ್ಕಿ ಠಾಣೆ ವ್ಯಾಪ್ತಿಯ ಕೆರೆಕಾಡು ಜಳಕದ ಕೆರೆಯ ಸಮೀಪದ ನಾಲದೆ ಪಾಡಿಯ ನಿರ್ಜನ ಗುಡ್ಡದ ಕಾಡು ಪ್ರದೇಶದಲ್ಲಿ ಶುಕ್ರವಾರ ಕೊಳೆತು ಜೀರ್ಣಾವಸ್ಥೆಯಲ್ಲಿದ್ದ ಜೋಡಿ ಶವಗಳು ಕಂಡುಬಂದಿದೆ.
ಯುವಕ, ಯುವತಿಯ ಜೋಡಿ ಶವ ಇದಾಗಿದ್ದು, ಯುವಕ ಕೆಂಚನಕೆರೆ ಸಮೀಪದ ಅಂಗರಗುಡ್ಡೆ ನಿವಾಸಿ ಚಂದ್ರ (25) ಎಂದು ತಿಳಿದುಬಂದಿದೆ. ಆತನ ಪ್ಯಾಂಟಿನಲ್ಲಿದ್ದ ಪರ್ಸ್ನಲ್ಲಿ ಐಡೆಂಟಿಟಿ ಕಾರ್ಡ್ ಸಿಕ್ಕಿದ್ದು ಅದರಲ್ಲಿ ಮೂಡುಬಿದಿರೆ ಆಳ್ವಾಸ್ ಕಾಲೇಜಿನ ಪಂಚಕರ್ಮ ವಿಭಾಗದಲ್ಲಿನ ಕೆಲಸದಾಳು ಎಂಬ ಮಾಹಿತಿ ಇದೆ. ಯುವತಿಯ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಆಕೆಯೂ ಸುಮಾರು 25ರ ವಯೋಮಾನದವಳೆಂದು ಪೊಲೀಸರು ತಿಳಿಸಿದ್ದಾರೆ.
ಷಷ್ಠಿ ಜಾತ್ರಾ ಮಹೋತ್ಸವದ ಅಂಗವಾಗಿ ತೋಕೂರು ಶ್ರೀ ಸುಬ್ರಹ್ಮಣ್ಯ ದೇವಳದ ದೇವರು ಜಳಕಕ್ಕೆ ಕೆರೆಕಾಡುವಿನ ಜಳಕದ ಕೆರೆಗೆ ಶುಕ್ರವಾರ ರಾತ್ರಿ ಬರಲಿದ್ದು, ಅದಕ್ಕಾಗಿ ಅಲ್ಲಲ್ಲಿ ಬೆಳಕಿಗೋಸ್ಕರ ಕಂಬ ನೆಡಲು ಸ್ಥಳೀಯ ಯುವಕರಾದ ಬಾಲಕೃಷ್ಣ ದೇವಾಡಿಗ, ಸುಕೇಶ್ ಮತ್ತಿಬ್ಬರು ನಾಲದೆಯ ಗುಡ್ಡದ ಕಾಡು ಪ್ರದೇಶದಲ್ಲಿ ಸೂಕ್ತ ಮರ ಅರಸುತ್ತಿದ್ದರು, ಈ ವೇಳೆ ಹಳದಿ ಬಣ್ಣದ ನೈಲಾನ್ ಹಗ್ಗ ಮರವೊಂದರಲ್ಲಿ ಕಾಣಿಸಿತು. ಹತ್ತಿರ ಹೋಗಿ ನೋಡಿದಾಗ ಮರದಲ್ಲಿ ನೈಲಾನ್ ಹಗ್ಗದ ಕುಣಿಕೆಗಳು ಹಾಗೂ ಮರದ ಎರಡು ಚಿಕ್ಕಕೊಂಬೆಗಳಿಗೆ ಚೂಡಿದಾರದ ಶಾಲುಗಳನ್ನು ಬಿಗಿದು ಕಟ್ಟಿದ ಸ್ಥಿತಿಯಲ್ಲಿತ್ತು. ನೆಲದಲ್ಲಿ ಬಟ್ಟೆ ,ಚಪ್ಪಲಿಗಳು, ಎಲುಬಿನ ಹಂದರಗಳು ಕಂಡು ಹೆದರಿ ಮಾಧ್ಯಮ ಮಿತ್ರರ ಮೂಲಕ ಮೂಲ್ಕಿ ಠಾಣೆಗೆ ಮಾಹಿತಿ ನೀಡಿದರು.
ನಿರ್ಜನ ಕಾಡಿನಲ್ಲಿ ಯುವ ಜೋಡಿಗಳು ಯಾವುದೋ ಕಾರಣದಿಂದ ಬೇಸತ್ತು ಆತ್ಯಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಜೋಡಿ ಶವಗಳು ಕುಣಿಕೆಯಿಂದ ಕೆಳಗೆ ಬಿದ್ದಿದು ನೆಲದಲ್ಲಿ ಯುವಕನ ಪ್ಯಾಂಟು, ಸೊಂಟದ ಎಲುಬುಗಳು, ಅಂಗಿಯ ಒಳಗಡೆ ಎದೆಯ ಎಲುಬಿನ ಹಂದರಗಳು ಕಂಡು ಬಂದಿದ್ದು, ಮಣ್ಣಿನಲ್ಲಿ ಸೇರಿ ಹೋಗಿವೆ. ಪಕ್ಕದಲ್ಲಿಯೇ ಚೂಡಿದಾರದೊಳಗೆ ಯುವತಿಯ ಎಲುಬುಗಳು ಪತ್ತೆಯಾಗಿವೆ.
ಯುವಕನ ಪ್ಯಾಂಟಿನೊಳಗೆ ಇದ್ದ ಪರ್ಸಿನಲ್ಲಿ ಮೂರು ಮೊಬೈಲ್ಗಳು , ಬೈಕ್ನ ಕೀ, ಲೇಡಿಸ್ ವಾಚ್, ಸಿಮ್ ಕಾರ್ಡ್ ಪತ್ತೆಯಾಗಿದೆ. ಯುವತಿಯ ಬಟ್ಟೆಯಲ್ಲಿ ಕರಿಮಣಿ ಸರ ಪತ್ತೆಯಾಗಿದೆ. ಯುವಕನ ಪಾದರಕ್ಷೆ ಮತ್ತು ನೀರಿನ ಬಾಟಲ್ ಸ್ಥಳದಲ್ಲಿತ್ತು. ಎರಡು ಮೃತ ದೇಹಗಳ ತಲೆಬುರುಡೆಗಳು ಪತ್ತೆಯಾಗಿಲ್ಲದಿರುವುದು ಸೋಜಿಗದ ಸಂಗತಿ. ಕಾಡಿನ ಪ್ರದೇಶವಾಗಿರುವುದರಿಂದ ನರಿ, ಚಿರತೆ ಅಥವಾ ಇನ್ಯಾವುದೋ ಕಾಡು ಪ್ರಾಣಿ ತಿಂದಿರಬಹುದು ಎಂದು ಅಂದಾಜಿಸಲಾಗಿದೆ. ಸ್ಥಳಕ್ಕೆ ಮೂಲ್ಕಿ ಠಾಣಾಧಿಕಾರಿ ರಾಮಚಂದ್ರ ನಾಯಕ್, ಎಸ್ಐ ಪರಮೇಶ್ವರ್ ಕೇಸು ದಾಖಲಿಸಿ ತನಿಖೆ ನಡೆಸುತಿದ್ದಾರೆ.
http://kannadigaworld.com/kannada/121923.html