ಪುತ್ತೂರು, ನ.26: ಬಾಲ್ಯವಿವಾಹ ಪಿಡುಗನ್ನು ಸಮರ್ಥವಾಗಿ ತಡೆಯಲು ಗ್ರಾಮಮಟ್ಟದಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ತಾ.ಪಂ. ಅಧ್ಯಕ್ಷೆ ಪುಲಸ್ತ್ಯಾ ರೈ ಹೇಳಿದರು. ಅವರು ಶಿಶು ಅಭಿವೃದ್ಧಿ ಇಲಾಖೆ ವತಿಯಿಂದ ಪುತ್ತೂರು ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ಬಾಲ್ಯವಿವಾಹ ತಡೆ ತರಬೇತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಬಾಲ್ಯ ವಿವಾಹವನ್ನು ತಡೆಯಲು ಇಚ್ಛಾಶಕ್ತಿ ಜತೆಗೆ ಕಾನೂನಿನ ಅರಿವು ಬೇಕಾಗಿದೆ. ಇದರ ಜತೆಗೆ ಜನರ ಮನೋಭಾವನೆ ಬದಲಾದಾಗ ಬಾಲ್ಯವಿವಾಹವನ್ನು ತಡೆಯಬಹುದು ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷೆ ರೇಖಾ ನಾಗರಾಜ್ ಮಾತನಾಡಿ, ಗ್ರಾಮ ಮಟ್ಟದ ಅಧಿಕಾರಿಗಳು ಹೆಚ್ಚಿನ ಒತ್ತು ನೀಡುವ ಮೂಲಕ ಬಾಲ್ಯವಿವಾಹ ತಡೆಯಬಹುದು. ಇದರಿಂದ ಹುಟ್ಟುವ ಮಕ್ಕಳ ಆರೋಗ್ಯ ಕಾಪಾಡುವ ಕೆಲಸವೂ ನಡೆಯುತ್ತದೆ ಎಂದರು.
ತಾಪಂ ಸದಸ್ಯೆ ರೊಹರಾ ನಿಸಾರ್ ಮಾತನಾಡಿ, ದ.ಕ.ಜಿಲ್ಲೆ ಯಲ್ಲಿ ಬಾಲ್ಯವಿವಾಹ ಇಂದಿಗೂ ನಡೆ ಯುತ್ತಿದೆ. ಅಲ್ಪಸಂಖ್ಯಾತ ಸಮು ದಾಯದಲ್ಲಿ ಸ್ವಲ್ಪ ಹೆಚ್ಚು. ಇದನ್ನು ತಡೆದು, ಸದೃಢ ಸಮಾಜ ನಿರ್ಮಾಣದ ಜವಾಬ್ದಾರಿ ನಮ್ಮ ಮೇಲಿದೆ ಎಂದರು.
ಬಾಲ ನ್ಯಾಯ ಮಂಡಳಿ ಸದಸ್ಯ ರೆನ್ನಿ ಡಿಸೋಜ, ಪಡಿ-ವೆಲೊರೆಡ್ ಸಂಯೋಜಕಿ ಕಸ್ತೂರಿ ಬೊಳುವಾರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು. ಶಿಶು ಅಭಿವೃದ್ಧಿ ಇಲಾಖೆಯ ಸಹಾಯಕ ಯೋಜನಾಧಿಕಾರಿ ಶಾಂತಿ ಹೆಗಡೆ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಸರಸ್ವತಿ ವಂದಿಸಿದರು.