ಮಂಗಳೂರು,ನ.29 : ಆಡಳಿತ ಕೌಶಲ್ಯ ಮತ್ತು ಸಾಮಾಜಿಕ ಹೊಣೆಗಾರಿಕೆಯ ಮೂಲಕ ಸಂಧ್ಯಾ ಪೈ ಅವರು ವಿಶಿಷ್ಟ ಸಾಧನೆಯನ್ನು ನಡೆಸಿ ಅನುಕರಣೀಯರಾಗಿದ್ದಾರೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ| ಕೆ. ಭೈರಪ್ಪ ಶ್ಲಾಘಿಸಿದರು. ಮಂಗಳೂರು ಮೆನೇಜ್ಮೆಂಟ್ ಅಸೋಸಿಯೇಶನ್ ವತಿಯಿಂದ ಅವರು ಶುಕ್ರವಾರ ತರಂಗ ವಾರಪತ್ರಿಕೆಯ ವ್ಯವಸ್ಥಾಪಕ ಸಂಪಾದಕಿ ಡಾ| ಸಂಧ್ಯಾ ಎಸ್. ಪೈ ಅವರಿಗೆ ಶ್ರೇಷ್ಠ ಆಡಳಿತಗಾರ ಪ್ರಶಸ್ತಿಯನ್ನು (ಔಟ್ಸ್ಟಾಂಡಿಂಗ್ ಮ್ಯಾನೇಜರ್ ಅವಾರ್ಡ್) ಪ್ರದಾನಿಸಿ ಗೌರವಿಸಿದರು.
ಸಂಧ್ಯಾ ಪೈ ಅವರು ಸಂಪಾದಕಿಯಾಗಿ ಮಾತ್ರವಲ್ಲ ತಮ್ಮ ಸಂಸ್ಥೆಗಳ ಆಡಳಿತಗಾರರಾಗಿಯೂ ಯಶಸ್ಸನ್ನು ಪಡೆದಿದ್ದಾರೆ. ಸೂಕ್ಷ್ಮ ಸ್ಪಂದನ, ಉತ್ಸಾಹ, ಬದಲಾಗುತ್ತಿರುವ ಕಾಲಘಟ್ಟಕ್ಕೆ ಸರಿಯಾಗಿ ಹೊಂದಿಕೊಳ್ಳುವ ಮನೋಭಾವದಿಂದ ಅವರು ತಾನು ಯಶಸ್ಸು ಪಡೆಯುವುದರ ಜತೆಗೆ ಇತರರಿಗೂ ಯಶಸ್ಸು ಸಾಧಿಸಲು ಮಾರ್ಗದರ್ಶಕರಾಗಿದ್ದಾರೆ. ಅವರನ್ನು ಪ್ರಶಸ್ತಿಯ ಮೂಲಕ ಗೌರವಿಸುತ್ತಿರುವುದು ಅತ್ಯಂತ ಆಪ್ತವಾದ ಕ್ಷಣಗಳಾಗಿವೆ ಎಂದು ಭೈರಪ್ಪ ಸಂತಸ ವ್ಯಕ್ತಪಡಿಸಿದರು.ಸಂಸ್ಥೆಯ ವತಿಯಿಂದ ಸಂಧ್ಯಾ ಪೈ ಅವರನ್ನು ಅತಿಥಿಗಳು ಪ್ರಶಸ್ತಿ, ಶಾಲು, ಪುಷ್ಪಗುಚ್ಚ ಪ್ರಶಸ್ತಿ ಪತ್ರ, ಹಣ್ಣುಹಂಪಲು, ಸಂಸ್ಥೆಯ ಲಾಂಛನ ಸಹಿತ ಸಮ್ಮಾನಿಸಿದರು.
ಅಪೂರ್ವ ಪರಂಪರೆ: ಸಂಧ್ಯಾ ಪೈ ಅವರು ಉದಯವಾಣಿ ಬಳಗದ ತರಂಗ ವಾರಪತ್ರಿಕೆಯ ವ್ಯವಸ್ಥಾಪಕ ಸಂಪಾದಕಿಯಾಗಿ ಅಪೂರ್ವ ಪರಂಪರೆಯನ್ನು ಸಾಧಿಸಿದ್ದಾರೆ ಎಂದು ಮುಖ್ಯ ಅತಿಥಿಯಾಗಿದ್ದ ಕಾರ್ಪೊರೇಶನ್ ಬ್ಯಾಂಕಿನ ಕಾರ್ಯನಿರ್ವಾಹಕ ನಿರ್ದೇಶಕ ಬಿಭಾಷ್ ಕುಮಾರ್ ಶ್ರೀವಾಸ್ತವ ಅವರು ಅಭಿನಂದಿಸಿದರು. ಮಾಧ್ಯಮದಲ್ಲಿ ಮಹಿಳೆಯರ ನಿರ್ಣಾಯಕ ಪಾತ್ರದ ಬಗ್ಗೆ ಅವರು ಅನುಕರಣೀಯರಾಗಿದ್ದಾರೆ. ಅವರ ಬರಹಗಳು ಸಾಮಾಜಿಕ ಚಿಂತನೆಗೆ ಸ್ಫೂರ್ತಿಯಾಗಿವೆ. ಅವರ ಸಾಧನೆ ಅಪೂರ್ವ ಎಂದು ವ್ಯಾಖ್ಯಾನಿಸಿದರು.
ಬದ್ಧತೆ- ಸಂಧ್ಯಾ ಪೈ : ಸಾಮಾಜಿಕ ದೃಷ್ಟಿಕೋನ, ಮಾನವೀಯ ಸ್ಪಂದನ ಮತ್ತು ಬದ್ಧತೆಯ ಕಾರ್ಯ ನಿರ್ವಹಣೆಯೇ ಯಶಸ್ಸಿಗೆ ಮೂಲವಾಗುತ್ತದೆ ಎಂದು ಪ್ರಶಸ್ತಿ ಪುರಸ್ಕೃತೆ ಸಂಧ್ಯಾ ಪೈ ಅವರು ಹೇಳಿದರು. ಬರಹ ಮತ್ತು ಚಿಂತನೆಗಳು ಸಮಾಜಮುಖೀ ಆದಾಗ ಸಮಷ್ಠಿಯ ಹಿತ ಸಾಧನೆಯಾಗುತ್ತದೆ. ನಮ್ಮ ಸಂತೋಷದಿಂದ ಇತರರನ್ನು ಸಂತೋಷಪಡಿಸಿದಾಗ ಸಾರ್ಥಕ್ಯದ ಮನೋಭಾವ ಉಂಟಾಗುತ್ತದೆ. ಈ ಪ್ರವೃತ್ತಿ ಸಾರ್ವತ್ರಿಕವಾಗಬೇಕು. ಪ್ರಶಸ್ತಿ ಪುರಸ್ಕಾರಗಳು ಕ್ರಿಯಾಶೀಲತೆಗೆ ಹೆಚ್ಚಿನ ಪ್ರೋತ್ಸಾಹವನ್ನು ತುಂಬುತ್ತವೆ ಎಂದು ಸಂಘಟಕರಿಗೆ ಕೃತಜ್ಞತೆ ಸಲ್ಲಿಸಿದರು.
ಅಸೋಸಿಯೇಶನ್ ಅಧ್ಯಕ್ಷ ಎಂ.ಆರ್. ವಾಸುದೇವ ಸ್ವಾಗತಿಸಿದರು. ಮಾಜಿ ಅಧ್ಯಕ್ಷ ಡಾ| ದೇವರಾಜ್ ಕೆ. ಪ್ರಸ್ತಾವನೆಗೈದರು. ಡಾ| ಸತೀಶ್ ರಾವ್, ಪ್ರೊ| ಜೆ. ಎಚ್.ಜಿ. ಅಂಚನ್ ಅತಿಥಿ ಪರಿಚಯ ಮಾಡಿದರು. ಎಂ. ಶೇಖರ ಪೂಜಾರಿ, ಕೆ. ರಮೇಶ್ ರಾವ್ ಸ್ಮರಣಿಕೆ ನೀಡಿದರು. ಕಾರ್ಯದರ್ಶಿ ಆರ್. ಲೋಹಿದಾಸ್ ವಂದಿಸಿದರು. ಡಾ| ಸೀಮಾ ಎಸ್. ಶೆಣೈ ನಿರೂಪಿಸಿದರು. ವಿವಿಧ ಸಂಘ-ಸಂಸ್ಥೆಗಳ ವತಿಯಿಂದ ಸಂಧ್ಯಾ ಪೈ ಅವರನ್ನು ಪುಷ್ಪಗುಚ್ಚ ನೀಡಿ ಸಮ್ಮಾನಿಸಲಾಯಿತು.
ಮಾತೃದೇವೋಭವ : ಮಹಿಳೆಯರೇ ಸರ್ವಶ್ರೇಷ್ಠ ಆಡಳಿತಗಾರರು ಎಂದು ಸಂಧ್ಯಾ ಪೈ ವ್ಯಾಖ್ಯಾನಿಸಿದರು. ಗೃಹ ನಿರ್ವಹಣೆಯಲ್ಲಿ ಮತ್ತು ಕೌಟುಂಬಿಕ ಸಂಗತಿಗಳಲ್ಲಿ ಮಹಿಳೆಯರ ಮಾತೇ ಸ್ವೀಕಾರಾರ್ಹವಾಗಿರುತ್ತದೆ. ಅದಕ್ಕಾಗಿಯೇ ಮಾತೃದೇವೋಭವ ಎಂಬ ಪರಿಕಲ್ಪನೆ ಮೂಡಿದೆ. ಮಕ್ಕಳನ್ನು ಸುಸಂಸ್ಕೃತರನ್ನಾಗಿಸುವುದರ ಜತೆಯಾಗಿ ಆರೋಗ್ಯವಂತ ಸಮಾಜವನ್ನು ರೂಪಿಸುವಲ್ಲಿಯೂ ಮಹಿಳೆಯರ ಪಾತ್ರ ನಿರ್ಣಾಯಕ ಎಂದು ವಿಶ್ಲೇಷಿಸಿದರು.